ಕೋಲಾರ: ಜಿಲ್ಲೆಯಲ್ಲಿ ಶ್ರೀಗಂಧದ ಕಳ್ಳತನ ಹೆಚ್ಚುತ್ತಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಅಧಿಕಾರಿಗಳ ಕೈವಾಡವಿದೆ ಎಂದು ಅಖಿಲ ಕರ್ನಾಟಕ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಆರೋಪಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಸಂಚಾಲಕ ಶ್ರೀನಿವಾಸರೆಡ್ಡಿ, ‘ಹಲವಾರು ಬಾರಿ ಮನವಿ ನೀಡಿದರೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಶ್ರೀಗಂಧ ಬೆಳೆಗಾರರಿಗೆ ಸ್ಪಂದಿಸುತ್ತಿಲ್ಲ. ಕಳ್ಳರ ಜೊತೆ ಅರಣ್ಯ ಇಲಾಖೆಯೇ ಕೈಜೋಡಿಸಿದೆ. ಶ್ರೀಗಂಧದ ಬೆಳೆ ಕಟಾವು, ಸಾಗಣೆ, ಮಾರಾಟಕ್ಕೆ ಅರಣ್ಯ ಇಲಾಖೆಗೆ ಪರವಾನಗಿಗೆ ಅರ್ಜಿ ಹಾಕಿ ಕೆಲವೇ ದಿನಗಳಲ್ಲಿ ಕಳ್ಳತನ ನಡೆಯುತ್ತಿರುವುದು ಇದಕ್ಕೆ ಸಾಕ್ಷಿ. ಹಲವು ನಿರ್ಬಂಧಗಳಿದ್ದು, ಕಳ್ಳರಿಗೆ ರತ್ನಗಂಬಳಿ ಹಾಸಿಕೊಟ್ಟಂತಾಗಿದೆ’ ಎಂದು ದೂರಿದರು.
‘ಜಿಲ್ಲೆಯಲ್ಲಿ ಶ್ರೀನಿವಾಸಪುರ, ಕೋಲಾರ ಸೇರಿದಂತೆ ವಿವಿಧೆಡೆ ಹೆಚ್ಚು ಶ್ರೀಗಂಧ ಬೆಳೆಯಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಶ್ರೀಗಂಧದ ಕಳ್ಳತನ ಸಂಬಂಧ ಎಂಟು ಪ್ರಕರಣಗಳು ದಾಖಲಾಗಿವೆ. ದಾಖಲಾಗದ ಹಲವಾರು ಪ್ರಕರಣಗಳೂ ಇವೆ’ ಎಂದರು.
‘ಕಳ್ಳತನ ತಡೆಯಲು ಜಮೀನಿನಲ್ಲಿ ಸಿ.ಸಿ.ಟಿ.ವಿ, ತಡೆಗೋಡೆ, ಸೋಲಾರ್ ಫೆನ್ಸ್ ಹಾಕಿದ್ದರೂ ಶ್ರೀಗಂಧ ಕಳ್ಳರ ಅಟಾಟೋಪ ಮುಂದುವರಿದಿದೆ. ಚಿಪ್ ವ್ಯವಸ್ಥೆಯೂ ವಿಫಲವಾಗಿದೆ. ಲೇಸರ್ ಫೆನ್ಸಿಂಗ್ ಮುಖದ ಚಿತ್ರ ಬರುತ್ತದೆ. ಅದನ್ನು ಕೆಲವರು ಮಾತ್ರ ಅಳವಡಿಸಿಕೊಂಡಿದ್ದಾರೆ. ಡಿಎನ್ಎ ಬಾರ್ ಕೋಡಿಂಗ್ ವ್ಯವಸ್ಥೆ ಜಾರಿ ಮಾಡಬೇಕು. ಕಳುವಾಗಿರುವ ಶ್ರೀಗಂಧದ ತುಂಡುಗಳ ಡಿಎನ್ಎ ಪರಿಶೀಲಿಸಿದರೆ ಸಿಕ್ಕಿಬಿಳುತ್ತಾರೆ. ಮಾರಾಟವಾಗಿರುವ ಫ್ಯಾಕ್ಟರಿಗಳಿಗೆ ಹೋಗಿ ಪರಿಶೀಲಿಸಬೇಕು’ ಎಂದು ಮನವಿ ಮಾಡಿದರು.
‘ಶ್ರೀಗಂಧ ಬೆಳೆಯನ್ನು ಅರಣ್ಯ ಇಲಾಖೆಯಿಂದ ತೋಟಗಾರಿಗೆ ಇಲಾಖೆಗೆ ವರ್ಗಾಯಿಸಬೇಕು ಎಂದು ಹೋರಾಟ ನಡೆಸುತ್ತಿದ್ದೇವೆ. ಅರಣ್ಯ ಇಲಾಖೆ ಹಲವಾರು ನಿರ್ಬಂಧವೇರಿದ್ದು, ಶ್ರೀಗಂಧ ಬೆಳೆಯ ಜೊತೆಗೆ ಪೂರಕ ಸಸಿಗಳನ್ನು ಅವೈಜ್ಞಾನಿಕವಾಗಿ ವಿತರಿಸುತ್ತಿದೆ. ತೋಟಗಾರಿಕೆ ಇಲಾಖೆಯಾದರೆ ಹಣ್ಣಿನ ಗಿಡ ಕೊಡುತ್ತಾರೆ. ಹಣ್ಣಿನ ಗಿಡ ನೆಟ್ಟರೆ ಶ್ರೀಗಂಧ ಚೆನ್ನಾಗಿ ಬೆಳೆಯುತ್ತದೆ’ ಎಂದರು.
ಸಂಘದ ಕೋಲಾರ ಜಿಲ್ಲಾ ಅಧ್ಯಕ್ಷ ಟಿ.ಎಂ.ವೆಂಕಟೇಶ್ ಗೌಡ ಮಾತನಾಡಿ, ‘ಶ್ರೀಗಂಧಕ್ಕೆ ಬೇಡಿಕೆ ಇದೆ. ರಾಜ್ಯದಲ್ಲಿ 50 ಸಾವಿರ ರೈತರು ಬೆಳೆಯುತ್ತಾರೆ. ಆದರೆ, ಕಳ್ಳತನ ಹೆಚ್ಚಿದೆ. ದೊಡ್ಡ ಜಾಲವೇ ಇದ್ದು, ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ಶ್ರೀಗಂಧ ರೈತರಿಗೆ ಸಂಕಷ್ಟ ಎದುರಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರ ಜಿಲ್ಲಾ ಸಂಘದ ಅಧ್ಯಕ್ಷ ಕನ್ನಡ ರಮೇಶ್ ಮಾತನಾಡಿ, ‘ಈ ಸಮಸ್ಯೆಗೆ ಸಚಿವ ಈಶ್ವರ ಖಂಡ್ರೆ ಪ್ರಮುಖ ಕಾರಣ. ಶ್ರೀಗಂಧ ಬೆಳೆಯಲು ಪ್ರೋತ್ಸಾಹ ನೀಡಿ ಶ್ರೀಮಂತರಾಗುತ್ತೀರಿ ಎನ್ನುತ್ತಾರೆ ಆದರೆ, ರೈತರು ಶ್ರೀಗಂಧ ಬೆಳೆಯಿರಿ–ಕಳ್ಳರು ಶ್ರೀಮಂತರಾಗಲಿ ಎಂಬಂತಾಗಿದೆ. ಅರಣ್ಯ ಅಧಿಕಾರಿಗಳಿಂದ ತೊಂದರೆ ಆಗುತ್ತಿದೆ. ಚಿಂತಾಮಣಿ ತಾಲ್ಲೂಕಿನಲ್ಲಿ ಒಂದು ಊರಿನಲ್ಲಿ ನಾಲ್ಕು ಕಡೆ ಶ್ರೀಗಂಧದ ಕಳ್ಳತನ ನಡೆದಿದೆ’ ಎಂದರು.
‘ಅರಣ್ಯ ಇಲಾಖೆ ಸ್ಪಂದಿಸದಿದ್ದರೆ, ತೋಟಗಾರಿಕೆ ಇಲಾಖೆಗೆ ಒಪ್ಪಿಸದಿದ್ದರೆ ಶ್ರೀಗಂಧ ಬೆಳೆಗಾರರು ನೇಣು ಹಾಕಿಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರಮೇಶ್, ಕುಪ್ಪನಹಳ್ಳಿ ವೆಂಕಟೇಶ್ ಇದ್ದರು.
‘ಪೊಲೀಸರ ನಿರ್ಲಕ್ಷ್ಯ ಕೈವಾಡವಿದೆ’
‘ಕಳ್ಳತನ ಹೆಚ್ಚಲು ಪೊಲೀಸರ ನಿರ್ಲಕ್ಷ್ಯ ಹಾಗೂ ಕೈವಾಡವೂ ಇದೆ. ಹಿಂದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಎಂ.ನಾರಾಯಣ ಅವರಿಗೆ ಈ ಸಂಬಂಧ ದೂರು ನೀಡಿದಾಗ ಪೊಲೀಸ್ ಬೀಟ್ ಹಾಕಿದ್ದಾಗ ಸ್ವಲ್ಪ ಕಡಿಮೆ ಆಗಿತ್ತು. ಅವರ ವರ್ಗಾವಣೆ ಬಳಿಕ ಮತ್ತೆ ಕಳ್ಳತನ ಹೆಚ್ಚಾಗಿದೆ. ಈ ಸಂಬಂಧ ಈಗಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರನ್ನೂ ಭೇಟಿಯಾಗಿ ಮನವಿ ಕೊಡುತ್ತೇವೆ. ಗನ್ ಪರವಾನಗಿಗೂ ಒತ್ತಾಯಿಸುತ್ತೇವೆ’ ಎಂದು ಸಂಘದ ಸಂಚಾಲಕ ಶ್ರೀನಿವಾಸರೆಡ್ಡಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.