ಕೋಲಾರ: ‘ಛಾಯಾಗ್ರಹಣ ವೃತ್ತಿ ಮತ್ತು ಅಭ್ಯಾಸದ ಬಗ್ಗೆ ವಿಧ್ಯಾರ್ಥಿಗಳಿಗೆ ತರಬೇತಿ ಶಿಬಿರ ಆಯೋಜಿಸಿ ಅವರ ಜೀವನಕ್ಕೆ ದಾರಿ ತೋರಬೇಕು’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸಲಹೆ ನೀಡಿದರು.
ಜಿಲ್ಲಾ ಛಾಯಾಗ್ರಾಹಕರ ಸಂಘವು ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಮಾತನಾಡಿ, ‘ಒಂದು ಛಾಯಾಚಿತ್ರವು ಸಾವಿರ ಪದಗಳಿಗೆ ಸಮನಾದ ಅರ್ಥ ನೀಡುತ್ತದೆ. ಅಂತಹ ಚಿತ್ರಗಳನ್ನು ಛಾಯಾಗ್ರಾಹಕ ಸೆರೆ ಹಿಡಿಯಬೇಕು. ಛಾಯಾಚಿತ್ರಗಳು ಜೀವನದ ಜೀವನದ ನೆನಪಿನ ಬುತ್ತಿ ಮರುಕಳಿಸುವಂತೆ ಮಾಡುತ್ತವೆ’ ಎಂದರು.
‘ಇಂದಿನ ಡಿಜಿಟಲ್ ಯುಗದಲ್ಲಿ ಫೋಟೋಗ್ರಫಿ ಇಲ್ಲವಾದರೆ ನಗು ಕೂಡ ದೂರವಾಗುತ್ತದೆ. ನಗಿಸುವ ಫೋಟೋಗ್ರಫಿ ವೃತ್ತಿಯನ್ನು ಜನರಿಗೆ ಪರಿಚಯಿಸಬೇಕು. ಪ್ರವಾಸಿ ತಾಣಗಳಲ್ಲಿ ಇಂತಹ ವೃತಿಗೆ ಹೆಚ್ಚಿನ ಮನ್ನಣೆ ಸಿಗುವ ವ್ಯವಸ್ಥೆ ಮಾಡಿರುವುದು ಆಶಾದಾಯಕ ಬೆಳವಣಿಗೆ’ ಎಂದು ಅಭಿಪ್ರಾಯಪಟ್ಟರು.
‘ಸಾಕಷ್ಟು ಛಾಯಾಗ್ರಾಹಕರಿಗೆ ಫೋಟೋಗ್ರಫಿ ವಿಷಯದ ದಿಪ್ಲೊಮಾ ಕೋರ್ಸ್ ಇರುವುದು ಗೊತ್ತಿಲ್ಲ. ಈ ಕೋರ್ಸ್ ಪೂರ್ಣಗೊಳಿಸಿದರೆ ಉದ್ಯೋಗಾವಕಾಶ ಸಿಗುತ್ತವೆ. ಛಾಯಾ ಪತ್ರಿಕೋದ್ಯಮ, ಫೈನಾನ್ಸ್ ಪೊಟೋಗ್ರಫಿ, ಪ್ಯಾಶನ್ ಫೋಟೋಗ್ರಫಿ ಹಲವು ಕೋರ್ಸ್ಗಳು ಬೆಂಗಳೂರಿನಲ್ಲಿವೆ’ ಎಂದು ವಿವರಿಸಿದರು.
ಸೇತುವೆಯಂತೆ ಕಾರ್ಯ: ‘ಪತ್ರಿಕೆಗಳಿಗೂ ಮತ್ತು ಛಾಯಾಗ್ರಾಹಕರಿಗೂ ಅವಿನಾಭಾವ ಸಂಬಂಧವಿದೆ. ಪತ್ರಕರ್ತರು ಮತ್ತು ಛಾಯಾಗ್ರಾಹಕರು ಸಾರ್ವಜನಿಕ ವಲಯದಲ್ಲಿ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ರಾಜ್ಯ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಎಸ್.ಪರಮೇಶ್, ಪ್ರಧಾನ ಕಾರ್ಯದರ್ಶಿ ಎಂ.ಎಂ.ಮುರಳಿ, ಜಿಲ್ಲಾ ಘಟಕದ ಅಧ್ಯಕ್ಷ ವಿ.ಕೃಷ್ಣ, ಪ್ರಧಾನ ಕಾರ್ಯದರ್ಶಿ ಡಿ.ಸುರೇಶ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಉಪ ಮಹಾ ಪ್ರಬಂಧಕ ವಿ.ನಾಗರಾಜು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.