ಶ್ರೀನಿವಾಸಪುರ: ತಾಲೂಕಿನ ಗಾಂಡ್ಲಹಳ್ಳಿ ಗ್ರಾಮದಲ್ಲಿ ಭಾನುವಾರ ಚೌಡಮ್ಮ ಹಿರಣ್ಯಗೌಡ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್ನಿಂದ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ನಡೆಯಿತು.
ಜಿಲ್ಲೆಯ ಎಸ್ಎಸ್ಎಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿರುವ 50 ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಅತಿ ಹೆಚ್ಚು ಅಂಕ ಗಳಿಸಿರುವ ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿಯ 10 ವಿದ್ಯಾರ್ಥಿಗಳಿಗೆ ಎರಡು ವರ್ಷ ಪ್ರತಿ ತಿಂಗಳು ₹ 1 ಸಾವಿರ ವಿದ್ಯಾರ್ಥಿವೇತನವನ್ನು ನೀಡಲಾಗುವುದು ಎಂದು ಸಂಘಟಕರು ಹೇಳಿದರು. ಚೌಡಮ್ಮರವರು ₹ 20 ಲಕ್ಷ ವೆಚ್ಚದ ಶ್ರೀ ಚಂದ್ರಮೌಳೇಶ್ವರ ಸಬಾಭವನವನ್ನು ಉದ್ಘಾಟಿಸಿದರು.
ಕಾರ್ಯಕ್ರಮಕ್ಕೆ ಟ್ರಸ್ಟಿ ಹಾಗೂ ಹಿರಿಯ ವಕೀಲ ಕೆ.ವಿ.ಶಂಕರಪ್ಪ ಚಾಲನೆ ನೀಡಿ ಮಾತನಾಡಿದರು. ‘ವಿದ್ಯಾವಂತರಾಗಿ ಉನ್ನತ ಹುದ್ದೆ ಅಲಂಕರಿಸದ ಮೇಲೆ ಕೇವಲ ತಮ್ಮ ಕುಟುಂಬದ ನಿರ್ವಹಣೆ ಮಾಡುವುದಲ್ಲ; ಉನ್ನತ ಸ್ಥಾನಕ್ಕೆ ಕಾರಣವಾದ ಸಮಾಜಕ್ಕೂ ಕೊಡುಗೆ ನೀಡಬೇಕು. ಸೇವೆಯ ಮೂಲಕ ಋಣ ತೀರಿಸಬೇಕಾಗಿದೆ’ ಎಂದು ಹೇಳಿದರು.
ಐಎಎಸ್ ಅಧಿಕಾರಿ ಕೆ.ಎಚ್.ಗೋವಿಂದರಾಜು, ‘ಜೀವನದಲ್ಲಿ ಯಶಸ್ಸು ಗಳಿಸಬೇಕಾದರೆ ಛಲ ಮುಖ್ಯ. ಕಲಿಕಾ ಸಮಯದಲ್ಲಿ ಗುರಿ ಹೊಂದಬೇಕು’ ಎಂದರು.
ನಿವೃತ್ತ ಐಎಎಸ್ ಅಧಿಕಾರಿ ಕೆ.ಎಚ್.ಶ್ರೀನಿವಾಸ್ ಮಾತನಾಡಿ, ‘ಗ್ರಾಮೀಣ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಟ್ರಸ್ಟ್ ಕೆಲಸ ಮಾಡುತ್ತಿದೆ. ಹಿರಣ್ಯಗೌಡರ ಕುಟುಂಬದವರು ಸಾಧಕರ ಬೆನ್ನು ತಟ್ಟುವ ಸಲುವಾಗಿ 18 ವರ್ಷದಿಂದಲೂ ಪ್ರತಿಭಾ ಪುರಸ್ಕಾರವನ್ನು ಹಮ್ಮಿಕೊಂಡು ಬರುತ್ತಿದ್ದಾರೆ’ ಎಂದು ತಿಳಿಸಿದರು.
ಟ್ರಸ್ಟ್ನ ಪದಾಧಿಕಾರಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಎಚ್.ಅಶ್ವತನಾರಾಯಣಗೌಡ, ಹಿರಿಯ ವಕೀಲ ಬಿಸೇಗೌಡ, ಕೋಮುಲ್ ನಿರ್ದೇಶಕ ಎನ್.ಹನುಮೇಶ್, ನಿವೃತ್ತ ಡಿಎಫ್ಒ ನಾಗರಾಜಗೌಡ, ನಿವೃತ್ತ ಅಧಿಕಾರಿ ಕೆ.ಎಚ್.ಶಿವರಾಮೇಗೌಡ, ಟ್ರಸ್ಟ್ ಅಧ್ಯಕ್ಷ ಕೆ.ಎಚ್.ಸಂಪತ್ಕುಮಾರ್, ಕೃಷ್ಣೇಗೌಡ, ಮುಖಂಡ ದರ್ಶನ್, ಬೆಂಗಳೂರು ಡೇರಿ ವ್ಯವಸ್ಥಾಪಕ ವೆಂಕಟೇಶ್ಪ್ರಸಾದ್, ರವಿಕುಮಾರ್, ಎಂ.ನಾಗರಾಜ್, ವೆಂಕಟಾಚಲಪತಿ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.