ADVERTISEMENT

ಮಾಲೂರು: ಸರ್ಕಾರಿ ಸ್ವತ್ತು ಉಳಿಸಲು ಅಧಿಕಾರಿಗಳ ನಿರ್ಲಕ್ಷ್ಯ

ಕರ್ನಾಟಕ ದಲಿತ ಸಂಘರ್ಷ ಸಮಿತಿ ಆರೋಪ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 4:48 IST
Last Updated 17 ಮಾರ್ಚ್ 2021, 4:48 IST
ಸರ್ಕಾರಿ ಸ್ವತ್ತುಗಳನ್ನು ಉಳಿಸಿಕೊಳ್ಳುವಲ್ಲಿ ಪುರಸಭೆ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಿ ಮಾಲೂರಿಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಕಾರ್ಯಕರ್ತರು ಪ್ರತಿಭಟಿಸಿದರು
ಸರ್ಕಾರಿ ಸ್ವತ್ತುಗಳನ್ನು ಉಳಿಸಿಕೊಳ್ಳುವಲ್ಲಿ ಪುರಸಭೆ ನಿರ್ಲಕ್ಷ್ಯವಹಿಸಿದೆ ಎಂದು ಆರೋಪಿಸಿ ಮಾಲೂರಿಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಕಾರ್ಯಕರ್ತರು ಪ್ರತಿಭಟಿಸಿದರು   

ಮಾಲೂರು: ಸರ್ಕಾರಿ ಸ್ವತ್ತುಗಳನ್ನು ಉಳಿಸಿಕೊಳ್ಳುವಲ್ಲಿ ಪುರಸಭೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಕಾರ್ಯಕರ್ತರು ಪಟ್ಟಣದ ಪುರಸಭೆ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕುಸಂಚಾಲಕ ಎಸ್.ಎಂ.ವೆಂಕಟೇಶ್ ಮಾತನಾಡಿ, ತಾಲ್ಲೂಕು ರಾಜಧಾನಿಗೆ ಸನಿಹ ಇರುವುದರಿಂದ ಭೂಮಿಯ ಬೆಲೆ ಗಗನಕ್ಕೆರುತ್ತಿದೆ. ಭೂಮಾಫಿಯಾಗಳ ಕಣ್ಣು ತಾಲ್ಲೂಕಿನ ಸರ್ಕಾರಿ ಜಮೀನುಗಳ ಮೇಲೆ ಬಿದ್ದಿದೆ. ಸರ್ಕಾರಿ ಗೋಮಾಳ, ರಾಜಕಾಲುವೆ, ಗುಂಡು ತೋಪು ಜಮೀನುಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಕಬಳಿಸುತ್ತಿದ್ದಾರೆ ಎಂದು ದೂರಿದರು.

ಭೂ ಪರಿವರ್ತನೆ ಮಾಡಿಸದೆ ಅಕ್ರಮ ಬಡಾವಣೆಗಳನ್ನು ನಿರ್ಮಿಸಿ ಮಾರಾಟ ಮಾಡುತ್ತಿರುವ ಜಾಲ ನಿರಂತರವಾಗಿ ಸಾಗುತ್ತಿದೆ. ಅಕ್ರಮ ಬಡಾವಣೆಗಳಿಗೆ ಸಂಬಂಧಿಸಿದ ನಿವೇಶನಗಳಿಗೆ ಖಾತೆ ಮಾಡಲು ಅಧಿಕಾರಿಗಳು ಸಾಕಷ್ಟು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾಡಳಿತಕ್ಕೆ ಕಾನೂನು ರೀತಿ ಕ್ರಮಜರುಗಿಸಿ ಸರ್ಕಾರಿ ಜಮೀನು ಉಳಿಸಿ ಸರ್ಕಾರದ ವಶಕ್ಕೆ ಪಡೆಯಬೇಕೆಂದು ಮನವಿ ಮಾಡಿದರೂ ಪುರಸಭೆ ಆಡಳಿತ ಸುಮ್ಮನೆ ಕಣ್ಣುಮುಚ್ಚಿ ಕುಳಿತಿದೆ ಎಂದು ದೂರಿದರು.

ADVERTISEMENT

ಪುರಸಭಾ ವ್ಯಾಪ್ತಿಗೆ ಬರುವ ಖಾಸಗಿ ಬಡಾವಣೆಗಳಲ್ಲಿ ರಸ್ತೆಗಳು ಹಾಗೂ ಪಾರ್ಕ್‌ಗಳನ್ನು ನಿರ್ಮಿಸಬೇಕಾದಸ್ಥಳಗಳಿಗೆ ಪುರಸಭೆ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದು, ಅಕ್ರಮ ಖಾತೆದಾರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚವ್ವೇನಹಳ್ಳಿ ವಿಜಿ, ಜೆ.ಎಸ್.ಸುಬ್ರಮಣಿ, ಬಂಟಹಳ್ಳಿ ನಾರಾಯಣಸ್ವಾಮಿ, ಗೋಪಿ, ಶಂಕರ್, ತಿರುಮಲೇಸ್, ಕೃಷ್ಣಪ್ಪ, ಮಂಜುನಾಥ್, ಮುನಿರಾಜು, ಮಂಜುನಾಥ ನಾಯ್ಡು, ಶಾಮಣ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.