ಕೋಲಾರ: ತಾಲ್ಲೂಕಿನ ಛತ್ರಕೋಡಹಳ್ಳಿಯಲ್ಲಿ ಮಂಗಳವಾರ ಒಂದೂವರೆ ತಿಂಗಳ ಹೆಣ್ಣು ಮಗು ಸಂಪ್ಗೆ ಬಿದ್ದು ನಿಗೂಢವಾಗಿ ಮೃತಪಟ್ಟಿದ್ದು, ಪೋಷಕರೇ ಮಗುವನ್ನು ಕೊಲೆ ಮಾಡಿರುವ ಬಗ್ಗೆಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಹರ್ಷಿಣಿ ಮತ್ತು ರಘುಪತಿ ದಂಪತಿಯ 2ನೇ ಮಗು ಮಧ್ಯಾಹ್ನ ಕಾಣೆಯಾಗಿತ್ತು. ಪೋಷಕರು ಮಗು ನಾಪತ್ತೆಯಾಗಿರುವುದಾಗಿ ನೆರೆಹೊರೆಯವರಿಗೆ ತಿಳಿಸಿ ಗ್ರಾಮದಲ್ಲೆಡೆ ಹುಡುಕಾಟ ನಡೆಸಿದ್ದರು. ಬಳಿಕ ಸಂಜೆ ವೇಳೆಗೆ ಮನೆಯ ಮುಂದಿನ ನೀರಿನ ಸಂಪ್ನಲ್ಲಿ ಮಗುವಿನ ಶವ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದಂಪತಿಯ ಮೊದಲು ಮಗು ಗಂಡು. ರಘುಪತಿ ಚಾಲಕರಾಗಿದ್ದಾರೆ. ಬಾಣಂತನಕ್ಕಾಗಿ ತವರು ಮನೆಗೆ ಹೋಗಿದ್ದ ಹರ್ಷಿಣಿ ಅವರು ಮಗುವಿನೊಂದಿಗೆ ಸೋಮವಾರವಷ್ಟೇ ಪತಿಯ ಮನೆಗೆ ಹಿಂದಿರುಗಿದ್ದರು. ಮಗುವಿನ ಸಾವಿನ ಸಂಬಂಧ ಪೋಷಕರು ಗೊಂದಲದ ಹೇಳಿಕೆ ನೀಡುತ್ತಿದ್ದು, ಅವರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
‘ಹೆಣ್ಣು ಮಗುವನ್ನು ಜೋಲೆಯಲ್ಲಿ ಮಲಗಿಸಿ ಮೊದಲ ಮಗುವಿನೊಂದಿಗೆ ಮನೆಯಿಂದ ಹೊರ ಹೋಗಿದ್ದೆ. ಸ್ವಲ್ಪ ಸಮಯದ ನಂತರ ಮನೆಗೆ ಹಿಂದಿರುಗಿ ಬಂದು ನೋಡಿದಾಗ ಜೋಲೆಯಲ್ಲಿ ಮಗು ಇರಲಿಲ್ಲ. ಬಳಿಕ ಪತಿಗೆ ಕರೆ ಮಾಡಿ ಮಗು ನಾಪತ್ತೆಯಾಗಿರುವ ವಿಷಯ ತಿಳಿಸಿದೆ’ ಎಂದು ಹರ್ಷಿಣಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಘಟನೆ ಸಂಬಂಧ ರಘುಪತಿ ದಂಪತಿ, ಸಂಬಂಧಿಕರು ಹಾಗೂ ಗ್ರಾಮಸ್ಥರ ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ಪೂರ್ಣಗೊಂಡ ಬಳಿಕ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ. ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.