ಕಾರಟಗಿ: ಆಸ್ಪತ್ರೆಯಲ್ಲಿ ಅಸಭ್ಯ ವರ್ತನೆ ಸಿಬ್ಬಂದಿ ದೂರು
ಪ್ರಜಾವಾಣಿ ವಾರ್ತೆ Published 21 ಡಿಸೆಂಬರ್ 2012, 6:54 IST Last Updated 21 ಡಿಸೆಂಬರ್ 2012, 6:54 IST ಕಾರಟಗಿ: ನಾಯಿ ಕಚ್ಚಿದ್ದಕ್ಕೆ ಚಿಕಿತ್ಸೆಗೆ ಆಗಮಿಸಿದ್ದ ವೇಳೆಯಲ್ಲಿ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಂದವರೊಂದಿಗೆ ಸಿಬ್ಬಂದಿ ಅಸಭ್ಯತನದಿಂದ ವರ್ತಿಸಿದ ಬಗ್ಗೆ ಗುರುವಾರ ವರದಿಯಾಗಿದೆ.
ಸಮೀಪದ ಬೇವಿನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅನುಸೂಯಾ ಶಾಲೆಗೆ ಹೊರಟ ಸಮಯದಲ್ಲಿ ಬೀದಿನಾಯಿ ಕಚ್ಚಿ ಗಾಯಗೊಳಿಸಿದೆ. ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಾಗ ಸಿಬ್ಬಂದಿ ಶಿವಪ್ಪ ಅಸಭ್ಯತನದಿಂದ ವರ್ತಿಸಿ, ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯತನ ತೋರಿದರೆಂದು, ಚುಚ್ಚುಮದ್ದು ಹಾಕಲು ಹಣ ಕೇಳಿದರೆಂಬ ಆರೋಪ ಕೇಳಿಬಂದಿದೆ. ಕೊನೆಗೆ ಹಣ ಪಾವತಿಸಿದ ಬಳಿಕ ಚುಚ್ಚುಮದ್ದು ನೀಡಲಾಯಿತು.
ವಿದ್ಯಾರ್ಥಿಯನ್ನು ಪರೀಕ್ಷಿಸಿ, ಚುಚ್ಚುಮದ್ದು ಹಾಕಲು ಚೀಟಿ ನೀಡಿ, ಕಂಪ್ಯೂಟರ್ ರೂಂಗೆ ಹೋಗಿದ್ದೆ. ಅಷ್ಟರಲ್ಲಿ ಗಲಾಟೆಯ ಶಬ್ದ ಕೇಳಿಬಂತು. ಸಿಬ್ಬಂದಿ ಶಿವಪ್ಪ ಹಾಗೂ ಬಂದವರೊಂದಿಗೆ ವಾಗ್ವಾದ ನಡೆದಿತ್ತು. ಉಭಯತರನ್ನು ಸಮಾಧಾನ ಮಾಡಿ, ಸಿಬ್ಬಂದಿ ಶಿವಪ್ಪಗೆ ನಡತೆ ತಿದ್ದಿಕೊಳ್ಳುವಂತೆ ಎಚ್ಚರಿಕೆ ನೀಡಿರುವೆ. ಬಿಪಿಎಲ್ ಕಾರ್ಡ್ ಇದ್ದರೆ ಹಣ ಬೇಕಿಲ್ಲ, ಇಲ್ಲದಿದ್ದರೆ ರೂ. 100 ಪಾವತಿಸಬೇಕಾಗುತ್ತದೆ. ರಸೀದಿ ನೀಡಲಾಗುತ್ತದೆ ಎಂದು ಆಡಳಿತ ವೈದ್ಯಾಧಿಕಾರಿ ಡಾ. ಕಾವೇರಿ ಶ್ಯಾವಿ ಸ್ಪಷ್ಟಪಡಿಸಿದರು.