ಕೋಲಾರ: ‘ಭಯೋತ್ಪಾದನೆಯು ಜಗತ್ತನ್ನು ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದು. ಮೌಲ್ಯಯುತ ಶಿಕ್ಷಣದಿಂದ ಭಯೋತ್ಪಾದನೆಗೆ ಕಡಿವಾಣ ಹಾಕಬಹುದು’ ಎಂದು ಸರ್ಕಾರಿ ಮಹಿಳಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಜಿ.ಅರಿವು ಶಿವಪ್ಪ ಅಭಿಪ್ರಾಯಪಟ್ಟರು.
ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಜಿಲ್ಲಾ ನೆಹರೂ ಯುವ ಕೇಂದ್ರ ಮತ್ತು ಕೆನರಾ ಬ್ಯಾಂಕ್ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ಸಹಯೋಗದಲ್ಲಿ ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಯೋತ್ಪಾದನೆ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
‘ಜಾಗತಿಕವಾಗಿ ಪ್ರತಿ ದೇಶವು ಭಯೋತ್ಪಾದನೆಯ ದಾಳಿಗೆ ಸಿಲುಕಿ ನಲುಗುತ್ತಿವೆ. ಇನ್ನು ಕೆಲ ದೇಶಗಳು ಸದಾ ಕಾಲ ಭಯೋತ್ಪಾದನಾ ದಾಳಿಯ ಭಯದಲ್ಲೇ ಇವೆ. ಭಯೋತ್ಪಾದನಾ ಚಟುವಟಿಕೆಗಳ ನಿಗ್ರಹಕ್ಕಾಗಿ ದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾಯ್ದೆ ಜಾರಿಗೆ ತಂದಿದ್ದು, ಇದರಡಿ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ’ ಎಂದರು.
‘ದೇಶದ ಪ್ರತಿ ಪ್ರಜೆಯೂ ಇಂತಹ ಭಯೋತ್ಪಾದನಾ ಕೃತ್ಯ ತಡೆಗೆ ಸಂಕಲ್ಪ ಮಾಡಬೇಕು. ಭಯೋತ್ಪಾದಕರು ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಅನಾಹುತ ತಪ್ಪಿಸಬೇಕು. ಮಹಾತ್ಮ ಗಾಂಧಿಜೀಯು ಸ್ವಾತಂತ್ರ್ಯ ಹೋರಾಟಕ್ಕಾಗಿ ಪ್ರಮುಖ ಅಸ್ತ್ರವಾಗಿ ಬಳಸಿದ ಅಹಿಂಸೆ ಮಾರ್ಗವನ್ನು ಎತ್ತಿ ಹಿಡಿಯಬೇಕು. ಅಹಿಂಸಾ ಮಾರ್ಗದಲ್ಲಿ ಪ್ರತಿಯೊಬ್ಬರೂ ಸಾಗಬೇಕು’ ಎಂದು ಕಿವಿಮಾತು ಹೇಳಿದರು.
ಅಹಿಂಸೆಗೆ ಖ್ಯಾತಿ: ‘ಭಾರತ ದೇಶವು ಅಹಿಂಸೆ ಮತ್ತು ಸಹನೆಗೆ ಖ್ಯಾತಿ ಪಡೆದಿದೆ. ಪ್ರತಿಯೊಬ್ಬರೂ ಭಯೋತ್ಪಾದನಾ ಕೃತ್ಯ ವಿರೋಧಿಸಿ ಶಾಂತಿ ಮತ್ತು ಸೌಹಾರ್ದದಿಂದ ಜೀವನ ಸಾಗಿಸಬೇಕು’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕಿ ನಿರ್ದೇಶಕಿ ಆರ್.ಗೀತಾ ಸಲಹೆ ನೀಡಿದರು.
ಜಿಲ್ಲಾ ನೆಹರೂ ಯುವ ಕೇಂದ್ರದ ನೌಕರ ಎಸ್.ಪ್ರವೀಣ್ಕುಮಾರ್, ತರಬೇತುದಾರರಾದ ಗಿರೀಶ್ ರೆಡ್ಡಿ, ಯುವ ಪರಿವರ್ತಕ ಗಣೇಶ್, ಕಲಾವಿದ ವೆಂಕಟಚಲಪತಿ, ಪ್ರಗತಿಪರ ಚಿಂತಕ ಟಿ.ವಿಜಯ್ಕುಮಾರ್ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.