ADVERTISEMENT

ಪೌರತ್ವ ಕಾಯ್ದೆ ವಿರೋಧಿಸುವವರೆ ದೇಶ ದ್ರೋಹಿಗಳು: ಸಂಸದ ಎಸ್.ಮುನಿಸ್ವಾಮಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 13:55 IST
Last Updated 28 ಡಿಸೆಂಬರ್ 2019, 13:55 IST
ಎಸ್.ಮುನಿಸ್ವಾಮಿ
ಎಸ್.ಮುನಿಸ್ವಾಮಿ   

ಕೋಲಾರ: ‘ಪೌರತ್ವ ಕಾಯ್ದೆಗೆ (ಸಿಎಎ) ವಿರೋಧ ವ್ಯಕ್ತಪಡಿಸುವವರು ದೇಶ ದ್ರೋಹಿಗಳು’ ಎಂದು ಸಂಸದ ಎಸ್.ಮುನಿಸ್ವಾಮಿ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರ ಸರ್ಕಾರದ ಸಾಧನೆಗಳನ್ನು ಸಹಿಸಿಕೊಳ್ಳಲಾದ ರಾಜಕೀಯ ಪಕ್ಷಗಳು ಕಾಯ್ದೆಯ ವಿರುದ್ಧ ಅಯಾಯಕ ಜನರಿಂದ ಹೋರಾಟ ಮಾಡಿಸುತ್ತಿದ್ದಾರೆ. ದೇಶದಲ್ಲಿ ಕಾಂಗ್ರೆಸ್ ನಾಯಕರು ಸರಿಯಿದಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿಲಿಲ್ಲ’ ಎಂದು ತಿಳಿಸಿದರು.

‘ಪೌರತ್ವ ಕಾಯ್ದೆ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಜ.4ರಂದು ಬಿಜೆಪಿಯಿಂದ ನಗರದಲ್ಲಿ ಜಾಗೃತಿ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಂತರ ನಡೆಸಿದ ನಂತರ ನಡೆಯಲಿರುವ ಸಭೆಯಲ್ಲಿ ತಜ್ಞರು ಕಾಯ್ದೆ ಕುರಿತು ಮಾಹಿತಿ ನೀಡುತ್ತಾರೆ. ಮೆರವಣಿಗೆ ದಿನ ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಕಗಳನ್ನು ಕೈಗೊಳ್ಳಲಾಗಿದೆ’ ಎಂದು ಹೇಳಿದರು.

ADVERTISEMENT

‘ಕಾಯ್ದೆಯಿಂದ ದೇಶದಲ್ಲಿನ ಯಾವುದೇ ಸಮುದಾಯಕ್ಕೆ ತೊಂದರೆ ಆಗುವುದಿಲ್ಲ. ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ ಮುಂತಾದ ದೇಶಗಳಲ್ಲಿ ತೊಂದರೆಗೆ ಒಳಗಾಗಿ ಭಾರತ ದೇಶಕ್ಕೆ ಬಂದಿರುವ ಹಿಂದು, ಕ್ರಿಶ್ಚಿಯನ್ ಹಾಗು ಜೈನ, ಸಿಖ್ ವರ್ಗದ ವ್ಯಕ್ತಿಗಳ ಅನುಕೂಲಕ್ಕಾಗಿ ಪರ ಪೌರತ್ವ ಕಾಯ್ದೆ ಜಾರಿಗೆ ತರಲಾಗುತ್ತಿದೆ’ ಎಂದು ತಿಳಿಸಿದರು.

‘ಈ ಕಾಯ್ದೆಯನ್ನೇ ಕಾಂಗ್ರೆಸ್ ಮತ್ತು ತೃಣ ಮೂಲ ಕಾಂಗ್ರೆಸ್ ಮುಂತಾದ ಪಕ್ಷಗಳು ದೇಶಾದ್ಯಂತ ಹೋರಾಟ ನಡೆಸುತ್ತಿದ್ದು, ಅಲ್ಪಸಂಖ್ಯಾತರಲ್ಲಿ ವಿಷ ಬೀಜ ಬಿತ್ತಿ ಕೆಲಸ ನಡೆಯುತ್ತಿದೆ. ಹಿಂದು ಮುಸ್ಲಿಂ, ಕ್ರೈಸ್ತ ಎಂಬ ಭಾವನೆ ನಮಗೆ ಇಲ್ಲ, ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲಿ ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದೇವೆ. ವಿವಿಧ ವರ್ಗಗಳ ಜನರನ್ನು ವಿಭಜನೆ ಮಾಡುವ ಕುತಂತ್ರ ಕಾಂಗ್ರೆಸ್‌ನಿಂದ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ದೇಶದಲ್ಲಿನ ಎಲ್ಲ ಸಮುದಾಯಗಳಿಗೆ ಸರ್ಕಾರದಿಂದ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜನರ ಪರ ರೂಪಿಸಿದೆ ಹೊರತು, ವ್ಯಕ್ತಿ, ಪಕ್ಷದ ಪರವಲ್ಲ. ಕಾಂಗ್ರೆಸ್‌ನವರಿಗೆ ಬೇರೆ ದಾರಿ ಇಲ್ಲದೆ ಅಲ್ಪಸಂಖ್ಯಾತರನ್ನು ಎತ್ತಿಕಟ್ಟಿ ದೇಶವನ್ನು ವಿಭಜನೆ ಮಾಡಲು ಹೊರಟಿದ್ದಾರೆ’ ಎಂದು ಟೀಕಿಸಿದರು.

‘ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತೀರ್ಮಾನ ಸರಿಯಾಗಿದೆ. ಇದಕ್ಕೆ ಮುಸ್ಲಿಂ ಮತ್ತು ಕ್ರೀಸ್ತ ಸಮುದಾಯದ ಧರ್ಮ ಗುರುಗಳು ಸಹ ಕಾಯ್ದೆಯನ್ನು ಒಪ್ಪಿಕೊಂಡಿದ್ದಾರೆ. ಆದರೂ ಸಹ ಮಾಹಿತಿ ಕೊರತೆಯಿಂದ ಕಾಯ್ದೆಯನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ಯು.ಟಿ.ಖಾದರ್ ಮಂಗಳೂರಿನಲ್ಲಿ ಉದ್ದೇಶಪೂರ್ವಕವಾಗಿಯೇ ಹೋರಾಟ ನಡೆಸಿದ್ದಾರೆ’ ಎಂದು ದೂರಿದರು.

ಬಿಜೆಪಿ ಮುಖಂಡ ಚಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಪೌರತ್ವ ಕಾಯ್ದೆಯಿಂದ ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆ ಇಲ್ಲ. ಇದು ಹೊರಗಿನಿಂದ ಬಂದಿರುವ ಹಿಂದು, ಕ್ರೈಸ್ತ, ಸಿಖ್, ಜೈನ ಧರ್ಮದವರಿಗೆ ಪೌರತ್ವ ನೀಡುವ ಕಾಯ್ದೆ ಆಗಿದೆ’ ಎಂದರು.

ಬಿಜೆಪಿ ಜಿಲ್ಲಾ ಘಟಕದ ವೆಂಕಟಮುನಿಯಪ್ಪ, ಉಪಾಧ್ಯಕ್ಷ ವಿಜಿಕುಮಾರ್, ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಓಂ ಶಕ್ತಿ ಚಲಪತಿ, ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.