ಶ್ರೀನಿವಾಸಪುರ: ‘ಅತಿಸಣ್ಣ ಹಾಗೂ ಸಣ್ಣ ಕುಟುಂಬಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಬಾರಿ ದಸರಾ ಹಬ್ಬಕ್ಕೆ ಉಡುಗೊರೆ ನೀಡುವುದಾಗಿ ಸ್ವಾತಂತ್ರ್ಯ ದಿನಾಚರಣೆಯಂದು ಘೋಷಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನಡೆದುಕೊಂಡಿದ್ದಾರೆ. ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿಯನ್ನು ಕಡಿತಗೊಳಿಸಿದ್ದು, ಜಾರಿಗೆ ಬಂದಿದೆ’ ಎಂದು ಸಂಸದ ಎಂ.ಮಲ್ಲೇಶ್ ಬಾಬು ಹೇಳಿದರು.
ಪಟ್ಟಣದಲ್ಲಿನ ಮುಳಬಾಗಿಲು ವೃತ್ತದಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದವರೆಗೆ ಮಂಗಳವಾರ ಬಿಜೆಪಿ, ಜೆಡಿಎಸ್ ಮೈತ್ರಿಕೂಟದಿಂದ ಹಮ್ಮಿಕೊಂಡಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಸೆ.22 ರಿಂದಲೇ ಜಾರಿಗೆ ಬಂದಿದ್ದು, ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ಕಡಿಮೆ ಮಾಡಿ ವಿರೋಧ ಪಕ್ಷದವರಿಗೆ ತಕ್ಕ ಉತ್ತರ ನೀಡಿದ್ದಾರೆ. ಎಲ್ಲಾ ದಿನಸಿ ಪದಾರ್ಥಗಳಿಗೆ ಜಿಎಸ್ಟಿ ಶೇ 5 ರೊಳಗೆ ಬಂದಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪರಿಕರ, ಆರೋಗ್ಯ ವಿಮೆ ಮೇಲೆ ಜಿಎಸ್ಟಿ ತೆಗೆದು ಹಾಕಿದ್ದಾರೆ. ರೈತರು ಬಳಸುವ ಡ್ರಿಪ್ ಇರಿಗೇಷನ್ ಪರಿಕರಗಳಿಗೆ ಶೇ 5. ಟ್ರ್ಯಾಕ್ಟರ್ ಬಿಡಿಭಾಗ, ಸಿಮೆಂಟ್, ಇಟ್ಟಿಗೆಗೂ ಜಿಎಸ್ಟಿ ಕಡಿಮೆ ಮಾಡಿದ್ದಾರೆ’ ಎಂದರು.
ಬಿಜೆಪಿ ಪಕ್ಷದ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಮಾತನಾಡಿ, ‘ಪ್ರಧಾನಿ ಮೋದಿ ಮುಂದಿನ ದಿನಗಳಲ್ಲಿ ಜಿಎಸ್ಟಿಯಲ್ಲಿ ಸುಧಾರಣೆ ತರಲಾಗುವುದು ಎಂದಿದ್ದರು. ಅದರಂತೆ 365 ಅಗತ್ಯವಸ್ತುಗಳ ಮೇಲೆ ಜಿಎಸ್ಟಿ ಸುಂಕವನ್ನು ಶೇ 18ರಿಂದದ ಶೇ 5ಕ್ಕೆ ಇಳಿಸಿದ್ದಾರೆ. ಶೇ 28 ಇದ್ದದ್ದನ್ನು ಶೇ 18ಕ್ಕೆ ಇಳಿಸಿದ್ದಾರೆ. ಎಲ್ಐಸಿ ವಿಮೆಗೂ ಜಿಎಸ್ಟಿ ತೆಗದುಹಾಕಿರುವುದು ಸ್ವಾಗತಾರ್ಹ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಕೇಂದ್ರ ಸರ್ಕಾರ ಜಿಎಸ್ಟಿ ಬದಲಾವಣೆ ತಂದಿರುವುದು ಸ್ವಾಗತಾರ್ಹ ಎಂದರು.
ಕೇಂದ್ರ ಸರ್ಕಾರ ಜಿಎಸ್ಟಿ ಕಡಿಮೆ ಮಾಡಿರುವ ಹಿನ್ನೆಲೆಯಲ್ಲಿ ಸಿಹಿ ಹಂಚಿ ಸಂಭ್ರಮಾಚರಿಸಲಾಯಿತು. ಅಂಗಡಿಗಳಿಗೆ ಭೇಟಿ ನೀಡಿ ಸಿಹಿ ಹಂಚಿದರು ತಾ.ಪಂ.ಮಾಜಿ ಅಧ್ಯಕ್ಷ ಬಂಡಪಲ್ಲಿ ಕೃಷ್ಣಾರೆಡ್ಡಿ, ಬಿಜೆಪಿ ಮಂಡಲ ಅಧ್ಯಕ್ಷ ಆರ್.ಎನ್.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಶೆಟ್ಟಿಹಳ್ಳಿ ನಾಗಭೂಷಣ್, ಮುಖಂಡರಾದ ಲಕ್ಷ್ಮಣಗೌಡ, ಚಂದ್ರಶೇಖರ್, ನಾಗರಾಜ್, ನಾರಾಯಣಸ್ವಾಮಿ, ನಾಗೇಶ್, ಶಿವಪ್ರಕಾಶ್, ಶಿವಾರೆಡ್ಡಿ, ಅಂಬರೀಶ್, ಶೇಕ್ಶಫಿ ಹಾಗೂ ಕಾರ್ಯಕರ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.