ADVERTISEMENT

ಆಚರಣೆ ಬದಲಾಗಿದೆ, ಪರಂಪರೆ ಅಲ್ಲ: ಬ್ಯಾಳಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2017, 10:58 IST
Last Updated 12 ಅಕ್ಟೋಬರ್ 2017, 10:58 IST

ಕೊಪ್ಪಳ: ಸ್ವಾಗತ ಸಮಾರಂಭ ಒಂದು ಪರಂಪರೆ. ಗುರುಕುಲ ಪದ್ಧತಿಯಿಂದ ಇದು ನಡೆದುಬಂದಿದೆ. ಹಾಗಾಗಿ ಇಂದು ಮನುಷ್ಯನ ಆಚರಣೆಗಳು ಬದಲಾಗಿವೆಯೇ ಹೊರತು ಪರಂಪರೆ ಬದಲಾಗಿಲ್ಲ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಡಾ.ಕೆ.ಬಿ.ಬ್ಯಾಳಿ ಹೇಳಿದರು.

ನಗರದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಬುಧವಾರ ನಡೆದ ಪ್ರಥಮ ವರ್ಷದ ಕನ್ನಡ ಮತ್ತು ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಕನ್ನಡಿಗರೆಲ್ಲರ ಮಾತೃ ಭಾಷೆ. ಹರಪ್ಪ ಮತ್ತು ಮೊಹೆಂಜೋದಾರೊ ನಾಗರಿಕತೆ ಇರುವ ಸಂದರ್ಭದಲ್ಲಿ ಕನ್ನಡ ನಾಡಿನಿಂದ ಬಂಗಾರ ರಫ್ತು ಮಾಡಿದ್ದರು. ಮಾತೃ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಅನೇಕ ರಾಜ ಮನೆತನಗಳು ಕನ್ನಡ ಬೆಳೆಸುವಲ್ಲಿ ಪ್ರಮುಖ ಸ್ಥಾನ ವಹಿಸಿದವು. ಕನ್ನಡ ಭಾಷೆಯ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅಧ್ಯಯನ ಮಾಡುವುದರಿಂದ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ಸಾಧ್ಯ ಎಂದರು.

ADVERTISEMENT

ಸ್ನಾತಕೋತ್ತರ ಕೇಂದ್ರದ ವಿಶೇಷಾಧಿಕಾರಿ ಡಾ. ಮನೋಜ್ ಡೊಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ನಾತಕೋತ್ತರ ಕೇಂದ್ರಕ್ಕೆ ₹ 20 ಕೋಟಿ ಅನುದಾನ ಬಿಡುಗಡೆಯಾಗಿದೆ. ಶೀಘ್ರದಲ್ಲಿಯೇ ಕೇಂದ್ರದ ಅಭಿವೃದ್ಧಿ ಕಾಮಗಾರಿ ಆರಂಭವಾಗಬೇಕಿದೆ. ಸ್ನಾತಕೋತ್ತರ ಕೇಂದ್ರದಿಂದ ನಿರ್ಗಮಿಸುವ ವಿದ್ಯಾರ್ಥಿಗಳು ಕೇವಲ ಅಂಕಪಟ್ಟಿ ಹೊಂದುವ ಬದಲಾಗಿ ಸಂಪನ್ಮೂಲ ವ್ಯಕ್ತಿಯಾಗಿ ನಿರ್ಗಮಿಸಬೇಕು ಎಂದರು.

ಉಪನ್ಯಾಸಕರಾದ ಡಾ.ರಾಜಶೇಖರ ಜಮದಂಡಿ, ಶಿವಕುಮಾರ ಜಿ, ಅನ್ನಪೂರ್ಣಾ, ನೀಲಪ್ಪ ಹುಚ್ಚಣ್ಣನವರ್, ತಿಪ್ಪೇಶ್ ಜಾಲಿಮರದ್, ಡಾ.ಬಸವರಾಜ, ಶ್ರೀಕಾಂತ್‌, ಸಂತೋಷ್‌, ಅಕ್ಷಯ್‌ ಕುಲಕರ್ಣಿ, ಪ್ರಸನ್ನ ಇದ್ದರು. ಯಮನಪ್ಪ ರಗಡದ್ ಸ್ವಾಗತಿಸಿದರು. ಮಹೇಶ್ವರಿ ಅಕ್ಕಸಾಲಿಗ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.