ಕೋಲಾರ: ‘ರಾಜ್ಯ ರಾಜಕೀಯ ಪರಿಸ್ಥಿತಿ ಗಮನಿಸುತ್ತಿದ್ದರೆ ಯಡಿಯೂರಪ್ಪ ಸರ್ಕಾರ ತೊಂದರೆ ಎದುರಿಸುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸಲು ಬಿಜೆಪಿ ನಾಯಕರು ಹಿಂದೇಟು ಹಾಕುತ್ತಿದ್ದಾರೆ’ ಎಂದರು.
‘ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ನಾಲ್ಕೈದು ಮಂದಿಗೆ ಸಚಿವ ಸ್ಥಾನ ಸಿಗಬಹುದು ಎಂಬ ವಿಚಾರವನ್ನು ಕೆಲ ಬಿಜೆಪಿ ನಾಯಕರೆ ಹೇಳಿಕೊಂಡಿದ್ದಾರೆ. ಮುಂದೆ ಇದು ಯಾವ ಪರಿಸ್ಥಿತಿ ಉಂಟಾಗುತ್ತದೋ ನೋಡಬೇಕು’ ಎಂದು ತಿಳಿಸಿದರು.
‘ಉಪ ಚುನಾವಣೆಯಲ್ಲಿ ಸೋತಿರುವ ಎಂ.ಟಿ.ಬಿ.ನಾಗರಾಜ್, ವಿಶ್ವನಾಥ್ ಸಹ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಇವರಿಗೆ ಸಚಿವ ಸ್ಥಾನ ಕೊಡುವುದು ಅಷ್ಟು ಸುಲಭದ ಕೆಲಸವಲ್ಲ. ಇದಕ್ಕೆ ಬಿಜೆಪಿ ಹೈಕಮಾಂಡ್ ಒಪ್ಪುವುದು ಕಷ್ಟ. ಇದೆಲ್ಲದರ ಲೆಕ್ಕ ಹಾಕಿದರೆ ಯಡಿಯೂರಪ್ಪನವರಿಗೆ ಮುಂದಿನ ದಿನಗಳು ಅಷ್ಟು ಹಿತಕರವಾಗುವ ಲಕ್ಷಣಗಳು ಕಾಣುತ್ತಿಲ್ಲ’ ಎಂದು ತಿಳಿಸಿದರು.
‘ಅಮ್ಮೇರಹಳ್ಳಿ ಕೆರೆಯಲ್ಲಿ ಸಾಕಷ್ಟು ಕೊಳವೆ ಬಾವಿಗಳಿವೆ. ಅಲ್ಲದೆ ಸುತ್ತಮುತ್ತ ರೈತರೂ ಇದ್ದಾರೆ. ಅಲ್ಲಿನ ರೈತರು ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸಿ ನೀರಿನ ಲಭ್ಯತೆ ಇಲ್ಲದೆ ಪರಿದಾಡುತ್ತಿದ್ದಾರೆ. ಈ ಕುರಿತು ಸಂಸದ, ಅಧಿಕಾರಿಗಳ ಜತೆ ಚರ್ಚಿಸಿ ನೀರು ಹರಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.