ADVERTISEMENT

ಎಪಿಎಂಸಿ ಆಸ್ತಿ ಸಂರಕ್ಷಣೆಗೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 9:45 IST
Last Updated 24 ಫೆಬ್ರುವರಿ 2011, 9:45 IST

ಕನಕಗಿರಿ: ಎಪಿಎಂಸಿ ವ್ಯಾಪ್ತಿಯ ಆಸ್ತಿಯನ್ನು ಸಂರಕ್ಷಣೆ ಮಾಡುವುದು ತಮ್ಮ ಮೊದಲ ಆದ್ಯತೆ, ನನ್ನದಲ್ಲದ ಜಾಗೆ ಬಗ್ಗೆ ನಾನು ತಲೆಕೆಡಿಸಿಕೊಳ್ಳು ವುದಿಲ್ಲ, ಜಾಗೆ ನಮ್ಮ ಎಪಿಎಂಸಿಗೆ ಸೇರಿದ್ದರೆ ಯಾವ ಕಾರಣಕ್ಕೂ ಬಿಡುವುದಿಲ್ಲ. ಯಾರ ಒತ್ತಡಕ್ಕೂ ಮಣಿಯುವುದಿಲ್ಲ ಎಂದು ಗಂಗಾವತಿ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಎಚ್. ಕೆ. ಚಂದ್ರಮೋಹನ್ ಹೇಳಿದರು.

ಇಲ್ಲಿನ ಎಪಿಎಂಸಿ ಕಾರ್ಯಾಲಯಕ್ಕೆ ಬುಧವಾರ ಭೇಟಿ ನೀಡಿ ಎಪಿಎಂಸಿ ಜಾಗೆಯಲ್ಲಿ ಅನಧಿಕೃತವಾಗಿ ಹಾಕಿರುವ ಶೆಡ್ ತೆರವು ಕುರಿತು ಚರ್ಚಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.ತಾವು ಯಾರ ಪರವೂ ಇಲ್ಲ, ಯಾರ ವಿರುದ್ಧವೂ ಇಲ್ಲ. ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದರು.ಅಕ್ರಮ ಶೆಡ್ ನಿರ್ಮಿಸಿರುವ ನಾಗೇಶ ರೊಟ್ಟಿ ಭಾನುವಾರದೊಳಗೆ ಶೆಡ್ ತೆರವುಗೊಳಿಸುವುದಾಗಿ ಲಿಖಿತವಾಗಿ ಬರೆದುಕೊಟ್ಟಿದ್ದಾರೆ ಎಂದು ತಿಳಿಸಿದರು.   

ಜೆಡಿಎಸ್ ಮುಖಂಡ ಬಿ. ಕನಕಪ್ಪ ಮಾತನಾಡಿ, ಎಪಿಎಂಸಿ ಜಾಗೆಯಲ್ಲಿ ಅನಧಿಕೃತವಾಗಿ ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಿಸಲಾಗಿದೆ. ಈ ಬಗ್ಗೆ ನಿಮ್ಮ ಗಮನಕ್ಕೆ ಬಂದರೂ ಏನೂ ಕ್ರಮ ತೆಗೆದುಕೊಂಡಿಲ್ಲ. ಅಕ್ರಮ ದೇವಸ್ಥಾನವನ್ನು ಸಕ್ರಮಗೊಳಿಸುವ ಕೆಲಸ ನಡೆದಿದೆ ಎಂದು ದೂರಿದರು.  ಉಪ ಮಾರುಕಟ್ಟೆಯಲ್ಲಿ ಬಿಳಿ ಚೀಟಿ ವ್ಯವಹಾರ ಈಗಲೂ ನಡೆಯುತ್ತಿದೆ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ದಲಾಲಿ ವರ್ತಕರು ಖರೀದಿ ಮಾಡಿದ ಉತ್ಪನ್ನಗಳನ್ನು ದಾಸ್ತಾನು ಮಾಡಿಕೊಂಡು ಹೆಚ್ಚಿನ ಲಾಭ ಪಡೆಯುತ್ತಿದ್ದರೂ ನೀವು ಮೌನ ವಹಿಸಿರುವುದೇಕೆ ಎಂದು ಕನಕಪ್ಪ ಪ್ರಶ್ನಿಸಿದರು.

ಆಗ ಚಂದ್ರಮೋಹನ್ ಉತ್ತರಿಸಿ ಅಕ್ರಮ ದೇವಸ್ಥಾನ ನಿರ್ಮಾಣ ತಮ್ಮ ಅಧಿಕಾರಾವಧಿಯಲ್ಲಿ ಆಗಿಲ್ಲ. ಅದಾಗ್ಯೂ ಅಕ್ರಮ ದೇವಸ್ಥಾನ ಹಾಗೂ ರೈತರ ಬೆಳೆಗಳ ದಾಸ್ತಾನು ವಿಚಾರ ತಮ್ಮ ಗಮನಕ್ಕೆ ಬಂದಿದೆ. ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.ಇಲ್ಲಿನ ಎಪಿಎಂಸಿಯ ಸಣ್ಣ ಮಳಿಗೆಗಳನ್ನು ಮರು ಟೆಂಡರ್ ಮಾಡುವ ಇಲ್ಲವೆ ಮಾರಾಟ ಮಾಡುವ ಕುರಿತು ಮೇಲಧಿಕಾರಿಗಳ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಎಪಿಎಂಸಿ ನಾಮ ನಿರ್ದೇಶಕ ವಾಗೇಶ, ಉದ್ಯಮಿ ನಾಗೇಶ ರೊಟ್ಟಿ, ದಲಾಲಿ ವರ್ತಕರ ಸಂಘದ ಅಧ್ಯಕ್ಷ ಮಹಾಂತೇಶ್ ಸಜ್ಜನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.