ಕೋಲಾರ: ‘ಮಕ್ಕಳ ಪ್ರತಿಭೆಗೆ ಮಾನ್ಯತೆ ನೀಡುವುದು ರಾಷ್ಟ್ರೀಯ ಮೌಲ್ಯಾಂಕನ ವಿದ್ಯಾರ್ಥಿವೇತನ (ಎನ್ಟಿಎಸ್ಸಿ) ಮತ್ತು ರಾಷ್ಟ್ರೀಯ ಪ್ರತಿಭಾನ್ವೇಷಣೆ (ಎನ್ಎಂಎಂಎಸ್) ಪರೀಕ್ಷೆಯ ಉದ್ದೇಶವಾಗಿದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ವಿದ್ಯಾರ್ಥಿವೇತನ ಬರುತ್ತದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಹೇಳಿದರು.
ಎನ್ಟಿಎಸ್ಸಿ ಪರೀಕ್ಷೆ ತೆಗೆದುಕೊಂಡಿರುವ 8ನೇ ತರಗತಿ ವಿದ್ಯಾರ್ಥಿಗಳು ಹಾಗೂ ಎನ್ಎಂಎಂಎಸ್ ಪರೀಕ್ಷೆಗೆ ಹೆಸರು ನೋಂದಾಯಿಸಿರುವ ತಾಲ್ಲೂಕಿನ ವಿವಿಧ ಪ್ರೌಢ ಶಾಲೆಗಳ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉಚಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
‘ಪ್ರತಿ ವಿದ್ಯಾರ್ಥಿಯಲ್ಲೂ ಪ್ರತಿಭೆಯಿದೆ. ಶಿಕ್ಷಕರು ಮಕ್ಕಳ ಪ್ರತಿಭೆ ಗುರುತಿಸಬೇಕು. ತಾಲ್ಲೂಕಿನಿಂದ ಅತಿ ಹೆಚ್ಚಿನ ಮಕ್ಕಳು ಈ ಪರೀಕ್ಷೆಗಳಲ್ಲಿ ಸಾಧಕರಾಗಿ ಹೊರಹೊಮ್ಮಲು ತರಬೇತಿ ನೀಡಿ. ಶಾಲಾ ಮಕ್ಕಳಲ್ಲಿ ಈ ಪರೀಕ್ಷೆಗಳ ಭಯ ಹೋಗಲಾಡಿಸಲು ಇಲಾಖೆಯು ತರಬೇತಿ ಕಾರ್ಯಾಗಾರ ನಡೆಸುತ್ತಿದೆ. ಮಕ್ಕಳು ತರಬೇತಿಯ ಪ್ರಯೋಜನ ಪಡೆದು ಉತ್ತೀರ್ಣರಾಗಿ ವಿದ್ಯಾರ್ಥಿವೇತನ ಪಡೆಯಬೇಕು’ ಎಂದರು.
‘ತರಬೇತಿಗೆ ಬರುವ ಎಲ್ಲಾ ಮಕ್ಕಳಿಗೆ ಉಚಿತವಾಗಿ ಕಲಿಕಾ ಕೈಪಿಡಿ ಉಚಿತವಾಗಿ ವಿತರಿಸಲಾಗಿದೆ. ಜತೆಗೆ ಮಕ್ಕಳಿಗೆ ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿದೆ. 4 ಮಂದಿ ಸಂಪನ್ಮೂಲ ವ್ಯಕ್ತಿಗಳನ್ನು ತರಬೇತಿಗೆ ಆಯ್ಕೆ ಮಾಡಿದ್ದು, ಇವರು ಬೆಳಿಗ್ಗೆ 9.-30ರಿಂದ ಮಧ್ಯಾಹ್ನ 2 ಗಂಟೆವರೆಗೆ ತರಬೇತಿ ನೀಡುತ್ತಾರೆ’ ಎಂದು ಜಿಲ್ಲಾ ನೋಡಲ್ ಅಧಿಕಾರಿ ಉಮಾದೇವಿ ವಿವರಿಸಿದರು.
‘ಎನ್ಟಿಎಸ್ಸಿ ಪರೀಕ್ಷೆಗೆ ತಾಲ್ಲೂಕಿನ ವಿವಿಧ ಪ್ರೌಢ ಶಾಲೆಗಳ 476 ಮಕ್ಕಳು ಮತ್ತು ಎನ್ಎಂಎಂಎಸ್ ಪರೀಕ್ಷೆಗೆ 520 ಮಕ್ಕಳು ಹೆಸರು ನೋಂದಾಯಿಸಿದ್ದಾರೆ. ಸರ್ಕಾರಿ ಶಾಲೆಗಳ 100 ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ’ ಎಂದು ತಾಲ್ಲೂಕು ನೋಡಲ್ ಅಧಿಕಾರಿ ರಾಘವೇಂದ್ರ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.