ADVERTISEMENT

ರಾಯಲ್ಪಾಡು ಠಾಣೆ ಎಸ್‌ಐ ಅಮಾನತು

​ಪ್ರಜಾವಾಣಿ ವಾರ್ತೆ
Published 3 ಜೂನ್ 2021, 17:17 IST
Last Updated 3 ಜೂನ್ 2021, 17:17 IST

ಕೋಲಾರ: ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಪೊಲೀಸ್‌ ಠಾಣೆ ಎಸ್‌ಐ ಸಿ.ಆರ್‌.ನರಸಿಂಹಮೂರ್ತಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನ ಗೌಡತಾತನಗುಡ್ಡ ಗ್ರಾಮದಲ್ಲಿ ಮೇ 31ರಂದು ಚೌಕಾಬಾರ ಆಡುತ್ತಿದ್ದ ವೆಂಕಟರಮಣ ಮತ್ತು ಕುಟುಂಬ ಸದಸ್ಯರಿಗೆ ಎಸ್‌ಐ ನರಸಿಂಹಮೂರ್ತಿ ಬೆದರಿಕೆ ಹಾಕಿ ಮೊಬೈಲ್‌ ಕಸಿದುಕೊಂಡು ಬಂದಿದ್ದರು.

ನಂತರ ಗೌಡತಾತನಗುಡ್ಡ ಗ್ರಾಮದ ಶಾಂತಪ್ಪ ಹಾಗೂ ರಾಮಕೃಷ್ಣಪ್ಪ ಎಂಬುವರು ವೆಂಕಟರಮಣ ಅವರ ಪರವಾಗಿ ನರಸಿಂಹಮೂರ್ತಿ ಅವರಿಗೆ ₹ 5 ಸಾವಿರ ಲಂಚ ಕೊಟ್ಟು ಮೊಬೈಲ್‌್ ವಾಪಸ್‌ ಕೊಡುವಂತೆ ಕೇಳಿದ್ದರು. ಆಗ ನರಸಿಂಹಮೂರ್ತಿ ಆ ಇಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸಂಬಂಧಪಟ್ಟ ಸಂಭಾಷಣೆಯನ್ನು ಶಾಂತಪ್ಪ ಹಾಗೂ ರಾಮಕೃಷ್ಣಪ್ಪ ಅವರು ಮೊಬೈಲ್‌ನಲ್ಲಿ ಧ್ವನಿ ಮುದ್ರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

ADVERTISEMENT

ಪ್ರಕರಣ ಸಂಬಂಧ ಸಮಗ್ರ ಮಾಹಿತಿ ಕಲೆಹಾಕಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಾರ್ತಿಕ್‌ರೆಡ್ಡಿ ಅವರು ನರಸಿಂಹಮೂರ್ತಿ ಅವರನ್ನು ಅಶಿಸ್ತು, ದುರ್ನಡತೆ, ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಅಮಾನತು ಮಾಡಿ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ.

ನರಸಿಂಹಮೂರ್ತಿ ಅವರು ಅಮಾನತು ರದ್ದಾಗುವವರೆಗೂ ಜಿಲ್ಲೆಯ ವ್ಯಾಪ್ತಿಯಲ್ಲಿ ಮುಂದುವರಿಯಬೇಕು. ಕೇಂದ್ರ ಸ್ಥಾನದಿಂದ ಹೊರ ಹೋಗುವಾಗ ಕಡ್ಡಾಯವಾಗಿ ಹಿರಿಯ ಅಧಿಕಾರಿಗಳ ಅನುಮತಿ ಪಡೆಯಬೇಕು ಎಂದು ಎಸ್‍ಪಿ ಆದೇಶದಲ್ಲಿ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.