ADVERTISEMENT

ಕೋಲಾರ: ಸ್ವಚ್ಛತಾ ಅಭಿಯಾನದಡಿ ವಿತರಿಸಿದ ಕಸದ ಬುಟ್ಟಿಯಲ್ಲಿ ಟೊಮೆಟೊ, ರಾಗಿ!

ನಂಗಲಿ: ಗ್ರಾಮಗಳ ರಸ್ತೆಗಳಲ್ಲೇ ಉಳಿದ ಕಸ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 1:57 IST
Last Updated 26 ನವೆಂಬರ್ 2021, 1:57 IST
ನಂಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಕೂಲಿ ಕಾರ್ಮಿಕರು ಟೊಮೆಟೊ ಬಿಡಿಸಲು ಕಸದ ಬುಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಿರುವುದು
ನಂಗಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಕೂಲಿ ಕಾರ್ಮಿಕರು ಟೊಮೆಟೊ ಬಿಡಿಸಲು ಕಸದ ಬುಟ್ಟಿಗಳನ್ನು ತೆಗೆದುಕೊಂಡು ಹೋಗುತ್ತಿರುವುದು   

ನಂಗಲಿ: ಸ್ವಚ್ಛ ಭಾರತ್ ಅಭಿಯಾನ್‌ ಯೋಜನೆಯಡಿ ಗ್ರಾಮಗಳು ಸ್ವಚ್ಛವಾಗಿರಲು ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿ ಮನೆಗೆ ಕಸದ ಬುಟ್ಟಿಗಳನ್ನು ನೀಡಲಾಗಿತ್ತು. ಆದರೆ ಈ ಕಸದ ಬುಟ್ಟಿಗಳಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಬಳಕೆಯಾಗುತ್ತಿಲ್ಲ. ಬದಲಿಗೆ, ನಿತ್ಯ ಹಲವು ಲಾಭದಾಯಕ ಚಟುವಟಿಕೆಗೆ ಈ ಬುಟ್ಟಿಗಳನ್ನು ಜನರು ಬಳಸಿಕೊಳ್ಳುತ್ತಿದ್ದಾರೆ.

ಕಸದ ಸಮಸ್ಯೆಯಿಂದ ಎದುರಾಗಬಹುದಾದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಹಾಗೂ ಪ್ರತಿ ಮನೆ ಸ್ವಚ್ಛವಾಗಿಡಲು ಕಸ ಸಂಗ್ರಹ ಮಾಡಲು ಯೋಜನೆ ರೂಪಿಸಲಾಗಿದೆ. ಪ್ರತಿ ಮನೆಗೆ ಕಸದ ಬುಟ್ಟಿಗಳನ್ನು ವಿತರಣೆ ಮಾಡಿ, ಹಸಿ ಮತ್ತು ಒಣ ಕಸವಾಗಿ ವಿಂಗಡಿಸಿ ಬುಟ್ಟಿಗಳಲ್ಲಿ ಹಾಕಿಡಬೇಕು ಎಂದು ಸೂಚಿಸಲಾಗಿತ್ತು. ಆದರೆ, ಇದು ಕಾರ್ಯಗತವಾಗಿಲ್ಲ.

ಕಸದ ಬುಟ್ಟಿಗಳನ್ನು ಟೊಮೆಟೊ ಬಿಡಿಸಲು, ಹೂ ಗಿಡಗಳನ್ನು ಇಡಲು, ಬಟ್ಟೆಗಳನ್ನು ಹೊಗೆಯಲು, ರಾಗಿ ತೆನೆ ಕೊಯ್ಯುವಾಗ ತೆನೆ ಹಾಕಿಕೊಳ್ಳಲು, ನೀರು ಹಿಡಿದುಕೊಂಡು ಬರಲು... ಹೀಗೆ ನಾನಾ ಕೆಲಸಗಳಿಗೆ ಬಳಕೆ ಮಾಡುತ್ತಿದ್ದು ಸರ್ಕಾರದ ಕೋಟ್ಯಂತರ ರೂಪಾಯಿಗಳ ಯೋಜನೆ ಹಳ್ಳಿಗಳಲ್ಲಿ ಬಹುತೇಕ ವಿಫಲವಾಗಿದೆ. ಕಸ ಗ್ರಾಮಗಳ ರಸ್ತೆ ಬದಿಯಲ್ಲಿ ಕಾಣತೊಡಗಿದೆ.

ADVERTISEMENT

‘ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ಪ್ರತಿ ಗ್ರಾಮದಲ್ಲಿ ಕಸದ ಬುಟ್ಟಿಗಳನ್ನು ವಿತರಣೆ ಮಾಡುವ ಸಮಯದಲ್ಲಿ ಒಣ ಮತ್ತು ಹಸಿ ಕಸವನ್ನು ಯಾವ ಬುಟ್ಟಿಯಲ್ಲಿ ಹಾಕಬೇಕು ಮತ್ತು ಬುಟ್ಟಿಗಳು ತುಂಬಿದಾಗ ಗ್ರಾಮ ಪಂಚಾಯಿತಿ ವತಿಯಿಂದ ಬರುವ ಕಸದ ವಾಹನಕ್ಕೆ ಕೊಡಬೇಕು ಎಂದು ಸೂಚನೆಯನ್ನು ನೀಡಿದ್ದರು. ಆದರೆ, ಜನ ದಿನಗಳು ಕಳೆದಂತೆ ಕಸದ ಬುಟ್ಟಿಗಳನ್ನು ನಾನಾ ಕೆಲಸಗಳಿಗೆ ಉಪಯೋಗಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ’ ಎಂದು ಹೆಸರು ಹೇಳಲು ಇಚ್ಚಿಸದ ಪಿಡಿಒ ಒಬ್ಬರು ಹೇಳಿದರು.

ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿ ಸರ್ವೇಶ್ ಅವರನ್ನು ಸಂಪರ್ಕಿಸಿದಾಗ, ‘ಕೊರೊನಾ ಲಾಕ್ ಡೌನ್ ಸಮಯದಲ್ಲಿ ಕಸದ ಬುಟ್ಟಿಗಳ ಕುರಿತು ಪ್ರತಿ ಹಳ್ಳಿಯಲ್ಲಿ ಪರಿಶೀಲನೆ ಮಾಡಲು ಆಗಿರಲಿಲ್ಲ. ಆದರೆ ಲಾಕ್ ಡೌನ್ ಮುಗಿದ ಮೇಲೆ ಸ್ವಚ್ಛತಾ ಸಂಕೀರ್ಣ ಘಟಕಗಳನ್ನು ಎಲ್ಲಾ ಕಡೆಗಳಲ್ಲಿ ಪ್ರಾರಂಭಿಸಲಾಗಿದೆ. ಪಂಚಾಯಿತಿಗಳ ಹಳ್ಳಿಗಳಲ್ಲಿ ದಿನ ಬಿಟ್ಟು ದಿನ ಗ್ರಾಮ ಪಂಚಾಯಿತಿಯ ವಾಹನ ಕಸವನ್ನು ಸಂಗ್ರಹಿಸಿಕೊಂಡು ಹಸಿ ಮತ್ತು ಒಣ ಕಸವನ್ನು ಕಸ ವಿಲೇವಾರಿ ಘಟಕಗಳಲ್ಲಿ ಹಾಕುವಂತೆ ಸೂಚಿಸಲಾಗಿದೆ. ಕಸವನ್ನು ಸಂಗ್ರಹಿಸುವ ಚಿತ್ರಗಳನ್ನು ವಾಟ್ಸ್‌ ಆ್ಯಪ್‌ ಮೂಲಕ ಕಳುಹಸಿಕೊಡುವಂತೆ ಸೂಚಿಸಲಾಗಿದೆ. ಎಲ್ಲಾ ಕಡೆಗಳಲ್ಲಿ ಕಸದ ಬುಟ್ಟಿಗಳ ಸದ್ಬಳಕೆ ಹಾಗೂ ಕಸ ವಿಲೇವಾರಿ ಕುರಿತು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.