ADVERTISEMENT

ಟೊಮೆಟೊ ಬೆಳೆ; ರೈತರ ಪರದಾಟ

ಎಕರೆ ಬೆಳೆಗೆ ₹ 3 ಲಕ್ಷ ಖರ್ಚು; ಒಮ್ಮೊಮ್ಮೆ ಬಂಡವಾಳವೂ ವಾಪಸ್‌ ಸಿಗಲ್ಲ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2024, 16:14 IST
Last Updated 10 ಡಿಸೆಂಬರ್ 2024, 16:14 IST
ಟೊಮೆಟೊ ಬೆಳೆ
ಟೊಮೆಟೊ ಬೆಳೆ   

ಕೋಲಾರ: ಬಯಲುಸೀಮೆ ಜಿಲ್ಲೆಯ ರೈತರಿಗೆ ಬದುಕು ಕಟ್ಟಿಕೊಟ್ಟಿರುವ, ಅವರ ಜೀವನ ಹಸನಗೊಳಿಸಿರುವ ಬೆಳೆ ಟೊಮೆಟೊ. ಈ ಭಾಗದಲ್ಲಿ ಕೆಂಪು ಚಿನ್ನವೆಂದೇ ಪ್ರಸಿದ್ಧಿ!

ರೈತರಷ್ಟೇ ಅಲ್ಲ; ಮಂಡಿ ಮಾಲೀಕರು, ವರ್ತಕರು, ಮಧ್ಯವರ್ತಿಗಳು, ಸಾಗಣೆ ವಾಹನಗಳ ಮಾಲೀಕರು, ಚಾಲಕರು, ಕೂಲಿಕಾರರು, ಹಮಾಲಿಗಳು ಸೇರಿದಂತೆ ಅದೆಷ್ಟೊ ಜನರ ಬದುಕಿಗೆ ಆಸರೆಯಾಗಿದೆ.

ರಾಜ್ಯದಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಟೊಮೆಟೊ ಬೆಳೆಯುವ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿದ್ದು, ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿರುವ ಇಲ್ಲಿನ ಎಪಿಎಂಸಿಯಿಂದ ಹೊರ ಜಿಲ್ಲೆ, ಹೊರ ರಾಜ್ಯ ಹಾಗೂ ವಿದೇಶಕ್ಕೆ ಪ್ರತಿನಿತ್ಯ ರಫ್ತಾಗುತ್ತದೆ. ಜಿಲ್ಲೆಯಲ್ಲಿ ಏಪ್ರಿಲ್‌ ತಿಂಗಳಿನಿಂದ ಅಕ್ಟೋಬರ್‌ ಅಂತ್ಯದ ಅವಧಿಯು ಟೊಮೆಟೊ ಋತುಮಾನವಾಗಿದೆ.

ADVERTISEMENT

1 ಎಕರೆ ಟೊಮೆಟೊ ಬೆಳೆಯಲು ₹ 3 ಲಕ್ಷ ಬಂಡವಾಳ ಹೂಡಬೇಕು. 15 ಕೆ.ಜಿ.ತೂಗುವ ಬಾಕ್ಸ್‌ ಟೊಮೆಟೊಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ಹರಾಜಿನಲ್ಲಿ ಗರಿಷ್ಠ ₹ 300 ಸಿಕ್ಕರೆ ಹಾಕಿದ ಬಂಡವಾಳಕ್ಕೆ ಮೋಸವಿಲ್ಲ. ಕಮಿಷನ್‌, ಸಾಗಣೆ, ಕೂಲಿ ವೆಚ್ಚ ಹೋಗಿ ಒಂದಿಷ್ಟು ಲಾಭವೂ ಸಿಗುತ್ತದೆ. ಅದಕ್ಕಿಂತ ಕಡಿಮೆ ದರಕ್ಕೆ ಮಾರಾಟವಾದರೆ ನಷ್ಟ ಕಟ್ಟಿಟ್ಟ ಬುತ್ತಿ.

‘ಎರಡು ಎಕರೆಯಲ್ಲಿ ಟೊಮೆಟೊ ನಾಟಿ ಮಾಡಲು ₹ 6 ಲಕ್ಷ ಬಂಡವಾಳ ಹೂಡುತ್ತಿದ್ದೇನೆ. ಉಳುಮೆ, ಗೊಬ್ಬರ, ಮಲ್ಚಿಂಗ್‌ ಪೇಪರ್‌, ನಾರು (ಸಸಿ), ಕೀಟನಾಶಕ, ಹನಿ ನೀರಾವರಿ ವ್ಯವಸ್ಥೆ, ಕೂಲಿಗೆ ಇಷ್ಟು ಖರ್ಚಾಗುತ್ತದೆ. ಹಣ್ಣು ಬಿಡಲು 65 ದಿನ ಕಾಯಬೇಕು, ಎಕರೆಗೆ 30 ಟನ್‌ ಟೊಮೆಟೊ ಸಿಗುತ್ತದೆ. ಪ್ರಕೃತಿ ವಿಕೋಪ, ದರ ಕುಸಿತದಂಥ ತೊಂದರೆ ಆಗದಿದ್ದರೆ ಎಕರೆಗೆ ₹ 5 ಲಕ್ಷದವರೆಗೆ ಸಿಗುತ್ತದೆ. ₹ 3 ಲಕ್ಷ ಬಂಡವಾಳ ಕಳೆದರೆ ₹ 2 ಲಕ್ಷ ಲಾಭ ಸಿಗುತ್ತದೆ. ಒಮ್ಮೊಮ್ಮೆ ಹಾಕಿದ ಬಂಡವಾಳವೂ ಬರಲ್ಲ’ ಎನ್ನುತ್ತಾರೆ ಜಿಲ್ಲೆಯ ಹುತ್ತೂರು ಗ್ರಾಮದ ರೈತ ಸತೀಶ್‌.

ಕಳೆದ ವರ್ಷ 15 ಕೆ.ಜಿ ಟೊಮೆಟೊ ಬಾಕ್ಸ್‌ಗೆ ₹ 2,700ವರೆಗೆ ಬೆಲೆ ಬಂದಿತ್ತು. ಆಗ ಹಲವು ರೈತರು ಭಾರಿ ಲಾಭ ಗಿಟ್ಟಿಸಿಕೊಂಡಿದ್ದರು. ಟೊಮೆಟೊ ವರ್ತಕರು, ಮಂಡಿ ಮಾಲೀಕರು ಮೊದಲೇ ರೈತರಿಗೆ ಇಂತಿಷ್ಟು ಹಣ ನೀಡಿ ಬೆಳೆ ಬೆಳೆಯಲು ಪ್ರೋತ್ಸಾಹಿಸುತ್ತಾರೆ. ಬೆಳೆ ಬಂದ ಮೇಲೆ ವರ್ತಕರು ಮಾರಾಟ ಮಾಡಿ ಲಾಭ ಗಳಿಸುತ್ತಾರೆ. ಇಷ್ಟೇ ಅಲ್ಲ; ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಹೀಗಾಗಿ, ಬೆವರು ಸುರಿಸಿ ಬೆಳೆ ಬೆಳೆಯುವ ರೈತರಿಗೆ ಹಾಕಿದ ಬಂಡವಾಳ ವಾಪಸ್‌ ಬಂದರೆ ಅದೇ ಲಾಭ ಎನ್ನುವ ಪರಿಸ್ಥಿತಿ ಬಂದಿದೆ.

ಬೆಲೆ ಏರಿಳಿತ, ಕೀಟಬಾಧೆ, ಪ್ರಕೃತಿ ವಿಕೋಪ ಹಾಗೂ ದಲ್ಲಾಳಿಗಳ ಕಾಟ ಇತ್ತೀಚಿನ ದಿನಗಳಲ್ಲಿ ಟೊಮೆಟೊ ಬೆಳೆಗಾರರನ್ನು ಹೈರಾಣಾಗಿಸಿದೆ.

ಎಲೆ ಮುಟುರು ರೋಗ (ಬಿಳಿ ನೊಣ ಬಾಧೆ) ಸೇರಿದಂತೆ ವಿವಿಧ ರೋಗಗಳು ಬಾಧಿಸುತ್ತಿವೆ. ಕೆಲ ನರ್ಸರಿಗಳಿಂದ ವಿತರಣೆ ಆಗುತ್ತಿರುವ ಕಳಪೆ ಸಸಿಯಿಂದಲೂ ಇಳುವರಿ ತಗ್ಗಿದೆ. ಕಳಪೆ ಕೀಟನಾಶ, ಕಳಪೆ ಗೊಬ್ಬರವೂ ಇದಕ್ಕೆ ಕಾರಣವಾಗುತ್ತಿದೆ ಎಂಬುದು ರೈತರ ದೂರು.

ಹೈನುಗಾರಿಕೆಗೆ ಮೊರೆ: ‘ಎರಡು ಎಕರೆಯಲ್ಲಿ ಟೊಮೆಟೊ ಬೆಳೆದು ಎರಡು ವರ್ಷಗಳಲ್ಲಿ ₹ 6 ಲಕ್ಷ ನಷ್ಟವಾಯಿತು. ಹೀಗಾಗಿ, ಟೊಮೆಟೊ ಬಿಟ್ಟು ಹೈನುಗಾರಿಕೆಯಲ್ಲಿ ತೊಡಗಿದ್ದೇನೆ. ಜಿಲ್ಲೆಯಲ್ಲಿ ಟೊಮೆಟೊಗೆ ರೋಗ ಹೆಚ್ಚುತ್ತಿದೆ, ಅಕಾಲಿಕ ಮಳೆ, ಬಿಸಿಲು ಹೆಚ್ಚಿದ್ದು, ಸರಿಯಾಗಿ ಬೆಲೆ ಸಿಗುತ್ತಿಲ್ಲ’ ಎಂದು ಹೇಳುತ್ತಾರೆ ತಾಲ್ಲೂಕಿನ ತೊಟ್ಲಿ ಗ್ರಾಮದ ರೈತ ಮುರಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.