ಗಂಗಾವತಿ: ಆಟೊನಗರದ ಸಮಸ್ಯೆ ನಿವಾರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಆರು ಬಾರಿ ನೊಟೀಸ್ ನೀಡಿದರೂ ನಗರಸಭೆ ಆಯುಕ್ತರು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಆಟೊನಗರ ಕಾರ್ಮಿಕರು ಗುರುವಾರ ನಗರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹಿರಿಯ ಕಾರ್ಮಿಕ ಮುಖಂಡ ಜೆ. ಭಾರದ್ವಾಜ್ ನೇತೃತ್ವದಲ್ಲಿ ಬಾಬು ಜಗಜೀವನರಾಂ ವೃತ್ತದಲ್ಲಿ 40 ದಿನ ಧರಣಿನಿರತ ಕಾರ್ಮಿಕರು ನಗರಸಭೆ ಕಚೇರಿವರೆಗೆ ಪಾದಯಾತ್ರೆ ಕೈಗೊಂಡು ನಗರಸಭೆ ಆಯುಕ್ತ ಖಾ ಜಾಮೊಹಿನುದ್ದೀನ್ ವಿರುದ್ಧ ಘೋಷಣೆ ಕೂಗಿದರು.
ಮುಖಂಡ ಜೆ. ಭಾರದ್ವಾಜ್ ಮಾತನಾಡಿ, ‘ನಗರದಲ್ಲಿ ಒಂದು ನಿವೇಶನಕ್ಕೆ ₹ 6 ಸಾವಿರದಿಂದ ₹ 8 ಸಾವಿರ ಮೌಲ್ಯವಿದ್ದಾಗ ಆಟೋನಗರದಲ್ಲಿ ಕಾರ್ಮಿಕರು ₹ 10 ಸಾವಿರ ಹಣ ನೀಡಿ ನಿವೇಶನ ಖರೀದಿಸಿದ್ದಾರೆ. ಆದರ ನಗರಸಭೆಯ ಆಡಳಿತಕ್ಕೆ ಆಟೋನಗರ ಒಳಪಡದಂತೆ ನಿರ್ಲಕ್ಷ್ಯ ತೋರುತ್ತಿರುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಶಾಸಕ ಇಕ್ಬಾಲ್ ಅನ್ಸಾರಿ ಆಟೊನಗರವನ್ನು ಆಶ್ರಯ ಸಮಿತಿಯ ಅಧೀನಕ್ಕೆ ತಂದು ತಮ್ಮ ಬೆಂಬಲಿಗರಿಗೆ ನಿವೇಶನ ಒತ್ತುವರಿ ಮಾಡಲು ಕುಮ್ಮಕ್ಕು ನೀಡುತ್ತಿದ್ದಾರೆ. ಕೂಡಲೆ ನಗರಸಭೆ ಪೌರಾಯುಕ್ತ ಆಶ್ರಯ ಸಮಿತಿಯಿಂದ ಆಟೊನಗರವನ್ನು ಕೈಬಿಡಬೇಕು’ ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಖಾಜಾಮೊಹಿನುದ್ದೀನ್, ‘ಆಟೋನಗರ ಸಮಸ್ಯೆ ನನ್ನ ಆಡಳಿತದ ಅವಧಿಯಲ್ಲಿ ನಡೆದಿಲ್ಲ. ಹೀಗಾಗಿ ಸಮಸ್ಯೆ ಅರಿತು ಪರಿಹಾರ ಕಂಡುಕೊಳ್ಳಲು ವಿಳಂಬ ವಾಗಿದೆ. ಕೂಡಲೇ ಕಾನೂನು ಕ್ರಮ ಕೈಗೊಂಡು ಸಮಸ್ಯೆ ಪರಿಹಾರಕ್ಕೆ ಯತ್ನಿ ಸುತ್ತೇನೆ’ ಎಂದು ಭರವಸೆ ನೀಡಿದರು.
ಪ್ರಗತಿಪರ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷೆ ಶಾಂತಾ ಕುಮಾರಿ, ಆಟೊನಗರದ ಕಾರ್ಮಿಕ ರಾದ ಆರೋಗ್ಯಮ್ಮ, ಅನ್ವರ್, ಜಿ. ರಮೇಶ, ಸಿ.ಎಚ್. ಜಯಕೃಷ್ಣ, ಟಿ. ಮಂಜುನಾಥ, ಹುಸೇನ, ಗೋಪಿ, ಪ್ರಕಾಶ, ರಾಜಾವಲಿ ಇದ್ದರು.
**
ಆಟೊನಗರದತ್ತ ನಗರಸಭೆ ಆಯುಕ್ತರು ನಿರ್ಲಕ್ಷ್ಯ ತೋರಿರುವುದು ಸರಿಯಲ್ಲ. ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಅವರು ವಿಶೇಷ ಆದ್ಯತೆ ನೀಡಬೇಕು.
-ಜೆ.ಭಾರದ್ವಾಜ್,
ಕಾರ್ಮಿಕ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.