ADVERTISEMENT

ಸಾಹಿತ್ಯ ಸಮ್ಮೇಳನ ಆಯೋಜನೆಗೆ ಸಿದ್ಧವಾಗಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 13:25 IST
Last Updated 4 ನವೆಂಬರ್ 2021, 13:25 IST
ಕಲಾ ಸಾಹಿತ್ಯ ಸಮ್ಮೇಳನದ ಸಂಬಂಧ ಕೋಲಾರದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡರು
ಕಲಾ ಸಾಹಿತ್ಯ ಸಮ್ಮೇಳನದ ಸಂಬಂಧ ಕೋಲಾರದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರು ಪಾಲ್ಗೊಂಡರು   

ಕೋಲಾರ: ‘ಕೋವಿಡ್‌ ಕಾರಣಕ್ಕೆ 2 ವರ್ಷಗಳಲ್ಲಿ ಕನ್ನಡ ಸಾಹಿತ್ಯದ ಕಾರ್ಯಕ್ರಮಗಳು ಸ್ಥಗಿತಗೊಂಡಿರುವುದು ಬೇಸರದ ಸಂಗತಿ. ಕೋವಿಡ್‌ ಮಾರ್ಗಸೂಚಿ ಪಾಲನೆಯೊಂದಿಗೆ ರಾಜ್ಯ ಮಟ್ಟದ 3ನೇ ಕಲಾ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಸಂಘ ಸಂಸ್ಥೆಗಳು ಸಿದ್ಧವಾಗಬೇಕು’ ಎಂದು ಸಾಹಿತಿ ಪೋಸ್ಟ್‌ ನಾರಾಯಣಸ್ವಾಮಿ ಸಲಹೆ ನೀಡಿದರು.

ಕಲಾ ಸಾಹಿತ್ಯ ಸಮ್ಮೇಳನದ ಸಂಬಂಧ ಇಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಜನ ಎಂದಿಗೂ ಸಾಹಿತ್ಯದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿರುತ್ತಾರೆ. ಸಾಹಿತ್ಯ ಸಮ್ಮೇಳನವೆಂದರೆ ಇಡೀ ನಾಡಿನಲ್ಲಿ ಸಂಚಲನ ಕಾಣಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಸಾಹಿತ್ಯ ಸಮ್ಮೇಳನಗಳನ್ನು ಸಂತೆ ಜಾಗೃತಿ ಎಂದು ಕೆಲವರು ಕರೆದಿದ್ದರೂ ಅದಕ್ಕೆ ಬರುವ ಜನ ಕಡಿಮೆ ಆಗಿಲ್ಲ. ಸಾಹಿತ್ಯವು ಮನುಷ್ಯನ ಬದುಕನ್ನು ಪ್ರತಿಬಿಂಬಿಸಬೇಕು. ಸಮ್ಮೇಳನಗಳು ಕನ್ನಡ ಭಾಷೆ ಉಳಿಸಲು ಪೂರಕ. ಸಮ್ಮೇಳನಗಳಿಂದ ಭಾಷೆಯ ಬೇರು ಗಟ್ಟಿಗೊಳ್ಳುತ್ತದೆ’ ಎಂದು ತಿಳಿಸಿದರು.

ADVERTISEMENT

‘ಕೋಲಾರದ ಹಿರಿಯ ಸಾಹಿತಿಗಳನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕು. ಕೋಲಾರದ ಸಾಹಿತಿಗಳನ್ನು ಸಮ್ಮೇಳನದಲ್ಲಿ ಅನಾವರಣಗೊಳಿಸಬೇಕು. ಜಿಲ್ಲೆಯ ಜನಪದ ಕಲಾವಿದರು ಮತ್ತು ತತ್ವಪದಕಾರರು ಹಾಗೂ ವಿವಿಧ ಕಲಾ ಪ್ರಕಾರದ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಬೇಕು’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಪಿ.ನಾರಾಯಣಪ್ಪ ಹೇಳಿದರು.

‘ಕನ್ನಡ ಸಾಹಿತ್ಯ ಮತ್ತು ಕಲಾ ಪ್ರಕಾರಕ್ಕೆ ಕೋಲಾರ ಜಿಲ್ಲೆ ಅಪಾರ ಕೊಡುಗೆ ನೀಡಿದೆ. ಜಿಲ್ಲೆಯ ಸ್ಥಳೀಯ ಸಾಂಸ್ಕೃತಿಕ ಮತ್ತು ಸಾಹಿತ್ಯವನ್ನು ರಾಜ್ಯ ಮಟ್ಟಕ್ಕೆ ಪರಿಚಿಸುವ ನಿಟ್ಟಿನಲ್ಲಿ ಸಮ್ಮೇಳನಗಳು ಅತ್ಯವಶ್ಯಕ’ ಎಂದು ಕನ್ನಡ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ವೆಂಕಟಕೃಷ್ಣಪ್ಪ ತಿಳಿಸಿದರು.

ಹರಿಕೃಷ್ಣ ಜನಪದ ಕಲಾ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ಸೀತರಾಮಯ್ಯ, ಕರ್ನಾಟಕ ಶಿಕ್ಷಕರ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ.ಶಿವಕುಮಾರ್, ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಗೌರವಾಧ್ಯಕ್ಷ ಕೆ.ಎನ್‌.ಪರಮೇಶ್ವರನ್, ಜಿಲ್ಲಾ ಯುವ ಬರಹಗಾರರ ಒಕ್ಕೂಟದ ಅಧ್ಯಕ್ಷ ಶರಣಪ್ಫ ಗಬ್ಬೂರು ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.