ಕೊಪ್ಪಳ: ರಾಜ್ಯವನ್ನು ಗುಡಿಸಲು ಮುಕ್ತ ಮಾಡುವುದು ಖಚಿತ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು. ನಗರದ ದೇವರಾಜ್ ಅರಸು ಕಾಲೊನಿಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತಿ ಅಧಿಕಾರಿ ಹಾಗೂ ಸಿಬ್ಬಂದಿಗೆ ₹ 2.25 ಕೋಟಿ ವೆಚ್ಚದ ವಸತಿಗೃಹ, ಕರ್ನಾಟಕ ಕೊಳಗೇರಿ ನಿವಾಸಿಗಳಿಗೆ ‘ಸರ್ವರಿಗೂ ಸೂರು’ ಯೋಜನೆ ಅಡಿಯಲ್ಲಿ ₹ 15.75 ಕೋಟಿ ವೆಚ್ಚದ 375 ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
'ನುಡಿದಂತೆ ನಡೆದಿರುವ ನಮ್ಮ ಸರ್ಕಾರ ಜನರ ಆಶೋತ್ತರಗಳನ್ನು ಹಂತ ಹಂತವಾಗಿ ಈಡೇರಿಸುತ್ತಿದೆ. ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನರಿಗೆ 15 ಲಕ್ಷ ಮನೆಗಳ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದು ಅದರ ಅನುಗುಣವಾಗಿ ಕಾರ್ಯ ಪ್ರಾರಂಭಗೊಂಡಿವೆ’ ಎಂದು ಹೇಳಿದರು.]
‘ಇದೇ 30ರಂದು ನಗರದ ಮುಖ್ಯ ರಸ್ತೆಯಾದ ಬಸವೇಶ್ವರ ವೃತ್ತದಿಂದ ಗಡಿಯಾರಕಂಬದ ಮಾರ್ಗವಾಗಿ ಸಿಂದೋಗಿ ರಸ್ತೆಯ ಕಾಮಗಾರಿಯ ಭೂಮಿಪೂಜೆ ನೆರವೇರಿಸಲಾಗುವುದು. ಚುನಾವಣಾ ಪೂರ್ವದಲ್ಲಿ ನಾನು ಕ್ಷೇತ್ರದ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇನೆ. ಕ್ಷೇತ್ರದ ಜನತೆ ಬರುವ ಚುನಾವಣೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಕಾಂಗ್ರೆಸ್ ಅಭ್ಯರ್ಥಿಯಾದ ನನ್ನನ್ನು ಮತ್ತೆ ಬೆಂಬಲಿಸಲಿದ್ದಾರೆ' ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ನಗರಸಭಾ ಅಧ್ಯಕ್ಷ ಮಹೇಂದ್ರ ಛೋಪ್ರಾ, ತಾ.ಪಂ.ಅಧ್ಯಕ್ಷ ಬಾಲಚಂದ್ರನ್, ಎಪಿಎಂಸಿ ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ, ಗ್ರಾ.ಪಂ.ಅಧ್ಯಕ್ಷ ಯಮನೂರಪ್ಪ ನಾಯಕ, ನಗರಸಭಾ ಸದಸ್ಯರಾದ ಅಮ್ಜದ್ ಪಟೇಲ್, ಸಲೀಂ ಸಾಬ್, ಶರಣಪ್ಪ ಚಂದನಕಟ್ಟಿ, ಮಲ್ಲಪ್ಪ ಕವಲೂರ, ಸರಿತಾ ಸುಧಾಕರ, ಖಾಜಾವಲಿ ಬನ್ನಿಕೊಪ್ಪ, ಮುಖಂಡರಾದ ಭಾಷುಸಾಬ ಖತೀಬ್, ಇಬ್ರಾಹಿಂ ಅಡ್ಡೆವಾಲೆ, ಗುರುರಾಜ ಹಲಗೇರಿ, ಕುರುಗೋಡ ರವಿ, ಮಾನ್ವಿ ಪಾಷಾ, ಗವಿಸ್ವಾಮಿ, ಹುಸೇನ ಪೀರ, ಅಶೋಕ ಕಂಬಳಿ, ಅರುಣ ಶೆಟ್ಟಿ, ಜಾಫರ ತಟ್ಟಿ, ಚನ್ನಮ್ಮ, ಸಲ್ಲಾವುದ್ದಿನ ಸಿದ್ದಿಕಿ, ಮುನೀರ ಕೊತ್ವಾಲ, ಉಮಾಜನಾದ್ರಿ, ಶೀತಲ ಪಾಟೀಲ, ನಿಂಗಪ್ಪ, ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.