ಗಂಗಾವತಿ: ಹಿಂದೆ ಬಿಜೆಪಿ ಆಡಳಿತ ಹಾಗೂ ಈಗಿನ ಕಾಂಗ್ರೆಸ್ ಆಡಳಿತದಲ್ಲಿ ಎರಡೆರಡು ಬಾರಿ ಸಚಿವರಾಗುವ ಅವಕಾಶ, ಅಧಿಕಾರ ಸಿಕ್ಕರೂ ಸಚಿವ ಶಿವರಾಜ ತಂಗಡಗಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ ಮಾಡಿಲ್ಲ ಎಂದು ಸಂಸದ ಕರಡಿ ಸಂಗಣ್ಣ ಆರೋಪಿಸಿದರು.
ಕನಕಗಿರಿ ಜಿಲ್ಲಾ ಪಂಚಾಯಿತಿಯ ಉಪ ಚುನಾವಣೆ ಅಂಗವಾಗಿ ತಾಲ್ಲೂಕಿನ ಆಗೋಲಿ, ಹಂಪಸದುರ್ಗ, ವಿಠಲಾಪುರ ಗ್ರಾಮಗಳಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ಡಾ. ಡಿ.ಎ. ಅರವಟಗಿ ಮಠ ಅವರ ಪರವಾಗಿ ಪ್ರಚಾರ ನಡೆಸಿದ ಸಂಸದ, ಸಚಿವರ ವಿರುದ್ಧ ವಾಗ್ದಾಳಿ ನಡೆಸಿದರು.
ಒಬ್ಬ ವ್ಯಕ್ತಿಯನ್ನು ಜನ ವಿಶ್ವಾಸವಿಟ್ಟು ಒಂದು ಕ್ಷೇತ್ರ ದಿಂದ ಸತತ ಎರಡು ಬಾರಿ ಆಯ್ಕೆ ಮಾಡಿದ ಬಳಿಕ ಎರಡು ಬಾರಿ ಸಚಿವಸ್ಥಾನ ದೊರೆತರೆ ಆ ಕ್ಷೇತ್ರವನ್ನು ರಾಜ್ಯಕ್ಕೆ ಮಾದರಿ ಮಾಡುವ ಎಲ್ಲ ಅವಕಾಶಗಳಿದ್ದರೂ ಸಚಿವ ತಂಗಡಗಿ ಉದ್ದೇಶ ಪೂರ್ವಕವಾಗಿಯೇ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಿಲ್ಲ.
ಮತದಾರ ಇಟ್ಟ ಭರವಸೆಯನ್ನು ನೀರುಪಾಲು ಮಾಡಿರುವ ಕಾಂಗ್ರೆಸ್ ಹಾಗೂ ಸಚಿವರನ್ನು ಅಧಿಕಾರದಿಂದ ಕೆಳಗಿಳಿಸಬೇಕಾದರೆ ಹಂತಹಂತವಾಗಿ ಎದುರಾಗುವ ಚುನಾವಣೆಯಲ್ಲಿ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಬೇಕು. ಆ ಮೂಲಕ ಪಾಠ ಕಲಿಸಬೇಕು ಎಂದು ಸಂಸದ ಕರೆ ನೀಡಿದರು.
ಮಾಜಿ ಸಂಸದ ಎಸ್. ಶಿವರಾಮಗೌಡ, ಮಾಜಿ ಶಾಸಕ ಪರಣ್ಣ ಮುನವಳ್ಳಿ , ಪಕ್ಷದ ಜಿಲ್ಲಾ ಮುಖಂಡ ಕೊಲ್ಲಾ ಶೇಷಗಿರಿರಾವ್, ಕನಕಗಿರಿ ಬ್ಲಾಕ್ ಅಧ್ಯಕ್ಷ ಕೆ. ಸತ್ಯನಾರಾಯಣ ಮಾತನಾಡಿದರು, ಪಕ್ಷದ ಪ್ರಮುಖರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.