ADVERTISEMENT

ಇಚ್ಛಾಶಕ್ತಿ ಕೊರತೆ, ಸಮಸ್ಯೆ ಉಲ್ಬಣ

​ಪ್ರಜಾವಾಣಿ ವಾರ್ತೆ
Published 6 ಜುಲೈ 2012, 9:20 IST
Last Updated 6 ಜುಲೈ 2012, 9:20 IST

ಕನಕಗಿರಿ: ಈ ಭಾಗದಿಂದ ಆಯ್ಕೆಯಾದ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಸಮುದಾಯ ಆರೋಗ್ಯ ಕೇಂದ್ರ ವೈದ್ಯರು ಸೇರಿದಂತೆ ಇತರೆ ಅಗತ್ಯ ಸೌಲಭ್ಯಗಳಿಂದ ಬಳಲುತ್ತಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಕರವೇ ಗೌರವಾಧ್ಯಕ್ಷ ಡಾ. ದೊಡ್ಡಯ್ಯ ಅರವಟಗಿಮಠ ದೂರಿದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ವೈದ್ಯರು ಸೇರಿದಂತೆ ಇತರೆ ಮೂಲ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಗುರುವಾರ ಆಸ್ಪತ್ರೆ ಮುಂದೆ ಆಯೋಜಿಸಿದ್ದ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜನಸಂಖ್ಯೆ ಹಾಗೂ ಆಸ್ಪತ್ರೆಗೆ ತಕ್ಕಂತೆ ವೈದ್ಯರು ಹಾಗೂ ಸಿಬ್ಬಂದಿ ಸೌಲಭ್ಯ ಇಲ್ಲದಿರುವುದಕ್ಕೆ ಸರ್ಕಾರ ಮತ್ತು ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷ್ಯವೆ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ, ವೈದ್ಯರಿಲ್ಲದ ಕಾರಣ ಜನ ಸಾಮಾನ್ಯರಿಗೆ ಅದರಲ್ಲಿಯೂ ಮಹಿಳೆಯರಿಗೆ ಹೆಚ್ಚಿನ ತೊಂದರೆ ಉಂಟಾಗಿದೆ ಎಂದು ಅವರು ಹೇಳಿದರು.

ಕರವೇ ತಾಲ್ಲೂಕು ಅಧ್ಯಕ್ಷ ಪಾಪಣ್ಣ ನಾಯಕ ಮಾತನಾಡಿ ತಾಲ್ಲೂಕಿನ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ, ಹೆರಿಗೆ, ಕಾಮಲೆ, ಹೃದಯರೋಗ ಇತರೆ ಕಾಯಿಲೆಗಳಿಗೆ ಜನತೆಯಿಂದ ವ್ಯಾಪಕವಾಗಿ ಹಣ ಸುಲಿಯುತ್ತಿದ್ದಾರೆ ಎಂದು ಆರೋಪಿಸಿದರು.

ಮೇಲಾಧಿಕಾರಿಗಳ ಬೇಜವಾಬ್ದಾರಿಯಂದ ಅಗತ್ಯ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ತಿಳಿಸಿದರು.
ಕರವೇ ಪ್ರಧಾನ ಕಾರ್ಯದರ್ಶಿ ದೇಸಾಯಿಗೌಡ, ಸಂಘಟನಾ ಕಾರ್ಯದರ್ಶಿ ತಿರುಪತಿ ಯಾದವ, ಪ್ರಮುಖ ಖಾದರಸಾಬ ಇಟ್ಟಂಗಿ ಇತರರು ಮಾತನಾಡಿದರು.

ಕರವೇ ಅಧ್ಯಕ್ಷ ಶರಣಪ್ಪ ಬಜಾರದ, ಉಪಾಧ್ಯಕ್ಷ ಶರಣಪ್ಪ ಭಾವಿಕಟ್ಟಿ, ಪ್ರಮುಖರಾದ ಗಂಗಾಧರಸ್ವಾಮಿ ಕಲುಬಾಗಿಲಮಠ, ಶರಣಪ್ಪ ಎಸ್. ಸಜ್ಜನ್, ಕನಕಪ್ಪ ಗಂಗಾಮತ, ಶ್ರೀನಿವಾಸ ನಾಯಕ, ಪಾಮಣ್ಣ, ಶಾಬುದ್ದೀನ್, ಹುಸೇನಸಾಬ ಅಗರಬತ್ತಿ, ಲಕ್ಷ್ಮಣ, ಶಂಕರ, ಉಮೇಶ ಬಂಡಿ, ವೀರೇಶ, ಅರ್ಜುನ ನಾಯಕ್, ಕನಕಪ್ಪ ಡಿಶ್ ಸೇರಿದಂತೆ ಕರ್ನಾಟಕ ರಕ್ಷಣಾ ವೇದಿಕೆಯವರು ಭಾಗವಹಿಸಿದ್ದರು.

ಇದಕ್ಕೂ ಪೂರ್ವದಲ್ಲಿ ಕಲ್ಮಠದಿಂದ ಆರಂಭವಾದ ಮೆರವಣಿಗೆ ರಾಜಬೀದಿ, ಡಾ. ಜಗಜೀವನರಾಮ್, ಹೇಮರೆಡ್ಡಿ ಮಲ್ಲಮ್ಮ ವೃತ್ತ ಹಾಯ್ದು ಆಸ್ಪತ್ರೆ ತಲುಪಿತು.

ಪ್ರತಿಭಟನೆಯಲ್ಲಿ ಶಾಸಕ ಶಿವರಾಜ ತಂಗಡಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾ ವಿರುದ್ಧ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.