ನಂಗಲಿ: ಮುಷ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ.ಚಮಕಲಹಳ್ಳಿ ಸಮೀಪದ ಕಾಡಿನ ನಡುವೆ ಇರುವ ಘಟ್ಟು ವೆಂಕಟರಮಣ ಸ್ವಾಮಿ ದೇವಸ್ಥಾನ ‘ಘಟ್ಟುಗುಡಿ’ ಎಂದೇ ಜನರ ಬಾಯಲ್ಲಿ ಪ್ರಸಿದ್ಧಿ. ಸುಮಾರು ₹ 3.50 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡಿರುವ ದೇವಾಲಯದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ.
ಒಂದು ಶತಮಾನದ ಹಿಂದೆ ಮುಳಬಾಗಿಲು ತಾಲ್ಲೂಕಿನಲ್ಲಿ ಅಮಲ್ದಾರ್ ಆಗಿದ್ದ ಮುದ್ದು ಕೃಷ್ಣ ಎಂಬುವರು ಪ್ರವಾಸ ಕೈಗೊಂಡಿದ್ದ ವೇಳೆ ಎಂ.ಚಮಕಲಹಳ್ಳಿ ಸಮೀಪದ ದಟ್ಟವಾದ ಕಾಡಿನಲ್ಲಿ ನಡೆದು ಬರುತ್ತಿರು. ಇದ್ದಕ್ಕಿದ್ದಂತೆ ಹಣೆಗೆ ನಾಮವನ್ನು ಇಟ್ಟುಕೊಂಡಿದ್ದ ಬಾಲಕನೊಬ್ಬ ಕಾಣಿಸಿಕೊಂಡು ಮರೆಯಾದನಂತೆ. ಮತ್ತೆ ಕನಸಿನಲ್ಲಿ ಕಾಣಿಸಿಕೊಂಡ ಬಾಲಕ ನಾನು ವೆಂಕಟರಮಣ ಸ್ವಾಮಿ. ನನಗೆ ಒಂದು ಆಲಯ ನಿರ್ಮಿಸಿ ಎಂದು ಹೇಳಿದನಂತೆ. ಹೀಗಾಗಿಅಮಲ್ದಾರರು 1914ರಲ್ಲಿ ಕಟ್ಟಿಸಿದ ಗುಡಿಯೇ ಇಂದು ಘಟ್ಟು ವೆಂಕಟರಮಣ ಸ್ವಾಮಿ ದೇವಸ್ಥಾನ ಎಂದು ಪ್ರಸಿದ್ಧಿಯಾಗಿದೆ ಎಂಬುದು ಸ್ಥಳೀಯರ ಮಾತು.
ಕಾಲ ಕಳೆದಂತೆ ಘಟ್ಟು ದೇವರು ಮತ್ತು ಜಾತ್ರೆ ಕೇವಲ ಸುತ್ತಮುತ್ತಲಿನ ಜನರ ದೈವ ಭಕ್ತರಿಗೆ ಮಾತ್ರ ಸೀಮಿತವಾಗದೆ, ನೆರೆಯ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕೇರಳದಿಂದಲೂ ಭಕ್ತರು ಬರುವರು. ಜಾನುವಾರುಗಳ ಜಾತ್ರೆ ಇಲ್ಲಿನವಿಶೇಷ.
ವೈಕುಂಠ ಏಕಾದಶಿಯಂದು ದೇವಸ್ಥಾನದ ಉತ್ತರ ಭಾಗದಲ್ಲಿ ವೈಕುಂಠ ನಾರಾಯಣನಾದ ವೆಂಕಟರಮಣ ಸ್ವಾಮಿಯ ಮೂಲ ವಿಗ್ರಹದ ಜೊತೆಗೆ ಲಕ್ಷ್ಮಿ, ಪದ್ಮಾವತಿ ವಿಗ್ರಹಗಳನ್ನು ಕೂರಿಸಿ ಸಪ್ತ ದ್ವಾರಗಳನ್ನು ನಿರ್ಮಿಸಿ, ಆ ದ್ವಾರಗಳ ಮೂಲಕ ಭಕ್ತರಿಗೆ ದರ್ಶನದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ಈ ಸಪ್ತದ್ವಾರಗಳಲ್ಲಿ ಹೋಗಿ ದೇವರನ್ನು ದರ್ಶಿಸಿದರೆ ವೈಕುಂಠ ವಾಸ ಒಳ್ಳೆಯದನ್ನು ಮಾಡುತ್ತಾನೆ ಎನ್ನುತ್ತಾರೆ ಪ್ರಧಾನ ಅರ್ಚಕರಾಮಾನುಜನ್.
₹ 3.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ
ದೇವಾಲಯ 100 ಎಕರೆಯಲ್ಲಿದೆ. ಶ್ರಾವಣ ಮಾಸದ ಎಲ್ಲ ಶನಿವಾರಗಳಲ್ಲಿ ವಿಶೇಷ ಪೂಜೆ ಮತ್ತು ಕೊನೆಯ ಶನಿವಾರ ರಥೋತ್ಸವ, ವಿಜಯ ದಶಮಿ, ರಥ ಸಪ್ತಮಿ ಮತ್ತು ಆಷಾಢಮಾಸದಲ್ಲಿ ಏಕಾದಶಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ₹ 3.50 ಕೋಟಿ ವೆಚ್ಚದಲ್ಲಿ ದೇಗುಲ ಜೀರ್ಣೋದ್ಧಾರ ಮಾಡಲಾಗಿದೆ. ಎರಡು ವರ್ಷಗಳಿಂದ ವೈಕುಂಠ ಏಕಾದಶಿಯನ್ನು ಅದ್ಧೂರಿಯಾಗಿ ಮಾಡಲಾಗುತ್ತಿದೆ ಎಂದು ಹೇಳುತ್ತಾರೆನಿವೃತ್ತ ಐಎಎಸ್ ಅಧಿಕಾರಿ ಹಾಗೂ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷಬಿ.ಆರ್.ಕೃಷ್ಣನ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.