ಕೋಲಾರ: ತಾಲ್ಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ನೀರು ಲಭ್ಯವಿದ್ದರೂ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಮಾಡುವಲ್ಲಿ ಮುದುವತ್ತಿ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳು ವಿಫಲವಾಗಿದ್ದಾರೆ.
ಕೆನರಾ ಬ್ಯಾಂಕ್ ವತಿಯಿಂದ ಸಿಎಸ್ಆರ್ ಯೋಜನೆಯಡಿ ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಲಾಗಿದ್ದು, ಕೆಲ ತಿಂಗಳುಗಳ ಕಾಲ ಚಾಲ್ತಿಯಲ್ಲಿತ್ತು. ಇತ್ತೀಚಿಗೆ ಗ್ರಾಮದಲ್ಲಿ ಹೊಸ ಕೊಳವೆಬಾವಿಯ ಪೈಪ್ ಲೈನ್ ಮಾಡಿಸಿದ್ದ ನಂತರ ಇದಕ್ಕೆ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ.
ಈ ಘಟಕದಿಂದ ಚಿಕನಹಳ್ಳಿ, ಲಕ್ಷೀಪುರ, ಹನುಮಂತನಗರ, ಬೆಟ್ಟಹಳ್ಳಿ ಗ್ರಾಮಗಳ ನಿವಾಸಿಗಳು ಕುಡಿಯುವ ನೀರು ಹಿಡಿದುಕೊಂಡು ಹೋಗುತ್ತಿದ್ದರು, ಆದರೆ ಇತ್ತಿಚೆಗೆ ಸ್ಥಳೀಯ ಇಬ್ಬರು ವ್ಯಕ್ತಿಗಳ ಪ್ರತಿಷ್ಠೆಯಿಂದ ಸರಿಯಾದ ರೀತಿಯಲ್ಲಿ ನಿರ್ವಹಣೆಯಿಲ್ಲದೆ ಶುದ್ದ ನೀರಿನ ಘಟಕವು ತುಕ್ಕು ಹಿಡಿಯುತ್ತಿದೆ.
ಓವರ್ ಹೆಡ್ ಟ್ಯಾಂಕ್ನಿಂದ ನೀರಿನ ಸಂಪರ್ಕ ಕಲ್ಪಿಸಲು ಹಿಂದೆಯೇ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದರು, ಸೂಚನೆ ಮೇರೆ ಸಂಪರ್ಕ ಕಲ್ಪಿಸಿತ್ತಾದರೂ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರ ನಿಲ್ಯಕ್ಷದಿಂದ ಫ್ಲೋರೈಡ್ ನೀರನ್ನು ಕುಡಿಯಬೇಕಾದ ಪರಿಸ್ಥಿತಿ ಎದುರಾಗಿದೆ.
‘ನೀರಿಗಾಗಿ ಕೊರೆಸಿರುವ ಕೊಳವೆಬಾವಿಯಿಂದ ಓವರ್ ಹೆಡ್ ಟ್ಯಾಂಕ್ಗೆ ನೀರು ಸಬರಾಜು ಮಾಡಲಾಗುತ್ತಿದೆ. ಟ್ಯಾಂಕ್ ಪಕ್ಕದಲೇ ಶುದ್ಧ ಕುಡಿಯುವ ನೀರಿನ ಘಟಕ ಇದೆ. ಗ್ರಾಮದಲ್ಲಿನ ಕೆಲ ವ್ಯಕ್ತಿಗಳ ಪ್ರತಿಷ್ಠೆಯಿಂದ ಘಟಕ ಸ್ಥಗಿತಗೊಂಡಿದ್ದು, ಚಾಲನೆ ಮಾಡುವಂತೆ ಮನವಿ ಮಾಡಿದ್ದರೂ ಯಾವುದೇ ರೀತಿ ಕ್ರಮಕೈಗೊಂಡಿಲ್ಲ’ ಎಂದು ಸಿ.ಜಗದೀಶ್ ಗೌಡ ದೂರಿದರು.
‘ಶುದ್ಧ ಕುಡಿಯುವ ನೀರಿನ ಘಟಕದ ನೀರು ಕುಡಿಯಲಾಗುತ್ತಿತ್ತು, ಈಗ ಸ್ಥಗಿತಗೊಂಡಿರುವುದಕ್ಕೆ ಕೊಳವೆ ಬಾವಿ ನೀರು ಕುಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಘಟಕವನ್ನು ದುರಸ್ತಿಪಡಿಸಬೇಕು. ಆ ಇಬ್ಬರು ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಕೇಕು’ ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.