ಬಂಗಾರಪೇಟೆ: ಒಕ್ಕಲಿಗರಿಗೆ ದೇಶ ಕಟ್ಟುವ ಶಕ್ತಿ ಇದೆ. ಅಸೂಯೆ ಬಿಟ್ಟು, ಒಗ್ಗಟ್ಟಿನಿಂದ ಸಂಘಟಿತರಾಗಬೇಕು ಎಂದು ವಿಶ್ವ ಒಕ್ಕಲಿಗರ ಮಠದ ಪೀಠಾಧಿಪತಿ ನಿಶ್ಚಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದಿಂದ ಭಾನುವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಉದ್ಘಾಟಿಸಿ ಮಾತನಾಡಿದರು. ಕೆಂಪೇಗೌಡ ಸಮುದಾಯದ ಪ್ರಗತಿ ಸಂಕೇತ. ಈ ನಾಡು, ದೇಶವನ್ನು ಕಟ್ಟವ ಶಕ್ತಿ ಈ ಸಮುದಾಯಕ್ಕೆ ಇದೆ ಎಂದು ತೋರಿಸಿದ ನಾಡಪ್ರಭು ಕೆಂಪೇಗೌಡರು, ಈ ಸಮುದಾಯದ ಕುಡಿ. ಜಾತ್ಯತೀತ, ಧರ್ಮಾತೀತ, ಭಾಷಾತೀತವಾಗಿ ಸ್ಮರಿಸಬೇಕಾಗಿದೆ. ಕೆಂಗಲ್ ಹನುಮಂತಯ್ಯ ವಿಧಾನಸೌಧ ಕಟ್ಟಿಸಿದರು, ಮಾಜಿ ಸಿ.ಎಂ ಎಸ್.ಎಂ.ಕೃಷ್ಣ ವಿಕಾಸಸೌಧ ನಿರ್ಮಾಣ ಮಾಡಿದರು. ಅದೇ ರೀತಿ ಶಾಸಕ ಅಶ್ವಥ್ ನಾರಾಯಣ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆ ನಿರ್ಮಾಣ ಮಾಡಿ ಕೆಂಪೇಗೌಡರ ಹೆಸರು ಇಡೀ ಪ್ರಪಂಚ ಸ್ಮರಿಸುವಂತೆ ಮಾಡಿದ್ದಾರೆ. ಇವರ ಆದರ್ಶವನ್ನು ಒಕ್ಕಲಿಗರು ಮೈಗೂಡಿಸಿಕೊಳ್ಳಬೇಕು ಎಂದರು.
ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುತ್ತವೆ ಎಂಬ ದೇವನೂರ ಮಹದೇವ ಮಾತಿನಂತೆ ವ್ಯರ್ಥವಾಗುವುದಿಲ್ಲ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕೆಂದು ಸಲಹೆ ನೀಡಿದರು.
ಮಂಗಳಾನಂದನಾಥ ಸ್ವಾಮಿಜಿ ಮಾತನಾಡಿ, ಕೋಲಾರ ಜಿಲ್ಲೆಯಲ್ಲಿ ಯಾವುದೇ ನದಿನಾಲೆಗಳಿಲ್ಲದ ಕಾರಣ ಕುಡಿಯುವ ನೀರಿಗೆ ಹಾಹಾಕಾರವಿದೆ. ಜನಪ್ರತಿನಿಧಿಗಳು ಶಾಶ್ವತ ನೀರಾವರಿ ಯೋಜನೆ ಜಾರಿಗೆ ಶ್ರಮಿಸಬೇಕು ಎಂದರು.
ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಮಾತನಾಡಿ, ಬಂಗಾರಪೇಟೆಯಲ್ಲಿ ಪ್ರತಿವರ್ಷ ಕೆಂಪೇಗೌಡರ ಜಯಂತಿ ಆಚರಣೆ ಮಾಡುವುದು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸ್ತಬ್ಧ ಚಿತ್ರಗಳ ಮೆರವಣಿಗೆ ಮತ್ತು ವಿವಿಧ ಸಾಂಸ್ಕೃತಿಕ ಕಲಾ ತಂಡಗಳ ಪ್ರದರ್ಶನ ಗಮನ ಸೆಳೆಯಿತು.
ಮಾಜಿ ಸಂಸದ ಎಸ್.ಮುನಿಸ್ವಾಮಿ, ಎಂಎಲ್ಸಿ ಗೋವಿಂದರಾಜು, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ,ಡಾ. ವೇಣುಗೋಪಾಲ್, ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷೆ ಯಲ್ಲಮ್ಮ ಶಿವಕುಮಾರ್, ಕಾರ್ಯದರ್ಶಿ ಎಂ.ಜಿ.ಪ್ರಕಾಶ್, ಚುಂಚನಶ್ರೀ ಪ್ರತಿಷ್ಠಾನದ ಅಧ್ಯಕ್ಷೆ ಉಮಾ ಪ್ರಕಾಶ್, ಶ್ಯಾಮಲ, ಶಿವ ಕುಮಾರ್, ಮಾರ್ಕಾಂಡೇಗೌಡ, ಹನುಮಪ್ಪ, ನಾರಾಯಣಸ್ವಾಮಿ, ಶ್ರೀನಿವಾಸ್ ಗೌಡ, ಜಗದೀಶ್, ಹನ್ಕುಂದ ವೆಂಕಟೇಶ್, ಸೀತಾರಾಮಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.