ADVERTISEMENT

ಉದಯೋನ್ಮುಖ ಕವಿಗಳನ್ನು ಸಮಾಜ ಮುಖಿಯಾಗಿ ಬೆಳೆಸಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 14:45 IST
Last Updated 11 ಅಕ್ಟೋಬರ್ 2020, 14:45 IST
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಕವಿಯ ಮನೆಯಂಗಳದಲ್ಲಿ ಸಾಹಿತ್ಯ ಸಂಭ್ರಮ ಸಮಾರಂಭದಲ್ಲಿ ಕನ್ನಡ ಸಿರಿ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ನರಸಿಂಹಮೂರ್ತಿ ಮಾತನಾಡಿದರು.
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ಕವಿಯ ಮನೆಯಂಗಳದಲ್ಲಿ ಸಾಹಿತ್ಯ ಸಂಭ್ರಮ ಸಮಾರಂಭದಲ್ಲಿ ಕನ್ನಡ ಸಿರಿ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ನರಸಿಂಹಮೂರ್ತಿ ಮಾತನಾಡಿದರು.   

ಶ್ರೀನಿವಾಸಪುರ: ಕನ್ನಡ ಪರ ಸಂಘಟನೆಗಳು ಉದಯೋನು್ಮಖ ಕವಿಗಳನ್ನು ಸಮಾಜ ಮುಖಿಯಾಗಿ ಬೆಳೆಸಲು ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಕಡೆ ಒಲವು ಮೂಡಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್‌.ಆನಂದ್‌ ಹೇಳಿದರು.

ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ಸಾಹಿತಿ ಆರ್‌.ಚೌಡರೆಡ್ಡಿ ಅವರ ಮನೆಯಂಗಳದಲ್ಲಿ, ತಾಲ್ಲೂಕು ಕನ್ನಡ ಸಿರಿ ಸಾಹಿತ್ಯ ಪರಿಷತ್ತು ಹಾಗೂ ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ಕವಿಯ ಮನೆಯಂಗಳದಲ್ಲಿ ಸಾಹಿತ್ಯ ಸಂಭ್ರಮ ಸಮಾರಂಭ ಉದ್ಘಾಟಿಸಿ ಮಾತನಾಡಿ, ಡಿವಿಜಿ, ಮಾಸ್ತಿ, ಕುವೆಂಪು ಅವರಂಥ ಮೇರು ಸಾಹಿತಿಗಳ ಸಾಹಿತ್ಯ ಕಿರಿಯ ತಲೆಮಾರಿನ ಸಾಹಿತಿಗಳಿಗೆ ಉತ್ತಮ ಮಾರ್ಗದರ್ಶನ ನೀಡುತ್ತದೆ ಎಂದು ಅಭಿಪ್ರಾಯಪಟ್ಟರು.

ಯುವ ಸಮುದಾಯದಲ್ಲಿ ಸಾಹಿತ್ಯಾಸಕ್ತಿ ಮೂಡಿಸುವ ಉದ್ದೇಶದಿಂದ, ಪ್ರತಿ ತಿಂಗಳು 2ನೇ ಶನಿವಾರ ಮನೆಯಂಗಳದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ಸಾಹಿತಿ ಪನಸಮಾಕನಹಳ್ಳಿ ಆರ್‌.ಚೌಡರೆಡ್ಡಿ ಅವರ ಮನೆಯಂಗಳದಲ್ಲಿ ಮೊದಲ ಕಾರ್ಯಕ್ರಮ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮ ಮುಂದುವರಿಯಲು ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ಕವಿ ರಾಧಾಕೃಷ್ಣ ಆರ್‌.ಚೌಡರೆಡ್ಡಿ ಅವರ ಕಾವ್ಯ ಕುರಿತು ಮಾತನಾಡಿ, ರೆಡ್ಡಿ ಅವರ ಕಾವ್ಯದಲ್ಲಿ ಮಣ್ಣಿನ ಸೊಗಡು ದಟ್ಟವಾಗಿದೆ. ಸರಳತೆ ಹಾಗೂ ಗೇಯತೆ ಅವರ ಕಾವ್ಯದ ವೈಶಿಷ್ಟ್ಯವಾಗಿದೆ. ಅವರು ಕಾವ್ಯ ಕಟ್ಟುವ ರೀತಿ ಉದಯೋನ್ಮುಖ ಕವಿಗಳಿಗೆ ಮಾದರಿಯಾಗಿದೆ. ಕಾವ್ಯದಲ್ಲಿ ಗ್ರಾಮೀಣ ಬದುಕಿನ ವಾಸ್ತವ ಸ್ಥಿತಿಗತಿ ಅನಾವರನಗೊಂಡಿದೆ ಎಂದು ಹೇಳಿದರು.
ಕವಿ ಶಂಕರೇಗೌಡ ಮಾತನಾಡಿ, ಗ್ರಾಮೀಣ ನೆಲೆಯಲ್ಲಿ ರೂಪಗೊಂಡ ಆರ್‌.ಚೌಡರೆಡ್ಡಿ ಅವರ ಕತೆಗಳು ಗಮನ ಸೆಳೆಯುತ್ತವೆ. ಅವರು ಬರೆದಿರುವ ಮಕ್ಕಳ ಕತೆಗಳು ಬೋಧಪ್ರದವಾಗಿದ್ದು, ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಪರಿಸರ ಪ್ರೇಮ, ಪ್ರಾಣಿ ದಯೆ ಬೆಳೆಸುವಲ್ಲಿ ಸಹಕಾರಿಯಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗಾಯಕರಾದ ಕಲಾ ಶಂಕರ್‌, ಕೋತ್ಸಂದ್ರ ರೆಡ್ಡಪ್ಪ, ಕೆ.ನರಸಿಂಹಮೂರ್ತಿ, ಎನ್‌.ಲೇಖಾ, ಎಸ್.ಎನ್.ಪದ್ಮ ಅವರಿಂದ ಆರ್‌.ಚೌಡರೆಡ್ಡಿ ಅವರ ಭಾವಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆರ್‌.ಚೌಡರೆಡ್ಡಿ ಅವರಿಗೆ ಕವಿ ನಮನ ಸಲ್ಲಿಸಿದ ಬಳಿಕ ಸನ್ಮಾನಿಸಲಾಯಿತು.
ಶಿಕ್ಷಕರಾದ ಆರ್‌.ರವಿಕುಮಾರ್‌, ನಾಗರಾಜ್‌, ರವಣಪ್ಪ, ಸತೀಶ್‌, ನಾಗೇಂದ್ರ ಪ್ರಕಾಶ್‌, ರಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.