ADVERTISEMENT

ಏಪ್ರಿಲ್‌ ಅಂತ್ಯಕ್ಕೆ ಪಠ್ಯಪುಸ್ತಕ ಪೂರೈಕೆ: ಬಿಇಒ ಕೆ.ಎಸ್‌.ನಾಗರಾಜಗೌಡ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 12:41 IST
Last Updated 4 ಮಾರ್ಚ್ 2020, 12:41 IST
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ ಕೋಲಾರದಲ್ಲಿರುವ ಶಿಕ್ಷಣ ಇಲಾಖೆಯ ಪಠ್ಯಪುಸ್ತಕ ಗೋದಾಮಿನಲ್ಲಿ ಬುಧವಾರ ಪರಿಶೀಲನೆ ನಡೆಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ ಕೋಲಾರದಲ್ಲಿರುವ ಶಿಕ್ಷಣ ಇಲಾಖೆಯ ಪಠ್ಯಪುಸ್ತಕ ಗೋದಾಮಿನಲ್ಲಿ ಬುಧವಾರ ಪರಿಶೀಲನೆ ನಡೆಸಿದರು.   

ಕೋಲಾರ: ‘ತಾಲ್ಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಏಪ್ರಿಲ್‌ ಅಂತ್ಯದೊಳಗೆ ಪಠ್ಯಪುಸ್ತಕ ಸರಬರಾಜು ಮಾಡಲು ಸಕಲ ಸಿದ್ಧತೆ ಮಾಡಿದ್ದೇವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ ತಿಳಿಸಿದರು.

ಇಲ್ಲಿನ ಬಿಇಒ ಕಚೇರಿ ಆವರಣದಲ್ಲಿರುವ ಶಿಕ್ಷಣ ಇಲಾಖೆಯ ಪಠ್ಯಪುಸ್ತಕ ಗೋದಾಮಿನಲ್ಲಿ ಬುಧವಾರ ಪರಿಶೀಲನೆ ನಡೆಸಿ ಮಾತನಾಡಿ, ‘ಈಗಾಗಲೇ ಮೊದಲ ಹಂತದ ಸುಮಾರು 25 ಸಾವಿರ ಪಠ್ಯಪುಸ್ತಕಗಳು ಬಂದಿವೆ’ ಎಂದು ಮಾಹಿತಿ ನೀಡಿದರು.

‘ಹಿಂದಿನ ಶೈಕ್ಷಣಿಕ ವರ್ಷಗಳಲ್ಲಿ ಪಠ್ಯಪುಸ್ತಕ ಸರಬರಾಜಿನಲ್ಲಿ ವಿಳಂಬವಾಗಿತ್ತು. ಅರ್ಧ ವರ್ಷ ಮುಗಿದರೂ ಅನೇಕ ಪುಸ್ತಕಗಳು ಮಕ್ಕಳ ಕೈಸೇರದೆ ಕಲಿಕೆಗೆ ತೊಂದರೆಯಾಗಿತ್ತು. ಜತೆಗೆ ಪುಸ್ತಕ ವಿತರಣೆಯಲ್ಲಿ ಲೋಪದೋಷಗಳ ಬಗ್ಗೆ ಆರೋಪ ಕೇಳಿಬಂದಿತ್ತು. ಈ ಬಾರಿ ವಿಳಂಬ ತಪ್ಪಿಸಲು ಶಿಕ್ಷಣ ಸಚಿವ ಸುರೇಶ್‌ಕುಮಾರ್‌ರ ಸೂಚನೆಯಂತೆ ಈಗಾಗಲೇ ಮೊದಲ ಹಂತದ ಪುಸ್ತಕಗಳ ಸರಬರಾಜು ಆರಂಭವಾಗಿದೆ’ ಎಂದರು.

ADVERTISEMENT

‘ಈ ಬಾರಿ ಯಾವುದೇ ಆರೋಪಕ್ಕೆ ಅವಕಾಶ ನೀಡದೆಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಪಠ್ಯಪುಸ್ತಕಗಳನ್ನು ಸರಬರಾಜು ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಏಪ್ರಿಲ್30ರೊಳಗೆ ಎಲ್ಲಾ ಪಠ್ಯಪುಸ್ತಕಗಳನ್ನು ಆಯಾ ಶಾಲೆಗಳಿಗೆ ಕಳುಹಿಸಲು ಇಲಾಖೆ ಮುಂದಾಗಿದೆ’ ಎಂದು ವಿವರಿಸಿದರು.

ವಾಹನ ವ್ಯವಸ್ಥೆ: ‘ಶಾಲೆ ಆರಂಭದ ದಿನವೇ ಮಕ್ಕಳಿಗೆ ಎಲ್ಲಾ ಪುಸ್ತಕ ವಿತರಿಸಲು ಕ್ರಮ ಕೈಗೊಳ್ಳುತ್ತೇವೆ. ಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿಯು ತರಗತಿ ಹಾಗೂ ವಿಷಯವಾರು ಪುಸ್ತಕಗಳನ್ನು ಗೋದಾಮಿನಲ್ಲಿ ಸಂಗ್ರಹಿಸುತ್ತಿದ್ದಾರೆ’ ಎಂದು ಹೇಳಿದರು.

‘ಹಿಂದಿನ ವರ್ಷಗಳಲ್ಲಿ ಪುಸ್ತಕಗಳ ಬರುವುದರಲ್ಲೂ ವಿಳಂಬವಾಗಿತ್ತು. ಮತ್ತೊಂದೆಡೆ ಶಾಲೆಗಳಿಗೆ ಸರಬರಾಜು ಮಾಡುವುದರಲ್ಲೂ ಸಮಸ್ಯೆ ಎದುರಾಗಿತ್ತು. ಈ ಬಾರಿ ಅಂತಹ ಯಾವುದೇ ಸಮಸ್ಯೆಗೆ ಅವಕಾಶ ಕೊಡವುದಿಲ್ಲ’ ಎಂದರು.

ಪಠ್ಯಪುಸ್ತಕ ಗೋದಾಮಿನ ಸಿಬ್ಬಂದಿ ಬೈರೆಡ್ಡಿ, ಶಿವು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.