ADVERTISEMENT

ಶ್ರೀನಿವಾಸಪುರ | ಕೆರೆ ಒತ್ತುವರಿ ತೆರವಿಗೆ ಸಹಕರಿಸಿ: ತಹಶೀಲ್ದಾರ್‌

​ಪ್ರಜಾವಾಣಿ ವಾರ್ತೆ
Published 10 ಮೇ 2025, 15:40 IST
Last Updated 10 ಮೇ 2025, 15:40 IST
ಜಿ.ಎನ್.ಸುಧೀಂದ್ರ
ಜಿ.ಎನ್.ಸುಧೀಂದ್ರ   

ಶ್ರೀನಿವಾಸಪುರ: ‘ಹೈಕೋರ್ಟ್ ಹಾಗೂ ಲೋಕಾಯುಕ್ತರ ಆದೇಶದ ಮೇರೆಗೆ ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲು, ಅಳತೆ ಮಾಡಲು, ಸರ್ವೆ ನಡೆಸಲು, ಸಂರಕ್ಷಣೆ ಮಾಡಲು ಮುಂದಾಗಿದ್ದೇವೆ. ಅದರಂತೆ ನಮ್ಮ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು’ ಎಂದು ತಹಶೀಲ್ದಾರ್ ಜಿ.ಎನ್.ಸುಧೀಂದ್ರ ಮನವಿ ಮಾಡಿದರು.

ಪಟ್ಟಣದ ತಹಶೀಲ್ದಾರ್ ಸಭಾಂಗಣದಲ್ಲಿ ಕೆರೆಗಳ ಒತ್ತುವರಿ ವಿಚಾರಕ್ಕೆ ಸಂಬಂದಿಸಿದಂತೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಒಂದು ವೇಳೆ ಕೆರೆಯಲ್ಲಿ ಬೆಳೆ ಬೆಳೆದಿದ್ದರೆ. ನಾವು ಸರ್ವೆ ಮಾಡಲು ಬಂದಾಗ ಅಡ್ಡಿಪಡಿಸಿದರೆ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ. ನಮ್ಮ ಕೆಲಸಕ್ಕೆ ಅಡ್ಡಪಡಿಸಬೇಡಿ. ನಾವು ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿ ಮೂಲಕ ಹೈಕೋರ್ಟ್, ಲೋಕಾಯುಕ್ತ ಸಂಸ್ಥೆಗೆ ಮಾಹಿತಿ ನೀಡಬೇಕಾಗಿದೆ. ಈ ವಿಚಾರವಾಗಿ ಜಿಲ್ಲಾಧಿಕಾರಿ ಹೆಚ್ಚಿನ ಕಾಳಜಿ ವಹಿಸಿದ್ದಾರೆ’ ಎಂದರು.

ADVERTISEMENT

‘ರಾಜಕಾಲುವೆಗಳನ್ನು ಕೆರೆಗಳಿಗೆ ನೀರು ತುಂಬಿಸಲು ಉಪಯೋಗಿಸಲಾಗುತ್ತದೆ. ಒಂದು ವೇಳೆ ರಾಜಕಾಲುವೆಗಳು ಒತ್ತುವರಿಯಾಗಿದ್ದರೆ ಅವುಗಳ ಒತ್ತುವರಿಯನ್ನು ತೆರವುಗೊಳಿಸಲಾಗುವುದು. ಈಗಾಗಲೇ 200 ಹೆಚ್ಚು ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಕೆಲವು ಕಡೆ ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಅದನ್ನು ಅತಿ ಶೀಘ್ರವಾಗಿ ಒತ್ತುವರಿ ತೆರವುಗೊಳಸಲಾಗುವುದು’ ಎಂದು ಹೇಳಿದರು.

‘ತಾಲ್ಲೂಕಿನಲ್ಲಿ ಕೆರೆ, ಕುಂಟೆಗಳು ಸೇರಿದಂತೆ 600ಕ್ಕೂ ಹೆಚ್ಚು ಇದ್ದು, ಕೆಲವು ಕೆರೆಗಳು ಜಿಲ್ಲಾ ಪಂಚಾಯಿತಿ ಅಧೀನದಲ್ಲಿವೆ. ಕೆರೆಗಳನ್ನು ಒತ್ತವರಿ ತೆರವುಗೊಳಿಸಿ ಆ ಕೆರೆಗಳಿಗೆ ಅಳತೆಯ ಬಗ್ಗೆ ಬೋರ್ಡ್‍ಗಳನ್ನು ಹಾಕಿಕೊಂಡು ಬರುತ್ತಿದ್ದೇವೆ. ಮತ್ತೆ ಒತ್ತುವರಿಯನ್ನು ತಡೆಯಲು ಅಲ್ಲದೆ ಸಾಮಾನ್ಯ ಅರಣ್ಯ ಇಲಾಖೆಯ ಸಹಯೋಗದಲ್ಲಿ ಗಿಡಗಳನ್ನು ನೆಟ್ಟು, ಅವುಗಳಿಗೆ ಕಾಂಪೌಡ್ ಹಾಕಲಾಗುವುದು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.