ADVERTISEMENT

ಆಧಾರ್ ಕಾರ್ಡ್‌ಗಾಗಿ ಜನರ ಪರದಾಟ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 9:35 IST
Last Updated 21 ಸೆಪ್ಟೆಂಬರ್ 2011, 9:35 IST

ಕುಷ್ಟಗಿ: `ಆಧಾರ~ ಗುರುತಿನ ಕಾರ್ಡ್ ಪಡೆಯುವುದಕ್ಕಾಗಿ ಸೋಮವಾರ ಗ್ರಾಮಾಂತರ ಪ್ರದೇಶದಿಂದ ಸಾಕಷ್ಟು ಸಂಖ್ಯೆ ಜನರು ಪಟ್ಟಣಕ್ಕೆ ಆಗಮಿಸಿದ್ದರಿಂದ ಆಧಾರ್ ಅರ್ಜಿ ಸ್ವೀಕೃತಿ ಕೇಂದ್ರದಲ್ಲಿ ನೂಕು ನುಗ್ಗಲು ಉಂಟಾಗಿತ್ತು.

ಆದರೆ ಅರ್ಜಿ ಸಲ್ಲಿಸುವುದಕ್ಕೆ ನಿಗದಿತ ಫಾರ್ಮ್ ಪಡೆಯಬೇಕು ಎಂಬ ಮಾಹಿತಿ ಇಲ್ಲದ ಜನರನ್ನು ಮಧ್ಯವರ್ತಿಗಳು ದಾರಿತಪ್ಪಿಸ್ದ್ದಿದರಿಂದ ಹಳ್ಳಿಯ ಜನರು ಜೆರಾಕ್ಸ್ ಪ್ರತಿಗಳಲ್ಲೇ ಮಾಹಿತಿ ಭರ್ತಿ ಮಾಡಿ ಮೋಸಹೋಗಿದ್ದು ಕಂಡುಬಂತು.

ಪ್ರಾರಂಭದ ಹಂತದಲ್ಲಿ ಆಧಾರ್ ಅರ್ಜಿ ಪಡೆಯುವುದಕ್ಕಾಗಿ ಪಟ್ಟಣ ಮತ್ತು ಪ್ರಮುಖ ಹೋಬಳಿಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದ್ದು, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅರ್ಜಿ ಸ್ವೀಕರಿಸಿ ಮಾಹಿತಿ ಪಡೆಯುವ ಪ್ರಕ್ರಿಯೆ ನಡೆಯಯತ್ತದೆ. ಹಾಗಾಗಿ ಗ್ರಾಮಾಂತರ ಪ್ರದೇಶದ ಜನರು ಪಟ್ಟಣ ಅಥವಾ ಹೋಬಳಿ ಕೇಂದ್ರಗಳಿಗೆ ಸದ್ಯ ಬರುವ ಅಗತ್ಯವಿಲ್ಲ ಎಂದು ಈ ಮೊದಲೇ ತಿಳಿಸಲಾಗಿತ್ತು.

ಆದರೆ ಆಧಾರ್ ಕಾರ್ಡ್ ಇಲ್ಲದಿದ್ದರೆ ಪಡಿತರ, ಮಾಸಾಶನ ಸೇರಿದಂತೆ ಸರ್ಕಾರದ ವಿವಿಧ ರೀತಿಯ ಸೌಲಭ್ಯಗಳು ದೊರೆಯುವುದಿಲ್ಲ ಎಂದು ತಿಳಿದ ಜನ ಅದಕ್ಕಾಗಿ ಪಟ್ಟಣಕ್ಕೆ ಆಗಮಿಸಿ ಕೇಂದ್ರಕ್ಕೆ ಮುಗಿಬ್ದ್ದಿದದ್ದ ಕಂಡುಬಂತು.

ಅ್ಲ್ಲಲದೇ ಮಾಹಿತಿ ಭರ್ತಿ ಮಾಡಲು ಕೇಂದ್ರಗಳಲ್ಲೇ ಉಚಿತವಾಗಿ ಅರ್ಜಿ ಫಾರ್ಮ್‌ಗಳನ್ನು ನೀಡಲಾಗುತ್ತಿದೆಯಾದರೂ ಮಾಹಿತಿ ಭರ್ತಿಗೆ ಅನಕ್ಷರಸ್ಥರು ಮಧ್ಯವರ್ತಿಗಳನ್ನೇ ಅವಲಂಬಿಸುವಂಥ ಅನಿವಾರ್ಯತೆ ಎದುರಾಗಿದ್ದು ಕೇಂದ್ರ ಹೊರಗೆ ಅಂಗಡಿಗಳಲ್ಲಿ ಜೆರಾಕ್ಸ್ ಅಂಗಡಿಗಳಲ್ಲಿ ನಕಲು ಪ್ರತಿಯನ್ನು ಪಡೆದು ಮಧ್ಯವರ್ತಿಗಳಿಂದ ಅದನ್ನು ಭರ್ತಿ ಮಾಡಿಸುತ್ತಿದ್ದುದು ಸೋಮವಾರ ಕಂಡುಬಂದಿತು. ಅಲ್ಲದೇ ಸದರಿ ಪ್ರತಿಗೆ ಜೆರಾಕ್ಸ್ ಅಂಗಡಿಯವರು ಜನರಿಂದ ರೂ. 4  ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದವು.

ಈ ಕುರಿತು ವಿವರಿಸಿದ ತಹಸೀಲ್ದಾರ ವೀರೇಶ ಬಿರಾದಾರ, ಮೂಲ ಅರ್ಜಿ ಫಾರ್ಮ್‌ಗಳಲ್ಲೇ ಮಾಹಿತಿ ಭರ್ತಿ ಮಾಡಬೇಕು. ಜೆರಾಕ್ಸ್ ಪ್ರತಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಆದರೆ ಅರಿವಿನ ಕೊರತೆಯಿಂದ ಜನರು ಜೆರಾಕ್ಸ್ ಪ್ರತಿಗಳನ್ನೇ ಭರ್ತಿ ಮಾಡಿ ಸಮಯ ವ್ಯರ್ಥಮಾಡಿಕೊಳ್ಳುವಂತಾಯಿತು. `ನಮ್ಗ ಜೆರಾಕ್ಸ್ ಅರ್ಜಿಯೊಳ್ಗ ಮಾಹಿತಿ  ತುಂಬಿದರ ನಡಿತೈತಿ ಅಂತಾ ಹೇಳಿದ್ರು, ಅದಕ್ಕಾಗೇ ಮತ್ತೆ ನಾಳೆ ರೊಕ್ಕ, ವ್ಯಾಳ್ಯ ಹಾಳಮಾಡ್ಕೊಂಡು ಬರಬಕಾತು ನೋಡ್ರಿ~ ಎಂದೆ ವಣಗೇರಿ ಗ್ರಾಮದ ಬಸವರಾಜ್, ಹನಮಂತಪ್ಪ ಮತ್ತಿತರರು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.