ಕೊಪ್ಪಳ: ಬರಗಾಲ ನಿರ್ವಹಣೆಗೆ ಕೆರೆ ತುಂಬಿಸುವ ಕಾರ್ಯಕ್ಕೆ ಆದ್ಯತೆ ನೀಡ ಬೇಕು ಎಂದು ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಹೇಳಿದರು.
ಜಿಲ್ಲಾ ಪಂಚಾಯಿತಿಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ಥಿತಿ-ಗತಿಗಳ ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ತ್ವರಿತವಾಗಿ ಪೂರ್ಣ ಗೊಳ್ಳಬೇಕು. ಪೂರ್ಣ ಗೊಂಡಿರುವ ಯೋಜನೆಗಳನ್ನು ಸಮರ್ಪಕವಾಗಿ ನಿರ್ವ ಹಿಸಲು ಆದ್ಯತೆ ನೀಡಬೇಕು. ಯೋಜ ನೆಗಳ ಅನುಷ್ಠಾನದಲ್ಲಿ ಯಾವುದೇ ತೊಂದರೆಗಳಿದ್ದಲ್ಲಿ, ಅದನ್ನು ಸಮಿತಿಯ ಗಮನಕ್ಕೆ ತರಬೇಕು ಎಂದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಕಾಮಗಾರಿ ಅಥವಾ ನಿರ್ವಹಣೆಗೆ ಆಯಾ ಗ್ರಾಮ ಪಂಚಾ ಯಿತಿ ಅಧ್ಯಕ್ಷರು, ತಾಲ್ಲೂಕು ಪಂಚಾ ಯಿತಿ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸುವುದು ಸೂಕ್ತ ಎಂದು ಸಮಿತಿಯ ಸದಸ್ಯ ಜನಾರ್ದನ ಹುಲಿಗಿ ಅವರು ಸಲಹೆ ನೀಡಿದರು.
ನಗರಕ್ಕೆ ನೀರು ಪೂರೈಕೆ ಮಾಡಲು ಕಾತರಕಿ- – ಗುಡ್ಲಾನೂರು ಹಾಗೂ ಇತರ 39 ಗ್ರಾಮಗಳಿಗೆ ನೀರು ಪೂರೈಸಲು ನಿಲೋಗಿಪುರ ಬಳಿ ತುಂಗಭದ್ರಾ ಹಿನ್ನೀರು ಪಾತ್ರದಲ್ಲಿ ಜಾಕ್ವೆಲ್ ನಿರ್ಮಿಸಲಾಗಿದ್ದು, ಹಿನ್ನೀರು ಕಡಿಮೆ ಯಾದ ನಂತರ, ಇಲ್ಲಿ ತೀವ್ರ ನೀರಿನ ತೊಂದರೆ ಉದ್ಭವಿಸುತ್ತದೆ. ಪ್ರತಿ ವರ್ಷ ಎರಡೂ ಜಾಕ್ವೆಲ್ ಬಳಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ, ಮರಳು ಚೀಲದಿಂದ ಬಂಡ್ ನಿರ್ಮಿಸಿ ನೀರು ಶೇಖರಿಸಲಾಗುತ್ತಿದೆ.
ಗಟಾಲೂರು ಬ್ಯಾರೇಜ್ನಿಂದ ಕುಡಿಯುವ ನೀರಿನ ಸಲುವಾಗಿ ನೀರು ಹರಿಸಿದಾಗ, ಮರಳು ಚೀಲದ ಬಂಡ್ ಕೊಚ್ಚಿಹೋಗಿ, ಪುನಃ ನೀರು ಸಂಗ್ರಹಿಸಲು ಪರದಾಡು ವಂತಾಗುತ್ತಿದೆ. ಪ್ರತಿ ವರ್ಷ ಈ ಸಮಸ್ಯೆ ಕಾಡುತ್ತಿದೆ. ಶಾಶ್ವತ ಬಂಡ್ ನಿರ್ಮಾಣವಾದಲ್ಲಿ ಕೊಪ್ಪಳ ನಗರವೂ ಸೇರಿದಂತೆ 39 ಗ್ರಾಮಗಳಿಗೂ ವರ್ಷದ 12 ತಿಂಗಳೂ ಕೂಡಾ ನೀರಿನ ಸಮಸ್ಯೆ ಉದ್ಭವಾಗುವುದಿಲ್ಲ ಎಂದು ಅಧಿ ಕಾರಿಗಳು ಸಮಿತಿಯ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ನಂಜಯ್ಯನ ಮಠ ಅವರು, ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದರು.ಜಿಲ್ಲೆಯಲ್ಲಿ ಒಟ್ಟು 2.46 ಲಕ್ಷ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸ ಬೇಕಿದ್ದು, ಇದುವರೆಗೂ 1.24 ಲಕ್ಷ ಶೌಚಾಲಯಗಳು ನಿರ್ಮಾಣ ಗೊಂಡಿವೆ. ಕಳೆದ ವರ್ಷ 72,377 ಶೌಚಾಲಯಗಳ ನಿರ್ಮಾಣದ ಗುರಿ ಬದಲಿಗೆ 20,960 ಶೌಚಾಲಯ ನಿರ್ಮಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಹೇಳಿದರು.
ಗ್ರಾಮ ಪಂಚಾಯಿತಿಗಳಲ್ಲಿ ಕಂಪ್ಯೂಟರ್ ಆಪರೇಟರ್ ಸಿಬ್ಬಂದಿ ಕೊರತೆ, ವಿದ್ಯುತ್, ಇಂಟರ್ನೆಟ್ ಸಮಸ್ಯೆ ಸೇರಿದಂತೆ ಹಲವು ತೊಂದರೆಗಳಿಂದಾಗಿ ಈ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನಗೊಳಿಸಲು ತೊಂದರೆಯಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ಕೆ. ತೊರವಿ ತಿಳಿಸಿದರು.
ಪ್ರತಿ ಗ್ರಾಮ ಪಂಚಾಯಿತಿಗೆ ಹೆಚ್ಚುವರಿಯಾಗಿ ಒಬ್ಬರು ಕಂಪ್ಯೂಟರ್ ಆಪರೇಟರ್ ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸಮಿತಿಯು ಸಲಹೆ ನೀಡಲಿದೆ ಎಂದು ನಂಜಯ್ಯನಮಠ ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ, ಮುಖ್ಯ ಕಾರ್ಯನಿ ರ್ವಾಹಕ ಅಧಿಕಾರಿ ವೆಂಕಟರಾಜಾ, ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಪರಿಶೀಲನಾ ಸಮಿ ತಿಯ ಸದಸ್ಯರಾದ ಎಂ.ಎಂ. ನದಾಫ್, ಜನಾರ್ದನ ಹುಲಿಗಿ, ಆರ್.ಎಚ್. ತಿಪ್ಪೇಸ್ವಾಮಿ, ಸುಧಾಮಣಿ, ಮಿಡಿಗೇಶಿ ರಾಜು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಬಟ್ಟೂರು ಸೇರಿದಂತೆ ಇತರ ಅಧಿಕಾರಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.