ಕೋಲಾರ: ನಗರಸಭೆಯಲ್ಲಿ ಮಂಗಳವಾರ ಅಧ್ಯಕ್ಷೆ ಆರ್.ಶ್ವೇತಾ₹ 4.7 ಕೋಟಿ ಮೊತ್ತದ ಉಳಿತಾಯದ 2023–24ನೇ ಸಾಲಿನ ಬಜೆಟ್ ಮಂಡಿಸಿದರು.
ನಗರಸಭೆ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ತಮ್ಮ ಮೂರನೇ ಬಜೆಟ್ ಮಂಡಿಸಿ ಮಾತನಾಡಿ, ‘ಹಿಂದಿನ ಹಣಕಾಸು ವರ್ಷದಲ್ಲಿ ₹ 38.19 ಕೋಟಿ ಅಖೈರು ಶಿಲ್ಕು ಇದೆ. 2023–24ನೇ ಹಣಕಾಸು ವರ್ಷದಲ್ಲಿ ವಿವಿಧ ತೆರಿಗೆ ಹಾಗೂ ಆದಾಯ ಮೂಲಗಳಿಂದ ₹ 119.41 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ₹ 114.44 ಕೋಟಿ ಖರ್ಚು ಮಾಡಲಾಗುವುದು’ ಎಂದರು.
‘ಸರ್ಕಾರದಿಂದ ಎಸ್ಎಫ್ಸಿ ಅನುದಾನ, ರಾಜ್ಯ ಹಣಕಾಸು ಆಯೋಗದ ಅನುದಾನ ₹ 2.59 ಕೋಟಿ, ವೇತನ ಅನುದಾನ ₹ 5.22 ಕೋಟಿ, ವಿದ್ಯುತ್ ಶಕ್ತಿ ಅನುದಾನ ₹ 21.58 ಕೋಟಿ, ಶಾಸಕರ ಅನುದಾನ ₹ 5 ಲಕ್ಷ, ಸ್ವಚ್ಛ ಭಾರತ್ ಮಿಷನ್ ಅನುದಾನ ₹ 25 ಲಕ್ಷ, 15ನೇ ಹಣಕಾಸು ಯೋಜನೆ ಅನುದಾನ ₹ 5.71 ಕೋಟಿ, ಅಮೃತ ಯೋಜನೆ ಅನುದಾನ ₹ 7.88 ಕೋಟಿ, ಪೌರಕಾರ್ಮಿಕರ ಆಶ್ರಯ ಯೋಜನೆ ₹ 2.74 ಕೋಟಿ, ಎಸ್ಎಫ್ಸಿ ವಿಶೇಷ ಅನುದಾನ ₹ 4.66 ಕೋಟಿ, ಬಂಡವಾಳ ಆದಾಯ ₹ 4 ಕೋಟಿ ನಿರೀಕ್ಷಿತ ಆದಾಯವಾಗಿದೆ’ ಎಂದು ವಿವರಿಸಿದರು.
ನಗರಸಭೆ ಸದಸ್ಯ ಅಪ್ಸರ್, ಪ್ರಸಾದ್ ಬಾಬು, ಪ್ರವೀಣ್ ಗೌಡ ಮಾತನಾಡಿ, ನಗರಸಭೆಯ ಇತಿಹಾಸದಲ್ಲಿ ಪ್ರಪ್ರಥಮವಾಗಿ ₹ 4 ಕೋಟಿ ಉಳಿತಾಯ ಬಜೆಟ್ ಮಂಡಿಸಿದ ಅಧ್ಯಕ್ಷೆ ಶ್ವೇತಾ ಅವರಿಗೆ ಅಭಿನಂದನೆ ಸಲ್ಲಿಸಿದರು.
ಸದಸ್ಯ ಮುರಳೀಗೌಡ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿ, ‘ಗಿಡ ನೆಟ್ಟು ಪೋಷಣೆ ಮಾಡಬೇಕು. ಟ್ರೀ ಗಾರ್ಡ್ ಅಳವಡಿಸಬೇಕು. ನಗರಸಭೆಯಲ್ಲಿ 9 ಟ್ಯಾಂಕರ್ ಇದ್ದು, ಪ್ರತಿ ದಿನ ಒಂದು ಟ್ಯಾಂಕರ್ ನೀರನ್ನು ಗಿಡಗಳಿಗೆ ಹಾಯಿಸಬೇಕು. ರಸ್ತೆ ವಿಸ್ತರಣೆಗೆ ಮರ ಕಡಿದಿದ್ದು, ಪರ್ಯಾಯವಾಗಿ ಗಿಡ ಬೆಳೆಸಬೇಕು. ಹಸೀರೀಕರಣ ಮಾಡಬೇಕು’ ಎಂದು ಸಲಹೆ ನೀಡಿದರು.
‘ಅಂಗವಿಕಲರು ಹೆಚ್ಚಿದ್ದಾರೆ. ಕಷ್ಟದಲ್ಲಿದ್ದು, ಮನೆ, ಶೌಚಾಲಯ, ತ್ರಿಚಕ್ರ ವಾಹನಕ್ಕೆ ಹೆಚ್ಚು ಅನುದಾನ ಮೀಸಲಿರಿಸಬೇಕು. ಈಗಿರುವ ₹ 25 ಲಕ್ಷ ಸಾಲದು, ₹ 50 ಲಕ್ಷ ತೆಗೆದಿಡಿ. ಕ್ರೀಡೆಗೆ ₹ 8 ಇಟ್ಟು, ಕನಿಷ್ಠ ₹ 25 ಲಕ್ಷಕ್ಕೆ ಹೆಚ್ಚಿಸಿ’ ಎಂದು ಆಗ್ರಹಿಸಿದರು..
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವನಾರಾಯಣ ನಿಧನಕ್ಕೆ ಮೌನಾಚರಣೆ ಮೂಲಕ ಸಂತಾಪ ವ್ಯಕ್ತಪಡಿಸಿದರು. ಶಾಸಕ ಕೆ.ಶ್ರೀನಿವಾಸಗೌಡ, ಉಪಾಧ್ಯಕ್ಷ ಜುಗ್ನು ಆಸ್ಲಾಂ, ಶಿವಾನಂದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.