ಶ್ರೀನಿವಾಸಪುರ: ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ತಕ್ಷಣ ನೀರಿನ ವ್ಯವಸ್ಥೆ ಮಾಡಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸಿ ಬ್ಲೀಚಿಂಗ್ ಪೌಡರ್ ಹಾಕಬೇಕು. ಬೀದಿ ದೀಪಗಳು ಅಳವಡಿಸಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡಿ ಸೂಚಿಸಿದರು.
ಪಟ್ಟಣ ಹೊರವಲಯದ ಹೊಗಳಗೆರೆ ಕೃಷಿ ಮಾವು ಅಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ಅಧಿಕಾರಿಗಳ ಕೆಡಿಪಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಹಳ್ಳಿಗಳಲ್ಲಿ ಜೆಜೆಎಂ ಕಾಮಗಾರಿಗಳು ನಿಂತುಹೋಗಿದ್ದು, ಅವುಗಳನ್ನು ಪುನಾರಂಭಿಸಬೇಕು. ಗುಣಮಟ್ಟದೊಂದಿಗೆ ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಬೇಕು. ಶುದ್ಧ ಕುಡಿಯುವ ನೀರಿಗಾಗಿ ಅಡಿಪಾಯ ಹಾಕಿರುವುದನ್ನು ಸಿಎಸ್ಆರ್ ಅನುದಾನದಲ್ಲಿ ಪೂರ್ಣಗೊಳಿಸಲು ಇಒ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಒಂದೆರಡು ತಿಂಗಳಲ್ಲಿ ಎಲ್ಲಾ ಶುದ್ಧನೀರಿನ ಘಟಕಗಳು ಪುನಾರಂಭಿಸಿಲು ಬೇಕಾದ ವ್ಯವಸ್ಥೆಗಳನ್ನು ಮಾಡಿಸಬೇಕು ಎಂದು ಹೇಳಿದರು.
ಲಕ್ಷ್ಮಿಪುರ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಸಂಬಂಧಿಸಿದಂತೆ ಕೋಟ್ಯಂತರ ಬೆಲೆಬಾಳುವ ಜಮೀನನ್ನು ಲಪಟಾಯಿಸಲು ಕೆಲವರು ಕಾದಿದ್ದು ಅದರಲ್ಲಿನ ಒಂದು ಗುಂಟೆಯನ್ನು ಬಿಡದಂತೆ ಎಚ್ಚರವಹಿಸಬೇಕು. ಬಿಇಒ ಹಾಗೂ ಪಿಡಿಒ ಆದಷ್ಟು ಬೇಗ ಇತ್ಯರ್ಥ ಮಾಡಬೇಕು ಎಂದರು.
ಇಒ ಸರ್ವೇಶ್ ಮಾತನಾಡಿ, ಈಗಾಗಲೇ 420 ಶಾಲೆಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ನರೇಗಾ ಯೋಜನೆಯಲ್ಲಿ 200 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದಂತೆ 220 ಕಾಮಗಾರಿಗಳನ್ನು ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ತಹಶೀಲ್ದಾರ್ ಜಿ.ಎನ್.ಸುಧೀಂದ್ರ, ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಮಪ್ಪ, ವ್ಯವಸ್ಥಾಪಕ ಮಂಜುನಾಥ್, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಮನೋಹರ್, ಕೆಡಿಪಿ ನಾಮ ನಿರ್ದೇಶನ ಸದಸ್ಯರಾದ ರವಿ, ಮುನಿವೆಂಕಟರೆಡ್ಡಿ , ಎಚ್.ಎನ್.ಆಂಜನೇಯಪ್ಪ, ಅರ್ಜುನ್.ಎಸ್, ಸಯೈದ್ ಸಿರಾಜ್, ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.