ಅಪಘಾತ
–ಪ್ರಾತಿನಿಧಿಕ ಚಿತ್ರ
ಕೋಲಾರ: ಬಂಗಾರಪೇಟೆ ತಾಲ್ಲೂಕಿನ ಕಲ್ಕೆರೆ ಬಳಿ ಬೆಂಗಳೂರು–ಚೆನ್ನೈ ಎಕ್ಸ್ಪ್ರೆಸ್ ವೇ ಕಾರಿಡಾರ್ನಲ್ಲಿ ಸೋಮವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿರುವ 22 ಮಂದಿಗೆ ಚಿಕಿತ್ಸೆ ಮುಂದುವರಿದಿದೆ.
ಪ್ರಕರಣದಲ್ಲಿ ಮೂವರು ಮೃತಪಟ್ಟಿದ್ದು, ಗಾಯಾಳುಗಳನ್ನು ನಗರದಲ್ಲಿರುವ ಎಸ್ಎನ್ಆರ್ ಜಿಲ್ಲಾಸ್ಪತ್ರೆ ಹಾಗೂ ಹೊರವಲಯದ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹೆದ್ದಾರಿಯ ತಿರುವಿನಲ್ಲಿ ಟೆಂಪೊ ಟ್ರಾವೆಲರ್ ಸ್ಕಿಡ್ ಆದ ಬಳಿಕ ಸರಣಿ ಅಪಘಾತ ನಡೆದಿತ್ತು. ರಕ್ಷಣೆಗೆ ಬಂದಿದ್ದ ಆ್ಯಂಬುಲೆನ್ಸ್ ಚಾಲಕ ವಿಕ್ರಂ ಪಾಲ್ ಸಿಂಗ್, ಟೆಂಪೊ ಟ್ರಾವೆಲರ್ ಚಾಲಕ ಶಿವರಾಜ್ ಹಾಗೂ ಸೆಕ್ಯೂರಿಟಿ ಸಿಬ್ಬಂದಿ ಸುರೇಂದ್ರ ಕುಮಾರ್ ಗುಪ್ತಾ ಸೇರಿ ಮೂವರು ಮೃತಪಟ್ಟಿದ್ದರು.
ಸುಂದರಮ್ಮ (45), ದಿನೇಶ್ (35), ರಾಜೇಶ್ವರಿ (45), ಮನೋಹರ್ (30), ಕುಂದಾಪುರದ ಗಣೇಶ್ (19), ವಸಂತ (38), ಮಾರಮ್ಮ (50), ಕಾಂಚನಾ (40), ಕೃಷ್ಣ, ಉಡುಪಿಯ ಅಶೋಕ (35), ತಿಪ್ಪೇಸ್ವಾಮಿ, ಕುಂದಾಪುರದ ಸುಭಾಷ್ (19), ಮುತ್ತುರಾಜ್, ಕುಂದಾಪುರದ ಪೃಥ್ವಿರಾಜ್ (23), ಹರೀಶ್, ಸೊರಬದ ಗಜೇಂದ್ರ (30), ಉಡುಪಿಯ ವಿಜಯಕುಮಾರ್ (38), ಅಕ್ಷಯ್, ಕೃಷ್ಣ, ಶಕುಂತಲಾ (35), ಕೊಲ್ಲೂರಿನ ದಿಲೀಪ್ (19) ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನ ಎಸ್ಕೆಎಸ್ ಕ್ಯಾಟರಿಂಗ್ನ ಸಿಬ್ಬಂದಿ ಕಾರ್ಯಕ್ರಮವೊಂದರಲ್ಲಿ ಕ್ಯಾಟರಿಂಗ್ ಮಾಡಲು ಕಲ್ಕೆರೆಗೆ ಬಂದಿದ್ದರು. ಕೆಲಸ ಮುಗಿಸಿಕೊಂಡು ಟೆಂಪೊ ಟ್ರಾವೆಲರ್ನಲ್ಲಿ ಬೆಂಗಳೂರಿನತ್ತ ವಾಪಸ್ ಹೋಗುವಾಗ ಈ ಅಪಘಾತ ಸಂಭವಿಸಿತ್ತು. ಇವರೆಲ್ಲರೂ ಬೆಂಗಳೂರು, ಉಡುಪಿ, ಕುಂದಾಪುರ ಹಾಗೂ ತಮಿಳುನಾಡಿನವರು ಎಂಬುದು ಗೊತ್ತಾಗಿದೆ.
ಈಚರ್ ಲಾರಿ ಚಾಲಕನ ಮೇಲೆ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಕೆಜಿಎಫ್ ಎಸ್ಪಿ ಶಿವಾಂಶು ರಜಪೂತ್ ಮತ್ತು ಡಿವೈಎಸ್ಪಿ ಪಾಂಡುರಂಗ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.