ಬಂಗಾರಪೇಟೆ: ತಾಲ್ಲೂಕಿನ ಚತ್ತಗುಟ್ಲಹಳ್ಳಿ ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಶಾಲೆಯ ಮಕ್ಕಳು ಪ್ರತಿಭಟಿಸಿದರು.
ಶಾಲಾ ಮುಂಭಾಗದ ಭಿತ್ತಿ ಪತ್ರ ಹಿಡಿದು ಪ್ರತಿಭಟನೆ ಮಾಡುವ ಮೂಲಕ ಗಮನ ಸೆಳೆದರು.
ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಬೇಸತ್ತ ಶಾಲಾ ಮಕ್ಕಳು ‘ಅಧಿಕಾರಿಗಳೆ ಕೈ ಮುಗಿದು ನಾವು ಬೇಡಿಕೊಳ್ಳುತ್ತೇವೆ. ಶಾಲಾ ಶೌಚಾಲಯ ಕಾಮಗಾರಿ ಪೂರ್ಣಗೊಳಿಸಿ, ಬಹಿರ್ದೆಸೆ ಮುಕ್ತ ಶಾಲೆಯನ್ನಾಗಿ ಮಾಡಿ’ ಎನ್ನುವ ಭಿತ್ತಿ ಪತ್ರ ಹಿಡಿದು ಗಮನ ಸೆಳೆದರು.
ತಮಿಳುನಾಡಿನ ಗಡಿ ಭಾಗದಲ್ಲಿರುವ ಚತ್ತಗುಟ್ಲಹಳ್ಳಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಆರಂಭಗೊಂಡು ಹಲವು ವರ್ಷ ಕಳೆದಿವೆ. ಆದರೆ ಶೌಚಾಲಯ ಇರಲಿಲ್ಲ. ಈ ಬಗ್ಗೆ ಶಾಲಾ ಮಕ್ಕಳು ಮೂರು ಬಾರಿ ಪ್ರತಿಭಟನೆ ನಡೆಸಿದರು. ಪರಿಣಾಮ ನರೇಗಾ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಬಲಮಂದೆ ಗ್ರಾಮ ಪಂಚಾಯಿತಿ ಮುಂದಾಯಿತು. ಆದರೆ ಆರು ತಿಂಗಳಾದರೂ ಕಾಮಗಾರಿ ಪೂರ್ಣಗೊಳಿಸದ ಕಾರಣ ಮಕ್ಕಳಿಗೆ ಅನಾನುಕೂಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.