
ಕೋಲಾರ: ಛತ್ರಪತಿ ಶಿವಾಜಿ ಬಾಲ್ಯದಲ್ಲಿಯೇ ಯುದ್ಧಕಲೆ, ರಾಜನೀತಿ ಮತ್ತು ಆಡಳಿತ ತರಬೇತಿ ಪಡೆದರು. ತಾಯಿ ಜೀಜಾ ಬಾಯಿ ಅವರಿಂದ ಧೈರ್ಯ ಮತ್ತು ನೀತಿ ಪಾಠ ಕಲಿತು ಮರಾಠ ಸಾಮ್ರಾಜ್ಯ ಕಟ್ಟಿದ ಧೀಮಂತ ರಾಜ ಎನಿಸಿಕೊಂಡರು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮಿ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಗುರುವಾರ ಅಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಪೋಷಕರು ತಮ್ಮ ಮಕ್ಕಳನ್ನು ಸಮಾಧಾನಪಡಿಸಲು ಮೊಬೈಲ್ ಕೊಡುವುದನ್ನು ಬಿಡಬೇಕು. ಮೊಬೈಲ್ನಿಂದ ಮಕ್ಕಳ ಮನಸ್ಸಿನ ಮೇಲೆ ಮತ್ತು ಅರೋಗ್ಯದ ಮೇಲೆ ದುಷ್ಟರಿಣಾಮ ಉಂಟಾಗುತ್ತದೆ. ಅದರ ಬದಲು ಮಕ್ಕಳ ಕೈಗೆ ಇತಿಹಾಸ ಪುರುಷರ ಪುಸ್ತಕಗಳನ್ನು ನೀಡಿ. ಈ ಮೂಲಕ ಶಿವಾಜಿ ತಾಯಿ ಜೀಜಾ ಬಾಯಿ ಮಾದರಿಯಲ್ಲಿ ರಾಷ್ಟ್ರಪ್ರೇಮ, ಸಂಸ್ಕೃತಿ, ಸಂಸ್ಕಾರ ಕಲಿಸಿ ಎಂದು ಸಲಹೆ ನೀಡಿದರು.
ಶಿವಾಜಿ ಅವರಲ್ಲಿ ಧೈರ್ಯ, ಸಂಕಲ್ಪ, ದೇಶಪ್ರೇಮ, ಸಮಾನತೆ, ಧಾರ್ಮಿಕ ಸಹಿಷ್ಣುತೆ, ಮಹಿಳೆಯರ ಬಗ್ಗೆ ಅಪಾರ ಗೌರವ ಇತ್ತು. ಇವರ ಆದರ್ಶ, ಸಾಹಸವನ್ನು ಮಕ್ಕಳಿಗೆ ತಿಳಿಸಬೇಕಿದೆ ಎಂದರು.
ಛತ್ರಪತಿ ಶಿವಾಜಿ ಮಹಾರಾಜರು ಮೊಘಲ್ ಮತ್ತು ಆದಿಲ್ ಶಾಹಿ ಆಡಳಿತದ ವಿರುದ್ಧ ಹೋರಾಡಿ ಹಿಂದವಿ ಸ್ವರಾಜ್ಯವನ್ನು ಪ್ರತಿಷ್ಠಾಪಿಸಿದರು. ಗೆರಿಲ್ಲಾ ಯುದ್ಧ ತಂತ್ರ ಮೂಲಕ ಪ್ರಸಿದ್ಧಿ ಪಡೆದಿದ್ದರು ಎಂದು ನುಡಿದರು.
ಯಾವುದೇ ಪುತ್ಥಳಿ, ಪ್ರತಿಮೆ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ಪಡೆಯಬೇಕು. ಹೀಗಾಗಿ, ಶಿವಾಜಿ ಪುತ್ಥಳಿ ಸ್ಥಾಪಿಸಬೇಕೆಂಬ ಸಮುದಾಯದವರ ಮನವಿ ಪತ್ರವನ್ನು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.
ಜಿಲ್ಲೆಯಲ್ಲಿ ಮರಾಠಿ ಸಮುದಾಯದವರು 24 ಸಾವಿರಕ್ಕೂ ಅಧಿಕ ಮಂದಿ ಇದ್ದಾರೆ. ಆದರೆ, ಕಾರ್ಯಕ್ರಮಕ್ಕೆ ಕಡಿಮೆ ಸಂಖ್ಯೆಯಲ್ಲಿ ಬಂದಿದ್ದಾರೆ. ಇದೇ 22 ರಂದು ಖಾಸಗಿಯಾಗಿ ಆಚರಿಸಲಿರುವ ತಮ್ಮ ಸಮುದಾಯದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ. ಅಂದಿನ ಕಾರ್ಯಕ್ರಮಕ್ಕೆ ಕಲಾತಂಡಗಳನ್ನು ಪ್ರಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಮರಾಠ ಪರಿಷತ್ ತಾಲ್ಲೂಕು ಅಧ್ಯಕ್ಷ ಪ್ರಕಾಶ್ ರಾವ್ ಮಾತನಾಡಿ, ‘ಭಾರತವನ್ನು ಮೊಗಲರಿಂದ ವಿಮುಕ್ತಿಗೊಳಿಸಲು ಶಿವಾಜಿ ಮಹಾರಾಜರು ಹೋರಾಟ ಮಾಡಿದ ಗೆರಿಲ್ಲಾ ಯುದ್ಧ ಐತಿಹಾಸಿಕವಾದದು. ದೇಶಪ್ರೇಮಕ್ಕೆ ಮತ್ತೊಂದು ಹೆಸರು ಶಿವಾಜಿ. ಅವರ ಆದರ್ಶಗಳು ಇಂದಿನ ಯುವಕರಿಗೆ ಅಗತ್ಯವಾಗಿದೆ’ ಎಂದರು.
ಜಿಲ್ಲಾ ಮರಾಠ ಪರಿಷತ್ ಉಪಾಧ್ಯಕ್ಷ ಚಂದ್ರರಾವ್ ಪವರ್ ಹಾಗೂ ಮಂಜುನಾಥ್ ಕದಂ ಮಾತನಾಡಿ, ‘ಜಿಲ್ಲಾ ಕೇಂದ್ರದಲ್ಲಿ ಶಿವಾಜಿ ಮಹಾರಾಜರ ಪುತ್ಥಳಿ ಸ್ಥಾಪಿಸಬೇಕು. ಪ್ರಮುಖ ರಸ್ತೆಗೆ ಶಿವಾಜಿ ಹೆಸರಿಡಬೇಕು. ಸರ್ಕಾರದ ಎಲ್ಲಾ ಕಚೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ಶಿವಾಜಿ ಅವರ ಭಾವಚಿತ್ರ ಅಳವಡಿಸಬೇಕು’ ಎಂದು ಆಗ್ರಹಿಸಿದರು.
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಎಸ್.ರಾಜಾರಾವ್ ಕದಂ. ಉಪಾದ್ಯಕ್ಷ ವೇಣುಗೋಪಾಲ್ ಮೋರೆ, ಪದಾಧಿಕಾರಿಗಳಾದ ಚಂದ್ರರಾವ್ ಡೋಗ್ರೆ, ಎನ್.ಪ್ರಕಾಶ್ ರಾವ್ ಬೋಸ್ಲೆ, ಆರ್.ಆಧಿಶೇಷರಾವ್, ರಾಜೇಶ್ ಸಿಂಗ್, ಚಂದ್ರರಾವ್ ಪವರ್, ಕಿಷನ್ ರಾವ್ ಪಡುಕರೆ, ಮುನಿಯಪ್ಪ ರಾವ್, ದೇವರಾಜ್ ಇದ್ದರು. ಮಂಜುಳಾ ಕೊಂಡರಾಜನಹಳ್ಳಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.