ADVERTISEMENT

ಅಂಗನವಾಡಿ ಕಾರ್ಯಕರ್ತೆಯರ ಧರಣಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2013, 11:10 IST
Last Updated 18 ಜೂನ್ 2013, 11:10 IST

ಕೊಪ್ಪಳ: ಅಂಗನವಾಡಿ ಕಾರ್ಯಕರ್ತೆಯರಿಗೆ 8 ತಿಂಗಳಿನಿಂದ ಬಾಕಿ ಇರುವ ಗೌರವಧನ ನೀಡುವುದೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಒಕ್ಕೂಟದ ನೇತೃತ್ವದಲ್ಲಿ ಕಾರ್ಯಕರ್ತೆಯರು ತಾಲ್ಲೂಕು ಕಚೇರಿ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ಕಳೆದ 35 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಅವರ ಗೌರವಧನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರವು ಬಾಕಿ ಇರುವ ಗೌರವಧನವನ್ನು ನೀಡಬೇಕು. ಕಾರ್ಯಕರ್ತೆಯರಿಗೆ ರೂ 10 ಸಾವಿರ, ಸಹಾಯಕಿಯರಿಗೆ ರೂ 6 ಸಾವಿರ ಮಾಸಿಕ ಗೌರವಧನ ನೀಡಬೇಕು. ಎರಡು ತಿಂಗಳ ಬೇಸಿಗೆ ರಜೆ ಕೊಡಬೇಕು ಎಂದು ಒತ್ತಾಯಿಸಿದರು.

ಬೇನಾಮಿ ವ್ಯಕ್ತಿಗಳು ಅನಧಿಕೃತವಾಗಿ ಅಂಗನವಾಡಿಗಳಿಗೆ ಅವಧಿ ಮೀರಿದ ಔಷಧಿ ಕಿಟ್ ಪೂರೈಸಿದ್ದಾರೆ. ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಂಗನವಾಡಿ ಆಹಾರ ತಯಾರಿಕೆಗೆ ಗ್ಯಾಸ್ ಅಥವಾ ಕಟ್ಟಿಗೆಯನ್ನು ಪೂರೈಸಬೇಕು. ಅದು ಅಸಾಧ್ಯವಾದರೆ ರೂ 1,500 ಕಟ್ಟಿಗೆ ಭತ್ಯೆ ನೀಡಬೇಕು. ಅಪೌಷ್ಟಿಕ ಮಕ್ಕಳ ಚಿಕಿತ್ಸೆಗಾಗಿ ಸರ್ಕಾರ ಹಣ ನಿಗದಿಪಡಿಸಬೇಕು. ಅಂಗನವಾಡಿಗಳಿಗೆ ಸೂಕ್ತ ಕಟ್ಟಡ ಒದಗಿಸಬೇಕು. 2012-13ನೇ ಸಾಲಿನಲ್ಲಿ ನಿಯಮಬಾಹಿರ ನೇಮಕಾತಿಯಿಂದ ಕಾರ್ಯಕರ್ತರಿಗಾದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಫೆಡರೇಷನ್ ಅಧ್ಯಕ್ಷೆ ಮಮ್ತಾಜ್ ಕಂದಗಲ್, ಜಿಲ್ಲಾ ಸಂಚಾಲಕ ಬಸವರಾಜ ಶೀಲವಂತರ, ಕಾರ್ಯದರ್ಶಿ ಶೈಲಜಾ ಸಸಿಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.