ADVERTISEMENT

ಕಾಂಗ್ರೆಸ್‌ ಬೆಂಬಲಿಸಲು ಬಿಜೆಪಿ ಶಾಸಕ ಮನವಿ?

ಸಂಚಲನ ಮೂಡಿಸಿದ ಫೇಸ್‌ಬುಕ್‌ ಸಂದೇಶ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 12:38 IST
Last Updated 23 ಮಾರ್ಚ್ 2014, 12:38 IST

ಕುಷ್ಟಗಿ: ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಸವರಾಜ ಹಿಟ್ನಾಳ ಅವರನ್ನು ಬೆಂಬಲಿಸುವಂತೆ ಸ್ಥಳೀಯ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಹೆಸರಿನಲ್ಲಿ ಕುರುಬ ಜನಾಂಗದವರಿಗೆ ಮನವಿ ಮಾಡಿರುವ ಫೇಸ್‌ಬುಕ್‌ ಸಂದೇಶ ತಾಲ್ಲೂಕು ಸೇರಿದಂತೆ ಜಿಲ್ಲೆಯಲ್ಲಿ ಸಂಚಲನ ಸೃಷ್ಟಿಸಿದೆ.

ಅಲ್ಲದೇ ಈ ಫೇಸ್‌ಬುಕ್‌ ಪುಟದಲ್ಲಿ ದೊಡ್ಡನಗೌಡ ಪಾಟೀಲರೊಂದಿಗೆ ಮಾಜಿ ಶಾಸಕ ಕಾಂಗ್ರೆಸ್‌ನ ಹಸನ್‌­ಸಾಬ್‌ ದೋಟಿಹಾಳ ಅವರ ಚಿತ್ರವೂ ಸಹ ಇರುವುದು ಅಚ್ಚರಿ ಮೂಡಿಸಿದೆ. ಬಸವರಾಜ ಹಿಟ್ನಾಳ ಮತ್ತು ದೊಡ್ಡನ­ಗೌಡ ಪಾಟೀಲ ಇಬ್ಬರೂ ಕುರುಬ ಜನಾಂಗಕ್ಕೆ ಸೇರಿರುವುದರಿಂದ ಚರ್ಚೆಗೆ ಗ್ರಾಸ ವಾಗಿದೆ. ಈ ಸಂದೇಶ ಮೊಬೈ­ಲ್‌ಗಳ ಮೂಲಕವೂ ಹರಿದಾಡುತ್ತಿ­ರುವುದು ಶಾಸಕ ಪಾಟೀಲರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಅಲ್ಲಗಳೆದ ಶಾಸಕ ದೊಡ್ಡನಗೌಡ, ಫೇಸ್‌ಬುಕ್‌ ಸಂದೇ­ಶಕ್ಕೂ ನನಗೂ ಸಂಬಂಧವಿಲ್ಲ. ಇದೊಂದು ವ್ಯವಸ್ಥಿತ ಪಿತೂರಿಯಾ­ಗಿದೆ. ಚುನಾವಣೆ ಸಂದರ್ಭದಲ್ಲಿ ಸಾಮಾ­ಜಿಕ ಜಾಲ ತಾಣವನ್ನು ದುರು­ಪಯೋಗ ಪಡಿಸಿಕೊಳ್ಳಲಾ­ಗಿದ್ದು, ಕುರುಬ ಸಮಾಜ ಮತ್ತು ಬಿಜೆಪಿ ಬೆಂಬಲಿಗರನ್ನು ದಾರಿತಪ್ಪಿಸುವ ತಂತ್ರ­ವಾ­ಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೇ ಈ ಫೇಸ್‌ಬುಕ್‌ ಖಾತೆ ನಕಲಿಯಾಗಿದ್ದು ಅದನ್ನು ಸೃಷ್ಟಿಸಿದವರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಇಲ್ಲಿಯ ಪೊಲೀಸ್‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಮೂಲಕ ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ಸಲ್ಲಿಸಿರುವುದಾಗಿ ಪಾಟೀಲ ತಿಳಿಸಿದರು.
ಸಾಮಾಜಿಕ ಜಾಲತಾಣದ ಮೂಲಕ ಈ ರೀತಿ ವದಂತಿ ಹಬ್ಬಿಸಿರು­ವುದರಿಂದ ನಾನು ಮುಜುಗರ ಅನುಭವಿಸುವಂತಾಗಿದೆ. ಇದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗು­ತ್ತದೆ. ಹಾಗಾಗಿ ನಕಲಿ ಫೇಸ್‌ಬುಕ್‌ನ ವದಂತಿಗೆ ಕಿವಿಗೊಡಬಾರದು ಎಂದು ಜನರಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.

ನಾನು ಬಿಜೆಪಿಗೆ ನಿಷ್ಠನಾಗಿದ್ದು, ಪಕ್ಷಕ್ಕೆ ಎಂದೂ ದ್ರೋಹ ಬಗೆಯು­ವುದಿಲ್ಲ. ಆದರೂ ನನ್ನ ಹೆಸರಿಗೆ ಮಸಿ ಬಳಿಯುವ ಕುತಂತ್ರ ನಡೆಯುತ್ತಿದೆ. ಈ ಕೃತ್ಯದಲ್ಲಿ ಯಾರ ಕೈವಾಡ ಇದೆ ಎಂಬುದು ತನಿಖೆ ನಂತರ ತಿಳಿದುಬರಲಿದೆ ಎಂದರು.
ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಶಶಿಧರ ಕವಲಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.