ಗಂಗಾವತಿ: ಪ್ರತಿ ಭಾನುವಾರ ತರಕಾರಿ ವ್ಯಾಪಾರ ವಹಿವಾಟು ನಡೆಯುವ ಇಲ್ಲಿನ ಸಂತೆ ಬೈಲು ಪ್ರದೇಶದ ಇಡೀ ವಾರದ ಮಾರುಕಟ್ಟೆ (ವೀಕ್ಲಿ ಮಾರ್ಕೆಟ್) ಸತತ ಸುರಿದ ಮಳೆಯಿಂದಾಗಿ ಕೊಚ್ಚೆ ಹಿಡಿದು ಗಬ್ಬೆದ್ದು ದುರ್ನಾತದಿಂದ ನಾರುತ್ತಿದೆ.
ತುಂತುರು ಹನಿ ಸುರಿದರೆ ಸಾಕು ಇಡೀ ಮಾರುಕಟ್ಟೆ ಕಾಲಿಡಲಾಗದ ಗಿಜಿಗಿಜಿ ಎನ್ನುತ್ತಿರುತ್ತದೆ. ಇನ್ನು ಜಡಿ ಮಳೆ ಸುರಿದರಂತೂ ಮುಗಿಯಿತು ಕತೆ. ಸಾರ್ವಜನಿಕರು ತಿಪ್ಪೆಯಂತ ರಸ್ತೆಗಳಲ್ಲಿ ನಿಂತು ತರಕಾರಿ ಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ.
ತರಕಾರಿ ಮಾರಾಟದ ಬಳಿಕ ಅಳಿದುಳಿದ ತ್ಯಾಜ್ಯ ವಿಲೇವಾರಿಯಲ್ಲಿ ನಗರಸಭೆ ವಹಿಸುತ್ತಿರುವ ನಿರ್ಲಕ್ಷ್ಯದಿಂದಾಗಿ ಇಡೀ ಮಾರುಕಟ್ಟೆ ತ್ಯಾಜ್ಯ ಮತ್ತು ತಿಪ್ಪೆ ಸಂಗ್ರಹದ ಸ್ಥಳದಂತೆ ಭಾಸವಾಗುತ್ತಿದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇದೆ.
ನಿಜಕ್ಕೂ ಇದು ತರಕಾರಿ ಮಾರುಕಟ್ಟೆನಾ ಎಂಬ ಅನುಮಾನ ಮೊದಲ ಬಾರಿಗೆ ಕಾಲಿಡುವವರಿಗೆ ಕಾಡುತ್ತದೆ. ತರಕಾರಿ ಮಾರಾಟಗಾರರು ಪ್ರತಿ ವಾರ ನಗರಸಭೆಗೆ ತೆರಿಗೆ ಕಟ್ಟುತ್ತಾರೆ. ಆದರೆ ಸೂಕ್ತ ಸೌಲಭ್ಯ ಮಾತ್ರ ನೀಡುತ್ತಿಲ್ಲ ಎಂದು ವರ್ತಕ ರಾಜಾಸಾಬ ಮಕಾನವಾಲೆ ದೂರಿದ್ದಾರೆ.
ಸಾಕಾಲಕ್ಕೆ ವಿಲೇವಾರಿಯಾಗದ ತರಕಾರಿ ತ್ಯಾಜ್ಯ ಸಂಗ್ರಹಗೊಂಡು ಸಾಂಕ್ರಾಮಿಕ ರೋಗರುಜ್ಜೀನ ಹರಡುವ ಭಿತಿ ಎದುರಾಗುತ್ತದೆ. ಬಿದ್ದ ಮಳೆ ನೀರು ಹರಿದು ಹೋಗಲು ಸೂಕ್ತ ಅವಕಾಶವಿಲ್ಲದೆ ತ್ಯಾಜ್ಯದೊಂದಿಗೆ ಸೇರಿ ದುರ್ನಾತ ಬೀರುತ್ತಿದೆ.
ವಾರದ ಮಾರುಕಟ್ಟೆ ಸುತ್ತಲೂ ಇರುವ ನಿವಾಸಿಗಳಿಗೆ ಈಗ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಆತಂಕ ಎದುರಾಗಿದೆ. ನಗರಸಭೆಯಲ್ಲಿ ನೈರ್ಮಲ್ಯ ನಿರೀಕ್ಷಕರು ಇದ್ದು ಇಲ್ಲದಂತಾಗಿದ್ದಾರೆ. ಒಮ್ಮೆಯೂ ಇತ್ತ ಕಣ್ಣು ಹಾಕಿಲ್ಲ ಎಂದು ವರ್ತಕ ಅಮೀನಸಾಬ ಆರೋಪಿಸಿದ್ದಾರೆ.
ಇದು ಒಂದು ದಿನದ ಕತೆಯಲ್ಲ. ಮಳೆ ಸುರಿದಾಗಲೆಲ್ಲಾ ವ್ಯಾಪರಿಗಳು ವಾರದ ಮಾರುಕಟ್ಟೆಯಲ್ಲಿ ತಿಪ್ಪೆಯಂತಾಗುವ ರಸ್ತೆಗಳಲ್ಲಿ ಕುಳಿತು ವ್ಯಾಪಾರ ಮಾಡುತ್ತಾರೆ. ಬೇರೆ ದಾರಿ ಕಾಣದ ಸಾರ್ವಜನಿಕರು ದುರ್ನಾತದ ಮಧ್ಯೆಯೆ ತರಕಾರಿ ಕೊಳ್ಳಬೇಕಾದ ಸ್ಥಿತಿ ಉಂಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.