ADVERTISEMENT

ಅಂಗನವಾಡಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 6:16 IST
Last Updated 1 ಡಿಸೆಂಬರ್ 2017, 6:16 IST

ಕುಷ್ಟಗಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇಲ್ಲಿಯ ಶಿಶು ಅಭಿವೃದ್ಧಿ ಯೋಜನೆ ಕಚೇರಿ ಬಳಿ ಗುರುವಾರ ಪ್ರತಿಭಟನೆ ನಡೆಸಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀರೇಂದ್ರ ನಾವದಗಿ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರಿ ಯೋಜನೆಗಳ ಅನುಷ್ಠಾನ ಹೊಣೆಯನ್ನು ಅಂಗನವಾಡಿಗೆ ವಹಿಸಲಾಗುತ್ತದೆ. ಆದರೆ ಸಮರ್ಪಕ ಸೌಲಭ್ಯಗಳನ್ನು ಕಲ್ಪಿಸುವುದಿಲ್ಲ. ಸರ್ಕಾರ ಅವೈಜ್ಞಾನಿಕವಾಗಿ ಸರ್ಕಾರದ ಕೆಲಸಗಳಿಗೆ ಬಳಸಿಕೊಳ್ಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾತೃಪೂರ್ಣ ಯೋಜನೆ ಅನುಷ್ಠಾನ ಹಂತದಲ್ಲಿ ಲೋಪದೋಷಗಳು ಎದುರಾಗುತ್ತಿವೆ. ಮಕ್ಕಳು, ಗರ್ಭಿಣಿಯರು, ಬಾಣಂತಿಯರಿಗೆ ಮೊಟ್ಟೆ ನೀಡುತ್ತಿದ್ದು, ಪೂರೈಕೆಯಲ್ಲಿ ಸಾಕಷ್ಟು ವ್ಯತ್ಯಾಸವಾಗುತ್ತಿದೆ. ಹಳ್ಳಿಗಳಲ್ಲಿ ಸ್ಥಳೀಯರ ಹಸ್ತಕ್ಷೇಪದಿಂದ ಕಾರ್ಯಕರ್ತೆಯರು ಒತ್ತಡಕ್ಕೆ ಒಳಗಾಗುತ್ತಾರೆ ಎಂದು ನೌಕರರ ಸಂಘದ ಕಾರ್ಯದರ್ಶಿ ಕಲಾವತಿ ಮೆಣೆದಾಳ ವಿವರಿಸಿದರು.

ADVERTISEMENT

ಅಂಗನವಾಡಿ ಅನುದಾನವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಕಾರ್ಯಕರ್ತೆ ಹೆಸರಲ್ಲಿ ಜಂಟಿಖಾತೆ ತೆರೆದರೆ ಯೋಜನೆ ಸಂಪೂರ್ಣ ದಿಕ್ಕುತಪ್ಪಲಿದೆ. ಕಟ್ಟಡದ ಬಾಡಿಗೆ, ಅಡುಗೆ ಅನಿಲ ಸಿಲಿಂಡರ್‌ ಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಬೇಕು. ನಿಗದಿತ ಸಮಯಕ್ಕೆ ಗೌರವಧನ ಜಮೆ ಮಾಡುವುದು, ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿದರು.

ಅಂಗನವಾಡಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷೆ ಅಕ್ಕಮಹಾದೇವಿ ಪಟ್ಟಲಚಿಂತಿ, ಉಮಾ ಅಂಗಡಿ, ಎಂ.ಕಲಾವತಿ, ಹನುಮಂತಪ್ಪ ಶಿಡ್ಲಭಾವಿ, ಶಶಿಕಲಾ, ಗೀತಾ, ಜಯಶ್ರಿ, ವೀರಶ್ರಿ, ಲತಾ, ಮಂಜುಳಾ, ಕೃಷ್ಣವೇಣಿ, ಸರಸ್ವತಿ, ಸುಲೋಚನಾ, ವಿಜಯಲಕ್ಷ್ಮಿ ಗದ್ದಿ, ಲಲಿತಾ ಗುಡೂರು, ಲಕ್ಷ್ಮಿ, ಮಲ್ಲವ್ವ, ಜೈರಾಬಿ, ಪುಷ್ಪಾ, ಶಾರದಾ, ಶಾಂತಾ ನಿಲೋಗಲ್‌, ಸಹಾಯಕಿಯರಾದ ಹುಲಿಗೆಮ್ಮ ಹನುಮನಾಳ, ವಿಜಯಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.