ADVERTISEMENT

ಕೋಲಾರ | ವಹ್ನಿಕುಲ/ವಹ್ನಿಕುಲ ಕ್ಷತ್ರಿಯ ಎಂದೇ ನಮೂದಿಸಿ: ಕೃಷ್ಣಮೂರ್ತಿ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಕಾರ್ಯಾಗಾರದಲ್ಲಿ ಸಮುದಾಯದ ಮುಖಂಡರ ಮನವಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 6:48 IST
Last Updated 15 ಸೆಪ್ಟೆಂಬರ್ 2025, 6:48 IST
ಕೋಲಾರದಲ್ಲಿ ನಡೆದ ಕಾರ್ಯಾಗಾರದಲ್ಲಿ ವಹ್ನಿಕುಲ ಕ್ಷತ್ರಿಯ ಸಂಘದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿದರು. ಎಂ.ಉದಯಕುಮಾರ್‌, ಹೂಡಿ ವಿಜಯಕುಮಾರ್‌, ಸುಬ್ಬಣ್ಣ, ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು
ಕೋಲಾರದಲ್ಲಿ ನಡೆದ ಕಾರ್ಯಾಗಾರದಲ್ಲಿ ವಹ್ನಿಕುಲ ಕ್ಷತ್ರಿಯ ಸಂಘದ ರಾಜ್ಯಾಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿದರು. ಎಂ.ಉದಯಕುಮಾರ್‌, ಹೂಡಿ ವಿಜಯಕುಮಾರ್‌, ಸುಬ್ಬಣ್ಣ, ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು   

ಕೋಲಾರ: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ಸಮುದಾಯದವರು ಸಂಖ್ಯೆ 1508ರಲ್ಲಿ ವಹ್ನಿಕುಲ/ ವಹ್ನಿಕುಲ ಕ್ಷತ್ರಿಯ ಎಂದೇ ನಮೂದಿಸಬೇಕು ಎಂದು ವಹ್ನಿಕುಲ ಕ್ಷತ್ರಿಯ ಸಂಘದ ರಾಜ್ಯ ಅಧ್ಯಕ್ಷ ಕೃಷ್ಣಮೂರ್ತಿ ಮನವಿ ಮಾಡಿದರು.

ನಗರದ ಸಹ್ಯಾದ್ರಿ ಕಾಲೇಜಿನಲ್ಲಿ ಜಿಲ್ಲಾ ವಹ್ನಿಕುಲ ಕ್ಷತ್ರಿಯ ಸಂಘದಿಂದ ಭಾನುವಾರ ನಡೆದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ 2025 ರ ಸಾಮಾಜಿಕ. ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ನಾವೂ ಅಲ್ಪಸಂಖ್ಯಾತರು, ಅದರಲ್ಲೂ ಬೇರೆ ಬೇರೆ ಜಾತಿಗಳೆಂದು ನಮೂದಿಸಿದರೆ ಜನಸಂಖ್ಯೆ ಕಡಿಮೆ ಲೆಕ್ಕವಾಗುತ್ತದೆ. ಉದಾಹರಣೆಗೆ ಒಕ್ಕಲಿಗರಲ್ಲೂ 60 ಉಪಜಾತಿಗಳಿದ್ದರೂ ಒಕ್ಕಲಿಗ ಎಂದೇ ಬರೆಯಿಸುತ್ತಾರೆ. ಹಾಗೆಯೇ ಸಮೀಕ್ಷೆಗೆ ಬಂದಾಗ ಒಂದೇ ಜಾತಿ ಹೇಳಬೇಕು. ಇಲ್ಲವಾದರೆ ವಿಂಗಡಣೆ ಆಗುತ್ತದೆ’ ಎಂದರು.

ADVERTISEMENT

ಈಚೆಗೆ ಸ್ವಾಮೀಜಿಗಳು, ಹಿರಿಯರು ಸೇರಿ ಚರ್ಚಿಸಿ ವಹ್ನಿಕುಲ/ ವಹ್ನಿಕುಲ ಕ್ಷತ್ರಿಯ ಎಂದು ಇದೆ ಅಲ್ಲೇ ನಮೂದಿಸಿ. ಉಪಜಾತಿಯಲ್ಲೂ ಹಾಗೆಯೇ ಮಾಡಿ, ಮನೆಮನೆಗೂ ಹೋಗಿ ವಿಚಾರ ತಿಳಿಸಿ. ಒಗ್ಗಟ್ಟಿಲ್ಲದ ಕಾರಣ ನಮಗೆ ರಾಜಕೀಯವಾಗಿಯೂ ಅನ್ಯಾಯವಾಗುತ್ತಿದೆ. ಜನಸಂಖ್ಯೆ ಹೆಚ್ಚಿದ್ದರೆ ಸರ್ಕಾರದಿಂದ ಸೌಲಭ್ಯ ಕೇಳಬಹುದು. ಸೆ.22 ರಿಂದ ಅ.7ರವರೆಗೆ ನಡೆಯಲಿರುವ ಸಮೀಕ್ಷೆಯಲ್ಲಿ ಇದೊಂದು ಕೆಲಸ ಮಾಡಿಕೊಟ್ಟರೆ ಮುಂದಿನದನ್ನು ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ವಹ್ನಿಕುಲ ಕ್ಷತ್ರಿಯ ಮಹಾಸಭಾದ ಅಧ್ಯಕ್ಷ ಸುಬ್ಬಣ್ಣ ಮಾತನಾಡಿ, ‘ಗೊಂದಲಗಳಿಂದ ಒಬ್ಬೊಬ್ಬರು ಒಂದೊಂದು ಜಾತಿ ನಮೂದಿಸಿದಲ್ಲಿ ಸೌಲಭ್ಯಗಳಿಂದ ವಂಚಿತವಾಗುತ್ತೇವೆ. ಅದನ್ನು ತಪ್ಪಿಸುವ ಸಲುವಾಗಿ ಎಲ್ಲರೂ ಒಂದೇ ಜಾತಿ ನಮೂದಿಸಬೇಕು’ ಎಂದರು.

ಮುಖಂಡ ಹೂಡಿ ವಿಜಯ್ ಕುಮಾರ್ ಮಾತನಾಡಿ, ಮನೆಮನೆಗೂ ಸ್ಟಿಕ್ಕರ್ ಅಂಟಿಸಲು ಸಂಘಕ್ಕೆ ₹ 2 ಲಕ್ಷ ನೀಡುವೆ. ಅಗತ್ಯವಿದ್ದರೆ ಇನ್ನಷ್ಟು ನೀಡುವೆ ಎಂದು ಘೋಷಿಸಿದರು.

ಜಿಲ್ಲಾ ವಹ್ನಿಕುಲ ಕ್ಷತ್ರಿಯ ಸಂಘದ ಅಧ್ಯಕ್ಷ ಎಂ.ಉದಯ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜನಸಂಖ್ಯೆಯನ್ನು ಮಾತಿನಲ್ಲಿ ಹೇಳುವುದಕ್ಕಿಂತ ವಸ್ತುಸ್ಥಿತಿ ವರದಿಯಿದ್ದರೆ ಬಹಳಷ್ಟು ಅನುಕೂಲವಾಗಲಿದೆ. ಸಮೀಕ್ಷೆಯಲ್ಲಿ 60 ಕಾಲಂಗಳಿವೆ, ಜಾತಿಯ ನಿಖರವಾದ ಸಂಖ್ಯೆಯನ್ನೇ ನಮೂದಿಸಬೇಕು. ಜಿಲ್ಲೆಯಲ್ಲಿ ಒಂದೊಂದು ಭಾಗದಲ್ಲಿ ಒಂದೊಂದು ಹೆಸರು ಇವೆ. ಸಮೀಕ್ಷೆಯಲ್ಲಿ ಬೇರೆ ಬೇರೆ ಹೆಸರು ಬರೆಯಿಸಿದರೆ ಜನಸಂಖ್ಯೆಯು ನಿಖರವಾಗಿ ಸಿಗುವುದಿಲ್ಲ. ಹೀಗಾಗಿ, ಒಂದು ಹೆಸರನ್ನೇ ಬರೆಯಿಸಬೇಕು. ಆಗ ನಮಗೆ ಹಕ್ಕು, ಅನುಕೂಲ ಪಡೆಯಲು ಸಾಧ್ಯ’ ಎಂದರು.

ಬಿಸಿಎಂ ಇಲಾಖೆಯಿಂದ ಶಿಕ್ಷಕರಿಗೆ ಕೈಪಿಡಿ ನೀಡಲಾಗಿದ್ದು, ವಹ್ನಿಕುಲ ಕ್ಷತ್ರಿಯ 1508 ರಲ್ಲಿ ನಮ್ಮ ಜಾತಿಯಿದೆ. 60 ಪ್ರಶ್ನೆಗಳಿಗೂ ಮಾಹಿತಿಯನ್ನೂ ಗೊಂದಲಕ್ಕೆ ಒಳಗಾಗದೇ ಸ್ಪಷ್ಟವಾಗಿ ಒದಗಿಸಿ. 9 ಮತ್ತು 10 ನೇ ಕಾಲಂನಲ್ಲಿ ಸರಿಯಾಗಿ ನಮೂದಿಸಿ. ಅದೇ ಬಹಳ ಮುಖ್ಯವಾದದ್ದು’ ಎಂದು ಎಚ್ಚರಿಸಿದರು.

ವೇಮಗಲ್ ಕುರುಗಲ್ ಸದಸ್ಯರಾದ ಸುಜಾತಮ್ಮ ಮುನಿರಾಜು, ನಾಗೇಶ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಂಘದ ರಾಜ್ಯ ನಿರ್ದೇಶಕರಾದ ನಾಗಾರ್ಜುನ, ವಿನಯ್, ಮುಖಂಡರಾದ ಗೋಪಿ, ಬಡಿಗಿ ಶ್ರೀನಿವಾಸ್, ವಿನಯ್, ಚಿನ್ನಿ ವೆಂಕಟೇಶ್, ಕ್ಯಾಲನೂರು ಸುರೇಶ್, ನಾರಾಯಣಮೂರ್ತಿ, ಗಾಯತ್ರಿ, ವೇಮಗಲ್ ಶ್ರೀಧರ್ ಇದ್ದರು.

ಸೆ.22 ರಿಂದ ಅ.7 ರವರೆಗೆ ನಡೆಯಲಿರುವ ಸಮೀಕ್ಷೆ 9 ಮತ್ತು 10ನೇ ಕಾಲಂ ಬಹಳ ಮುಖ್ಯವಾದದ್ದು: ಉದಯಕುಮಾರ್‌ ವಹ್ನಿಕುಲ ಕ್ಷತ್ರಿಯ ಸಂಘದಿಂದ ಜಾಗೃತಿ ಕಾರ್ಯಾಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.