ADVERTISEMENT

ಶಿವರಾತ್ರಿ ರಾಜೇಂದ್ರ ಶ್ರೀ ಜಯಂತಿ

ಜೆಎಸ್ಎಸ್ ಪಬ್ಲಿಕ್ ಶಾಲೆಯಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 4:34 IST
Last Updated 16 ಸೆಪ್ಟೆಂಬರ್ 2022, 4:34 IST
ಮಾಲೂರು ಪಟ್ಟಣದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಪಬ್ಲಿಕ್ ಶಾಲಾ ಆವರಣದಲ್ಲಿ ಗುರುವಾರ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 107ನೇ ಜಯಂತಿ ಮಹೋತ್ಸವ ನಡೆಯಿತು
ಮಾಲೂರು ಪಟ್ಟಣದ ಜೆಎಸ್ಎಸ್ ಶಿಕ್ಷಣ ಸಂಸ್ಥೆಯ ಪಬ್ಲಿಕ್ ಶಾಲಾ ಆವರಣದಲ್ಲಿ ಗುರುವಾರ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯ 107ನೇ ಜಯಂತಿ ಮಹೋತ್ಸವ ನಡೆಯಿತು   

ಮಾಲೂರು: ‘ಸ್ವಾತಂತ್ರ್ಯ ಪೂರ್ವ ಸಮಾಜದಲ್ಲಿದ್ದ ಹಸಿವು, ಬಡತನ, ಅಜ್ಞಾನ ಹೋಗಲಾಡಿಸಲು ಶಿಕ್ಷಣವೇ ಆಶಾಕಿರಣ ಎಂದು ಅರಿತಿದ್ದ ಸುತ್ತೂರು ಶ್ರೀಗಳು 1926ರಲ್ಲಿಯೇ ವಿದ್ಯಾಭ್ಯಾಸಕ್ಕೆಂದು ಮೈಸೂರಿಗೆ ಬರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರಸಾದ ಮತ್ತು ವಸತಿ ವ್ಯವಸ್ಥೆ ಮಾಡಿದ್ದರು’ ಎಂದು ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಸಿದ್ದರಾಮಪ್ಪ ತಿಳಿಸಿದರು.

ಪಟ್ಟಣದ ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಸಮುಚ್ಚಯದ ಪಬ್ಲಿಕ್ ಶಾಲಾ ಆವರಣದಲ್ಲಿ ಗುರುವಾರ ನಡೆದ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 107ನೇ ಜಯಂತಿ ಮಹೋತ್ಸವದಲ್ಲಿ ಅವರು ಮಾತನಾಡಿದರು.

ಸುತ್ತೂರು ವೀರಸಿಂಹಾಸನ ಮಠವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ.ಈ ಪೀಠದ ದಿವ್ಯ ಪರಂಪರೆಯಲ್ಲಿ ಅನೇಕ ಮಠಾಧಿಪತಿಗಳು ಇಲ್ಲಿಯವರೆಗೂ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. ದಿವ್ಯ ಜೀವನ ನಡೆಸಿದ ಸಿದ್ಧ ಪುರುಷರಲ್ಲಿ ಸುತ್ತೂರಿನ 23ನೇ ಪೀಠಾಧಿಪತಿಯಾದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಯೂ ಒಬ್ಬರಾಗಿದ್ದಾರೆ ಎಂದು
ತಿಳಿಸಿದರು.

ADVERTISEMENT

ವೀರಶೈವ ಧರ್ಮದ ಕಾಯಕ ಮತ್ತು ದಾಸೋಹ ತತ್ವಗಳಿಂದ ಪ್ರೇರಣೆಗೊಂಡು ಸಕಲ ಜೀವಾತ್ಮರಿಗೆ ಲೇಸು ಬಯಸುವುದನ್ನೇ ತಮ್ಮ ಜೀವನದ ಗುರಿಯಾಗಿಟ್ಟುಕೊಂಡಿದ್ದರು. 1942ರಲ್ಲಿ ಉಚಿತ ಪ್ರಸಾದ ನಿಲಯ, 1954ರಲ್ಲಿ ಜೆಎಸ್‌ಎಸ್ ಮಹಾವಿದ್ಯಾಪೀಠ ಸ್ಥಾಪಿಸಿದರು. ಆರೋಗ್ಯ ಸೇವೆಗಾಗಿ ಆಸ್ಪತ್ರೆ ತೆರೆದು ಸಮಾಜದ ಎಲ್ಲಾ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಶ್ರೀಗಳ ಫಲದಿಂದ ಇಂದು ಜೆಎಸ್‌ಎಸ್ ಶಿಕ್ಷಣ ಸಂಸ್ಥೆಯು ಲಕ್ಷಾಂತರ ವಿದ್ಯಾರ್ಥಿಗಳು, ಸಾವಿರಾರು ನೌಕರರರಿಗೆ ದಾರಿದೀಪವಾಗಿದೆ ಎಂದು
ತಿಳಿಸಿದರು.

ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗಂಧದ ಕೊರಡು ಹೇಗೆ ತನ್ನನ್ನೇ ತೇದುಕೊಂಡು ಸುವಾಸನೆ ಕೊಡುತ್ತದೆಯೋ ಹಾಗೆಯೇ ವ್ಯಕ್ತಿಗತ ಬದುಕಿಗೆ ಮನ್ನಣೆ ನೀಡಿದ್ದು ಶ್ರೀಗಳ ಹಿರಿಮೆ ಎಂದರು.

ಕಾರ್ಯಕ್ರಮದಲ್ಲಿ ವಕೀಲರಾದ ಆರ್.ಸಿ. ಅಪ್ಪಾಜಿಗೌಡ, ಬಿಇಒ ಎಚ್.ಎಸ್. ಚಂದ್ರಕಲಾ, ಸಹಾಯಕ ಪ್ರಾಧ್ಯಾಪಕ ನಂದೀಶ್ ಅಂಚೆ, ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಂಯೋಜನಾಧಿಕಾರಿ ಎಸ್.ಎಚ್. ಮಹೇಶ್ವರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.