
ಮುಳಬಾಗಿಲು: ತಾಲ್ಲೂಕಿನ ಊರಕುಂಟೆ ಮಿಟ್ಟೂರು ಗ್ರಾಮದಲ್ಲಿ ಮಂಗಳವಾರ ರೇಷ್ಮೆ ಬೆಳೆಗಾರರ ಕ್ಷೇತ್ರೋತ್ಸವ ಕಾರ್ಯಕ್ರಮ ನಡೆಯಿತು.
ತಾಲ್ಲೂಕು ರೇಷ್ಮೆ ಸಹಾಯಕ ನಿರ್ದೇಶಕ ಜಿ.ವಿ.ಶ್ರೀನಿವಾಸಗೌಡ ಮಾತನಾಡಿ, ದ್ವಿ ತಳಿ ಬೆಳೆಯು ರೇಷ್ಮೆ ಬೆಳೆಗಾರರಿಗೆ ಹೆಚ್ಚು ಲಾಭದಾಯಕವಾಗಿದ್ದು, ಹೆಚ್ಚು ರೈತರು ರೇಷ್ಮೆ ಬೆಳೆ ಕೃಷಿ ಮಾಡಲು ಮುಂದಾಗಿ ಹೆಚ್ಚು ಲಾಭ ಗಳಿಸಿ ಆರ್ಥಿಕವಾಗಿ ಸದೃಢರಾಗಬೇಕೆಂದು ತಿಳಿಸಿದರು.
ತಾಲ್ಲೂಕಿನಲ್ಲಿ ರೈತರು ಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯಿಲ್ಲದಿದ್ದರೂ ನಾನಾ ಬಗೆಯ ವಾಣಿಜ್ಯ ಬೆಳೆಗಳನ್ನು ಬೆಳೆದು ನಷ್ಟ ಅನುಭವಿಸುತ್ತಿದ್ದಾರೆ. ಹಾಗಾಗಿ ರೈತರು ಹೆಚ್ಚು ರೇಷ್ಮೆ ಕೃಷಿಯಲ್ಲಿ ತೊಡಗಿಸಿಕೊಂಡು ಲಾಭದ ಮಾರ್ಗವನ್ನು ಅನುಸರಿಸಬೇಕು ಎಂದರು.
ಸಾಮಾನ್ಯವಾಗಿ ಮಿಶ್ರ ತಳಿ ಬೆಳೆಗಳಿಗೆ ಹೋಲಿಕೆ ಮಾಡಿದರೆ, ದ್ವಿತಳಿ ಬೆಳೆ ನಿರ್ವಹಣೆ ಉತ್ತಮ ಲಾಭದ ಬೆಳೆಯಾಗಿದೆ. ರೈತರು ರೇಷ್ಮೆ ಇಲಾಖೆಯ ಮೂಲಕ ಅರಿವು ಪಡೆದು ಗುಣಮಟ್ಟದ ಗೂಡನ್ನು ಉತ್ಪಾದಿಸಿ ಎಂದರು.
ರೇಷ್ಮೆ ಇಲಾಖೆ ಉಪನಿರ್ದೇಶಕ ಸಿ.ಆರ್.ಆಂಜನೇಯ ರೆಡ್ಡಿ, ಹಿಪ್ಪು ನೇರಳೆ ತೋಟಗಳ ನಿರ್ವಹಣೆ ಹಾಗೂ ನೂತನ ತಾಂತ್ರಿಕತೆ ಕುರಿತು ಅರಿವು ಮೂಡಿಸಿ, ಉತ್ತಮ ರೇಷ್ಮೆ ಬೆಳೆ ಬೆಳೆಯಲು ಸಲಹೆ ನೀಡಿದರು.
ಕೇಂದ್ರ ರೇಷ್ಮೆ ಮಂಡಳಿ ವಿಜ್ಞಾನಿ ಡಾ.ಪರಮೇಶ್ವರ ನಾಯಕ್ ಮಾತನಾಡಿ, ಸುಣ್ಣಕಟ್ಟು ರೋಗ ಮತ್ತು ತೋಟಗಳಿಗೆ ತಗಲುವ ಬೂದಿ ರೋಗ ಹತೋಟಿ ಕ್ರಮ ನಿರ್ವಹಣೆ ಕುರಿತು ಜಾಗೃತಿ ಮೂಡಿಸಿದರು.
ತಾಲ್ಲೂಕು ರೇಷ್ಮೆ ನಿರೀಕ್ಷಕ ಎಂ.ಆರ್.ಪ್ರಸನ್ನ, ತಾಯಲೂರು ರೇಷ್ಮೆ ನಿರೀಕ್ಷಕ ಬಿ.ಜಿ.ಕಾರ್ತಿಕ್, ರೇಷ್ಮೆ ನಿರೀಕ್ಷಕ ಎಸ.ಹರೀಶ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ರೇಷ್ಮೆ ಬೆಳಗಾರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.