ಕೋಲಾರ: ‘ಕ್ರೈಸ್ತ ಸಮುದಾಯವು ಸಂಯಮ ಮತ್ತು ಶಾಂತಿಗೆ ಹೆಸರಾಗಿದ್ದು, ವೈದ್ಯಕೀಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದೆ’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಸ್ಮರಿಸಿದರು.
ತಾಲ್ಲೂಕಿನ ಹೊಗರಿ ಸಮೀಪದ ಚರ್ಚ್ನಲ್ಲಿ ಕ್ರಿಸ್ಮಸ್ ಆಚರಣೆಗೆ ಬುಧವಾರ ಚಾಲನೆ ನೀಡಿ ಮಾತನಾಡಿ, ‘ಕ್ರೈಸ್ತ ಮಿಷನರಿಗಳು ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಆಸ್ಪತ್ರೆ ಸ್ಥಾಪಿಸಿವೆ. ಕ್ರೈಸ್ತ ಸಮಾಜದ ಶುಶ್ರೂಷಕಿಯರು ಸಾಮಾಜಿಕ ಸೇವೆಯೊಂದಿಗೆ ರೋಗಿಗಳ ಬಗ್ಗೆ ತೋರುವ ಪ್ರೀತಿ ಹಾಗೂ ಕರ್ತವ್ಯ ಬದ್ಧತೆಯು ಮಾದರಿಯಾಗಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ಯಾವುದೇ ಗಲಾಟೆಗೆ ಹೋಗದೆ ಶಾಂತಿ ಕಾಪಾಡಿಕೊಂಡು ಹೋಗುವ ಕ್ರೈಸ್ತ ಸಮಾಜದಲ್ಲೂ ಬಡವರಿದ್ದಾರೆ, ಅವರು ಮುಖ್ಯವಾಹಿನಿಗೆ ಬರಬೇಕು. ಕ್ರಿಸ್ಮಸ್್ ಕ್ರೈಸ್ತ ಸಮುದಾಯದ ಪವಿತ್ರ ಹಬ್ಬವಾಗಿದ್ದು, ಏಸು ಸಮುದಾಯಕ್ಕೆ ಶಾಂತಿ, ನೆಮ್ಮದಿ, ಸಂತಸ ತರಲಿ’ ಎಂದು ಆಶಿಸಿದರು.
‘ಏಸು ಕ್ರಿಸ್ತ ಸಮಾಜಕ್ಕೆ ಒಳಿತು ಮಾಡಲಿ. ಕೆಟ್ಟದ್ದನ್ನು ಅಳಿಸಿ ಹಾಕಿ ಒಳ್ಳೆಯದನ್ನು ಉಳಿಸಲಿ. ಕೆಟ್ಟವರಿಗೂ ಒಳ್ಳೆಯ ಬುದ್ಧಿ ಕೊಡಲಿ’ ಎಂದು ಚರ್ಚ್ನ ಪಾದ್ರಿ ಶ್ರೀನಿವಾಸ ಪೌಲ್ ಸಂದೇಶ ನೀಡಿದರು.
ಶಾಸಕ ಕೆ.ಶ್ರೀನಿವಾಸಗೌಡ, ಮೈಸೂರು ಮಿನರಲ್ಸ್ ಮಾಜಿ ನಿರ್ದೇಶಕ ಆರ್.ಕಿಶೋರ್ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.