
ಕೋಲಾರ: ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ರಾಜ್ಯ ಮಟ್ಟದ ಕೃಷಿ ಮೇಳದಲ್ಲಿ ತಾಲ್ಲೂಕಿನ ಮದನಹಳ್ಳಿ ಗ್ರಾಮದ ರೈತ ಎಂ.ಎಸ್.ಶ್ರೀಕಾಂತ್ ಅವರಿಗೆ ಸರ್ಕಾರದಿಂದ ತಾಲ್ಲೂಕು ಮಟ್ಟದ ಪ್ರಗತಿಪರ ಯುವ ರೈತ ಪ್ರಶಸ್ತಿ ನೀಡಲಾಯಿತು.
ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ನೂತನ ತಾಂತ್ರಿಕತೆಯ ಮೂಲಕ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಕೃಷಿ, ತೋಟಗಾರಿಕೆ, ಜೇನು ಕೃಷಿ, ಕುರಿ ಮೇಕೆ ಮತ್ತು ಮೀನು ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಉಪ ಕಸುಬನ್ನಾಗಿ ರೇಷ್ಮೆ ಕೃಷಿಯನ್ನು ಅಳವಡಿಸಿಕೊಂಡು ಹಿಪ್ಪು ನೇರಳೆ ಬೆಳೆಯನ್ನು ಜೋಡಿ ಸಾಲು ಪದ್ಧತಿಯಲ್ಲಿ ಬೆಳೆದು ಮಾದರಿ ರೈತ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಕೃಷಿಯ ಜೊತೆಗೆ ಅರಣ್ಯ ಕೃಷಿಗೂ ಒತ್ತು ನೀಡಿದ್ದು, ಜಮೀನಿನ ಬದುಗಳ ಸುತ್ತ ಮರ ಬೆಳೆಸಿದ್ದಾರೆ. ಹಸು, ದನ ಕರುಗಳ ಮೇವಿಗಾಗಿ ಮೆಕ್ಕೆ ಜೋಳ ಬೆಳೆದಿದ್ದಾರೆ. ಎರಡು ಎಕರೆ ಜಮೀನಿನಲ್ಲಿ ಜೇನು ಕೃಷಿಯನ್ನು ಸಹ ಉಪ ಕಸುಬನ್ನಾಗಿ ನಿರ್ವಹಿಸುತ್ತಿದ್ದು, ಜೇನು ಕುಟುಂಬಗಳನ್ನು ತಾವೇ ಹಿಡಿದು ಸುತ್ತ ಮುತ್ತಲಿನ ಗ್ರಾಮದ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಸಾವಯವ ಗೊಬ್ಬರ ಬಳಸಿ ಮಣ್ಣಿನ ಫಲವತ್ತತೆ ಕಾಪಾಡಿಕೊಂಡಿದ್ದಾರೆ. ನೀರಿನ ನಿರ್ವಹಣೆಗಾಗಿ ಕೃಷಿ ಹೊಂಡವನ್ನು ನಿರ್ಮಿಸಿ, ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಮಾದರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.