ADVERTISEMENT

ನೀತಿಸಂಹಿತೆ ಉಲ್ಲಂಘನೆ: ಶಾಸಕರ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 13:23 IST
Last Updated 4 ಡಿಸೆಂಬರ್ 2021, 13:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋಲಾರ: ವಿಧಾನ ಪರಿಷತ್‌ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಸಂಬಂಧ ಜಿಲ್ಲೆಯ ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಹಾಗೂ ಕೋಚಿಮುಲ್‌ ವ್ಯವಸ್ಥಾಪಕ ಮಹೇಶ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಶಾಸಕ ನಾರಾಯಣಸ್ವಾಮಿ ಅವರು ಬಂಗಾರಪೇಟೆ ಹೊರವಲಯದಲ್ಲಿನ ತಮ್ಮ ರೆಸಾರ್ಟ್‌ನಲ್ಲಿ ನ.29ರಂದು ಕಾಂಗ್ರೆಸ್‌ ಅಭ್ಯರ್ಥಿ ಎಂ.ಎಲ್‌.ಅನಿಲ್‌ಕುಮಾರ್‌ ಪರ ಚುನಾವಣಾ ಪ್ರಚಾರ ಸಭೆ ನಡೆಸಿದ್ದರು. ಸಭೆಗೆ ಬಂದಿದ್ದ ಗ್ರಾ.ಪಂ ಸದಸ್ಯರು ಹಾಗೂ ಇತರೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ್ದ ಶಾಸಕರು, ‘ತಾವು ಯಾರಿಗೆ ಮತ ಹಾಕುತ್ತೀರಿ ಎಂಬುದು ನನಗೆ ಗೊತ್ತಾಗುತ್ತದೆ. ಇಲ್ಲೊಂದು ಹೇಳಿ ಮತಗಟ್ಟೆಯಲ್ಲಿ ಮತ್ತೊಂದು ಮಾಡಬಾರದು’ ಎಂದು ಬೆದರಿಸಿದ್ದರು.

ಶಾಸಕರ ಭಾಷಣವನ್ನು ವಿಡಿಯೋ ಚಿತ್ರೀಕರಿಸಿಕೊಂಡಿದ್ದ ವ್ಯಕ್ತಿಯೊಬ್ಬರು ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದರು. ಬಳಿಕ ಆಯೋಗವು ಆ ದೃಶ್ಯಾವಳಿ ತುಣುಕನ್ನು ಜಿಲ್ಲಾಧಿಕಾರಿಗೆ ಕಳುಹಿಸಿ ದೂರು ದಾಖಲಿಸುವಂತೆ ನಿರ್ದೇಶನ ನೀಡಿತ್ತು. ಆ ದೃಶ್ಯಾವಳಿ ಆಧರಿಸಿ ಮಾದರಿ ಚುನಾವಣಾ ನೀತಿಸಂಹಿತೆ ತಂಡದ ಅಧಿಕಾರಿ ಯಶವಂತ್‌ಕುಮಾರ್‌ ಅವರು ಬಂಗಾರಪೇಟೆ ಠಾಣೆಗೆ ದೂರು ಕೊಟ್ಟಿದ್ದರು. ಪೊಲೀಸರು ಜನಪ್ರತಿನಿಧಿಗಳ ಕಾಯ್ದೆಯಡಿ ನಾರಾಯಣಸ್ವಾಮಿಯವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಅಧ್ಯಕ್ಷರಾದ ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡರ ಅವರು ಮಾಲೂರು ಪಟ್ಟಣದಲ್ಲಿನ ಕೋಚಿಮುಲ್‌ ಶಿಬಿರ ಕಚೇರಿಯಲ್ಲಿ ನ.26ರಂದು ಪರಿಷತ್‌ ಚುನಾವಣೆ ಸಂಬಂಧ ಪಕ್ಷದ ಸಭೆ ನಡೆಸಿದ್ದರು.

ಕೋಚಿಮುಲ್‌ ಕಚೇರಿಯಲ್ಲಿ ರಾಜಕೀಯ ಪಕ್ಷವೊಂದರ ಸಭೆಗೆ ಅನುಮತಿ ನೀಡಿದ ಸಂಬಂಧ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರು ಕೋಚಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ಅವರಿಗೆ ಷೋಕಸ್‌ ನೋಟಿಸ್‌ ಜಾರಿ ಮಾಡಿ ನೀತಿಸಂಹಿತೆ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.