ADVERTISEMENT

ಉಪಮುಖ್ಯಮಂತ್ರಿ ಸ್ಥಾನ: ವರಿಷ್ಠರ ತೀರ್ಮಾನಕ್ಕೆ ಬದ್ಧ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2018, 9:13 IST
Last Updated 5 ಮಾರ್ಚ್ 2018, 9:13 IST

ಕನಕಗಿರಿ: ‘ರಾಜ್ಯದ ಎಲ್ಲೆಡೆ ಬಿಜೆಪಿ ಅಲೆ ಇದೆ. ನಾನು ಉಪ ಮುಖ್ಯಮಂತ್ರಿ ಆಗಬೇಕೆಂದು ವಾಲ್ಮೀಕಿ ಸಮಾಜ ಬಾಂಧವರು ಬಯಸುತ್ತಿದ್ದಾರೆ. ಆದರೆ ಮೊದಲು ಪಕ್ಷ ಸಂಘಟನೆ ಕೈಗೊಳ್ಳುವಂತೆ ವರಿಷ್ಠರು ಸೂಚಿಸಿದ್ದು, ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವೆ’ ಎಂದು ಸಂಸದ ಶ್ರೀರಾಮುಲು ಹೇಳಿದರು.

ಇಲ್ಲಿನ ಐತಿಹಾಸಿಕ ಕನಕಾಚಲಪತಿ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ, ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ. ಯಡಿಯೂರಪ್ಪನವರು ಘೋಷಣೆ ಮಾಡಿದಂತೆ ಬಿಜೆಪಿ ಅಭ್ಯರ್ಥಿ ಬಸವರಾಜ ಧಡೇಸೂಗುರ ಅವರು ಈ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಉಳಿದ ಆಕಾಂಕ್ಷಿಗಳ ಬಗ್ಗೆ ಮತದಾರರು ತಲೆಕೆಡಿಸಿಕೊಳ್ಳಬಾರದು. ಶಾಸಕ ಶಿವರಾಜ ತಂಗಡಗಿ ಅವರ ಪಾಪದ ಕೊಡ ತುಂಬಿದೆ. ಧಡೇಸೂಗುರ ಅವರ ಗೆಲುವು ಖಚಿತ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಇದಕ್ಕೂ ಮುಂಚೆ ಅವರು ಪ್ರವಾಸಿ ಮಂದಿರದಿಂದ ರಾಜಬೀದಿ ಮೂಲಕ ಕನಕಾಚಲಪತಿ ದೇವಸ್ಥಾನದ ವರೆಗೆ ರೋಡ್ ಶೋ ನಡೆಸಿದರು. ನೂರಾರು ಯುವಕರು ಬೈಕ್ ರ್‍ಯಾಲಿಯಲ್ಲಿ ಭಾಗವಹಿಸಿದ್ದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಸವರಾಜ ಧಡೇಸೂಗುರ, ಮಂಡಲ ಅಧ್ಯಕ್ಷ ಶಿವಶರಣೇಗೌಡ, ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ನಾಗರಾಜ ಬಿಲ್ಗಾರ, ಜಿಲ್ಲಾಧ್ಯಕ್ಷ ರಮೇಶ ನಾಯಕ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬಸವರಾಜಪ್ಪ , ಮಂಡಲ ಪ್ರಧಾನ ಕಾರ್ಯದರ್ಶಿ ಡಾ. ದೇವರಾಜ ಮಂಗಳೂರು, ಪಟ್ಟಣ ಪಂಚಾಯಿತಿ ಸದಸ್ಯರಾದ ರವೀಂದ್ರ ಸಜ್ಜನ್, ಮಂಜುನಾಥರಡ್ಡಿ ಮಾದಿನಾಳ, ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಈಶಪ್ಪ ಹಿರೇಮನಿ, ಎಸ್‌ಟಿ ಮೋರ್ಚಾ ಅಧ್ಯಕ್ಷ ಗ್ಯಾನಪ್ಪ ಗಾಣದಾಳ, ಎಸ್‌ಸಿ ಮೋರ್ಚಾ ಅಧ್ಯಕ್ಷ ಕಂಠೆಪ್ಪ ಮ್ಯಾಗಡೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಸಣ್ಣ ಕನಕಪ್ಪ, ನಗರ ಘಟಕದ ಅಧ್ಯಕ್ಷ ಪ್ರಕಾಶ ಹಾದಿಮನಿ, ಮಾಜಿ ಅಧ್ಯಕ್ಷ ಮಹಾಂತೇಶ ಸಜ್ಜನ್, ಜೀಲನಸಾಬ ಕಾತರಕಿ, ಮುದಿಯಪ್ಪ ಇದ್ದರು.

ಮಹರ್ಷಿ ವಾಲ್ಮೀಕಿ, ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.