ಕುಷ್ಟಗಿ: ‘ಸ್ವಚ್ಛ ಭಾರತ ಅಭಿಯಾನದ ಯಶಸ್ವಿಗೆ ತಾಲ್ಲೂಕಿನ ಜನರು ಕೈಜೋಡಿಸಿದ್ದಾರೆ. ಹೈದರಾಬಾದ ಕರ್ನಾಟಕ ಪ್ರದೇಶ ವ್ಯಾಪ್ತಿಯ ಬಯಲು ಶೌಚ ಮುಕ್ತ ತಾಲ್ಲೂಕುಗಳ ಪೈಕಿ ಕುಷ್ಟಗಿ ಮುಂಚೂಣಿಯಲ್ಲಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎ.ವೆಂಕಟರಾಜಾ ಹೇಳಿದರು.
ವಿಶ್ವ ಶೌಚಾಲಯ ದಿನಾಚರಣೆ ಪ್ರಯುಕ್ತ ತಾಲ್ಲೂಕಿನ ಹೆಸರೂರು ಗ್ರಾಮದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ತಾಲ್ಲೂಕು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಲು ಜನರೇ ಕಾರಣ’ ಎಂದರು.
‘ಪರಿಸರ ಸ್ವಚ್ಛವಾಗಿದ್ದರೆ ಜನ ಆರೋಗ್ಯವಂತರಾಗಿ ಇರುತ್ತಾರೆ. ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ. ಅಧಿಕಾರಿಗಳು ಮಾತ್ರವೇ ಈ ಕೆಲಸ ಸಾಧ್ಯವಾಗುವುದಿಲ್ಲ. ಜನರ ಸಹಕಾರ ತುಂಬಾ ಮುಖ್ಯ’ ಎಂದರು.
‘2012ರ ಬೇಸ್ಲೈನ್ ಸಮೀಕ್ಷೆ ಪ್ರಕಾರ, ಶೌಚಾಲಯ ರಹಿತ ಕುಟುಂಬಗಳ ಸಂಖ್ಯೆಗೆ ಅನುಗುಣವಾಗಿ ಶೇ 100ರಷ್ಟು ಶೌಚಾಲಯ ನಿರ್ಮಿಸಲಾಗಿದೆ. ಜಿಲ್ಲೆಯಲ್ಲಿ ಈ ತಾಲ್ಲೂಕಿನಲ್ಲಿ ಅತಿ ಹೆಚ್ಚು ವೈಯಕ್ತಿಕ ಶೌಚಾಲಯಗಳು ನಿರ್ಮಾಣವಾಗಿವೆ’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ಪಾಟೀಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಡಿ.ಮೋಹನ್, ಫಲಾನುಭವಿಗಳಾದ ಪ್ರೇಮಾ ಪಾಟೀಲ, ಯಮನಮ್ಮ ಹರಿಜನ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮಹಾಂತೇಶ ಬದಾಮಿ, ದೋಟಿಹಾಳ ಗ್ರಾಮ ಪಂಚಾಯಿತಿ ಶಕೀಲಾಬೇಗಂ ಯಲಬುರ್ಗಿ, ಉಪಾಧ್ಯಕ್ಷೆ ಅಮರಮ್ಮ ಮನ್ನಾಪುರ, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ರವಿ ಬಸರಿಹಳ್ಳಿ ಮತ್ತು ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಇದ್ದರು. ವೆಂಕಟೇಶ ವಂದಾಲ ಸ್ವಾಗತಿಸಿದರು. ಶ್ರೀಶೈಲ ಪೊಲೇಶ ನಿರೂಪಿಸಿದರು. ಬಸವರಾಜ ಸಂಕನಾಳ ವಂದಿಸಿದರು. ಹೆಸರೂರು ಮತ್ತು ಸುತ್ತಲಿನ ಗ್ರಾಮಸ್ಥರು ಇದ್ದರು.
* *
ಬಯಲಲ್ಲಿ ಬಹಿರ್ದೆಸೆಗೆ ಹೋಗುವಾಗ ಅನುಭವಿಸಿದ ಹಿಂಸೆ ವೈರಿಗೂ ಬರಬಾರದು. ಸ್ವಚ್ಛ ಭಾರತ ಅಭಿಯಾನ ಮಹಿಳೆಯರ ಮಾನ ಉಳಿಸಿದೆ,
ಪ್ರೇಮಾ ದೊಡ್ಡಯ್ಯ, ಹೆಸರೂರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.