ADVERTISEMENT

ಅರಸರಾಗುವ ದೊಡ್ಡ ಕನಸು ಕಾಣಿ: ನೋಡಲ್ ಅಧಿಕಾರಿ ಬಾಲಾಜಿ ಕಿವಿಮಾತು

ವಿದ್ಯಾರ್ಥಿಗಳಿಗೆ ಡಯಟ್ ತಾಲ್ಲೂಕು

​ಪ್ರಜಾವಾಣಿ ವಾರ್ತೆ
Published 23 ಮೇ 2022, 13:14 IST
Last Updated 23 ಮೇ 2022, 13:14 IST
ಜಿಲ್ಲಾ ಶಿಕ್ಷಣ ಸಂಶೋಧನಾ ಸಂಸ್ಥೆ ತಾಲ್ಲೂಕು ನೋಡಲ್ ಅಧಿಕಾರಿ ಬಾಲಾಜಿ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯ ಕಂಫ್ಯೂಟರ್ ಪ್ರಯೋಗಾಲಯವನ್ನು ಪರಿಶೀಲಿಸಿದರು
ಜಿಲ್ಲಾ ಶಿಕ್ಷಣ ಸಂಶೋಧನಾ ಸಂಸ್ಥೆ ತಾಲ್ಲೂಕು ನೋಡಲ್ ಅಧಿಕಾರಿ ಬಾಲಾಜಿ ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯ ಕಂಫ್ಯೂಟರ್ ಪ್ರಯೋಗಾಲಯವನ್ನು ಪರಿಶೀಲಿಸಿದರು   

ಕೋಲಾರ: ‘ಧೈರ್ಯ, ಬುದ್ದಿಶಕ್ತಿ, ಕೌಶಲದಿಂದ ಜೀವನದಲ್ಲಿ ಯಶಸ್ಸು ಕಂಡುಕೊಳ್ಳಿ. ಅರಸಾಗುವ ಕನಸು ಕಾಣಿ’ ಎಂದು ಜಿಲ್ಲಾ ಶಿಕ್ಷಣ ಸಂಶೋಧನಾ ಸಂಸ್ಥೆ (ಡಯಟ್) ತಾಲ್ಲೂಕು ನೋಡಲ್ ಅಧಿಕಾರಿ ಬಾಲಾಜಿ ಕಿವಿಮಾತು ಹೇಳಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಪರಿಶೀಲನೆ ನಡೆಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಮಾತನಾಡಿ, ‘ಅಬ್ದುಲ್ ಕಲಾಂ ಹೇಳುವಂತೆ ಕಾಣುವ ಕನಸು ದೊಡ್ಡದಿರಲಿ’ ಎಂದರು.

‘ನಾವು ನಮ್ಮ ಮಿದುಳಿನ ಶೇ 5ರಷ್ಟನ್ನು ಬಳಸಿಕೊಳ್ಳುತ್ತಿಲ್ಲ. ಶೇ.12 ರಷ್ಟು ಬಳಸಿಕೊಂಡ ವಿಶ್ವೇಶ್ವರಯ್ಯ, ಅಂಬೇಡ್ಕರ್, ಬುದ್ಧ ಮತ್ತಿತರರು ಜ್ಞಾನದ ಬೆಳಕಾಗಿ, ಸಾಧಕರಾಗಿ ಸಮಾಜಕ್ಕೆ ದಾರಿದೀಪವಾದರು. ಕೀಳರಿಮೆಯ ಅಗತ್ಯವಿಲ್ಲ. ಅದನ್ನು ಹೊರಹಾಕಿ ಸಾಧಿಸುವ ಛಲ, ಶ್ರದ್ಧೆ ಮೈಗೂಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ADVERTISEMENT

‘ಪ್ರೌಢಾವಸ್ಥೆ ದೈಹಿಕ ಬದಲಾವಣೆಯ ವಸಂತಕಾಲ. ಈ ಸಂದರ್ಭದಲ್ಲಿ ದಾರಿ ತಪ್ಪಬಾರದು. ಮನಸ್ಸಿನ ನಿಗ್ರಹ ಅತಿ ಮುಖ್ಯ. ವಿದ್ಯಾರ್ಥಿಗಳಲ್ಲಿ ಕಲಿಕೆಯ ದಾಹ ಅಗತ್ಯ. ಆ ದಾಹ ತೀರಿಸಲು ಉತ್ತಮ ಶಿಕ್ಷಕರಿದ್ದಾರೆ. ಗೊಂದಲ ಪರಿಹರಿಸಿಕೊಂಡು ಸಾಧಕರಾಗಿ ಹೊರಹೊಮ್ಮಿ’ ಎಂದು ಆಶಿಸಿದರು.

ಸಮಯಪ್ರಜ್ಞೆ ಅಗತ್ಯ: ‘ಬಡವರು ಎಂಬ ಆಲೋಚನೆ ಬೇಡ. ಉತ್ತಮ ಆರೋಗ್ಯ, ವಿಕಲವಲ್ಲದ ಅಂಗಾಂಗಗಳಲ್ಲಿ ಶ್ರೀಮಂತರಾಗಿದ್ದೇವೆ. ದುಡಿದು ತಿನ್ನುವ ಶಕ್ತಿಯೇ ನಮ್ಮ ಶ್ರೀಮಂತಿಕೆ. ಕಷ್ಟಪಟ್ಟು ಮತ್ತು ಇಷ್ಟಪಟ್ಟು ಓದಿದರೆ ಸಾಧಕರಾಗಬಹುದು. ಪ್ರಾಮಾಣಿಕ ಪರಿಶ್ರಮದಿಂದ ಸಿಗುವ ಸಾಧನೆ ತೃಪ್ತಿ ತರುತ್ತದೆ. ಅಡ್ಡ ದಾರಿಯಲ್ಲಿ ಮಾಡಿದ ಸಾಧನೆ ಎಂದಿಗೂ ತೃಪ್ತಿ ತಾರದು' ಎಂದು ಅಭಿಪ್ರಾಯಪಟ್ಟರು.

‘ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆಲ್ಲುವ ಕನಸು ಕಟ್ಟಿ. ಸ್ವಾವಲಂಬಿ ಬದುಕಿನ ಪಾಠ ಕಲಿತು ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿತ್ವ ರೂಪಿಸಿಕೊಳ್ಳಿ. ಬದುಕಿನ ಪ್ರತಿ ಹಂತದಲ್ಲೂ ಸಮಯಪ್ರಜ್ಞೆ ಅಗತ್ಯ. ಪ್ರತಿ ನಿಮಿಷ ಸದ್ಬಳಕೆ ಮಾಡಿಕೊಳ್ಳಿ’ ಎಂದರು.

ಎಸ್‍ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ, ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸಿದ್ದೇಶ್ವರಿ, ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ, ಭವಾನಿ, ಶ್ವೇತಾ, ಕೆ.ಲೀಲಾ, ಫರೀದಾ,ಶ್ರೀನಿವಾಸಲು, ಡಿ.ಚಂದ್ರಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.