ADVERTISEMENT

ಇಬ್ಬರು ಬಾಲಕರು ನೀರುಪಾಲು

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 10:26 IST
Last Updated 3 ಜೂನ್ 2013, 10:26 IST

ಯಲಬುರ್ಗಾ: ತಾಲ್ಲೂಕಿನ ಮಂಗಳೂರು ಗ್ರಾಮದ ಹೊರವಲಯದಲ್ಲಿನ ಹಳ್ಳದ ನೀರಿನಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರುಪಾಲಾದ ಘಟನೆ ಭಾನುವಾರ ಜರುಗಿದೆ.

ಗ್ರಾಮದ ಪ್ರಕಾಶ ಹನಮಪ್ಪ ಹಳ್ಳಿ(16) ಹಾಗೂ ಮಲ್ಲೇಶಪ್ಪ ಮಂಗಳೂರು ನನ್ನಕ್ಕಿ (12) ನೀರುಪಾಲಾದ ಬಾಲಕರು. ದೇವರಾಜ ದ್ಯಾಮಣ್ಣ ಯಲಬುರ್ಗಿ ಎಂಬ ಬಾಲಕನನ್ನು ರಕ್ಷಿಸಲಾಗಿದ್ದು, ಈತ  ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶನಿವಾರ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆ ಬಿದ್ದಿರುವ ಹಿನ್ನೆಲೆಯಲ್ಲಿ ಮಂಗಳೂರು ಪ್ರದೇಶದ ಬಹುತೇಕ ಹಳ್ಳಗಳು ಭರ್ತಿಯಾಗಿ ಹರಿಯುತ್ತಿವೆ. ಗ್ರಾಮಕ್ಕೆ ಹೊಂದಿಕೊಂಡಿದ್ದ ಹಿರೇಹಳ್ಳದ ತಗ್ಗು ಪ್ರದೇಶದಲ್ಲಿ ನಿಂತಿದ್ದ ನೀರಿನಲ್ಲಿ ಬಾಲಕರು ಈಜಲು ಹೋದಾಗ ಈ ದುರಂತ ಸಂಭವಿಸಿದೆ.

ಸುಮಾರು 10ಕ್ಕ್ಕೂ ಹೆಚ್ಚು ಮಕ್ಕಳು ಈ ಹಳ್ಳದಲ್ಲಿ ಈಜಲು ಹೋಗಿದ್ದರ ಪೈಕಿ ಈಜು ಬರದೇ ಇರುವವರು ಹೆಚ್ಚಿನ ಸಂಖ್ಯೆಯಲ್ಲಿದ್ದರು, ಕಡಿಮೆ ನೀರಿನಲ್ಲಿ ಈಜುತ್ತಾ ದೊಡ್ಡ ಆಳವಾದ ನೀರಿನಲ್ಲಿ ಇಳಿದ್ದರ ಪರಿಣಾಮ ಮೇಲೆ ಬರಲು ಸಾಧ್ಯವಾಗಿಲ್ಲ, ಜೊತೆಗೆ ಮರಳು ಪ್ರಮಾಣ ಕಡಿಮೆಯಿದ್ದು ಮಣ್ಣಿನ ಪ್ರಮಾಣ ಹೆಚ್ಚಾಗಿರುವುದರಿಂದ ಕಾಲು ಸಿಕ್ಕಿಹಾಕಿಕೊಂಡು ಈ ಬಾಲಕರು ಮೃತಪಟ್ಟಿದ್ದಾರೆಂಬುದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ನೀರಲ್ಲಿ ಮುಳುಗುತ್ತಿದ್ದ ದೇವರಾಜ ಎಂಬಾತನನ್ನು ಹೊರಹಾಕಿ ಮಲ್ಲೇಶಎಂಬಾತನನ್ನು ನನ್ನು ಉಳಿಸಲು ಹೋಗಿ ಪ್ರಕಾಶ ಹಳ್ಳಿ ಎಂಬ ಬಾಲಕನ ಸಾವನ್ನಪ್ಪಿದ್ದಾನೆಎಸ್ಸೆಸ್ಸೆಲ್ಸಿ ಪ್ರವೇಶ ಪಡೆದುಕೊಂಡಿದ್ದ ಪ್ರಕಾಶ ಬಡಕುಟುಂಬದ ಪ್ರತಿಭಾವಂತ ಯುವಕನಾಗಿದ್ದು, ಕುಟುಂಬದ ಮಕ್ಕಳಲ್ಲಿ ಮೂರನೆಯವನಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅದೇ ರೀತಿ ಮಲ್ಲೇಶ ಎಂಬ ಬಾಲಕ ಕೂಡಾ 8ನೇ ತರಗತಿ ವಿದ್ಯಾರ್ಥಿ.

ಮುಗಿಲು ಮುಟ್ಟಿದ ಆಕ್ರಂದನ: ಬೆಳಿಗ್ಗೆ ಊಟಮಾಡಿ ಆಡಲು ಹೋದ ಮಕ್ಕಳು ನೀರು ಪಾಲದ ಹಿನ್ನಲೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಆಘಾತದಿಂದ ಪ್ರಕಾಶ ಎಂಬ ಬಾಲಕನ ಸಹೋದರ ಹಾಗೂ ಪಾಲಕರು ತೀವ್ರ ಅಸ್ವಸ್ಥ್ಯರಾಗಿ ಕುಸಿದು ಬಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದ್ದಿ ತಿಳಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಶಾಸಕ ಬಸವರಾಜ ರಾಯರೆಡ್ಡಿ, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ  ಸಾಂತ್ವನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.