ಕೊಪ್ಪಳ: ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಹಿಳಾ ಹೋರಾಟಗಾರ್ತಿ ವಾಣಿ ಪೆರಿಯೋಡಿ ಹೇಳಿದರು. ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ಜೀವಯಾನ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅರಿವಿನ ಪಯಣ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೌರ್ಜನ್ಯ ಪ್ರಕರಣಗಳನ್ನು ಹೆಣ್ಣುಮಕ್ಕಳು ಮರ್ಯಾದೆಗೆ ಅಂಜಿ ಮುಚ್ಚಿಡುತ್ತಾರೆ. ಇನ್ನು ಕೆಲವರು ಸಹಿಸಿಕೊಳ್ಳುತ್ತಾರೆ. ಇಂಥ ಘಟನೆಗಳನ್ನು ತಮ್ಮ ಆಪ್ತರೊಂದಿಗೆ ಹೇಳಿಕೊಳ್ಳಬೇಕು. ಆಗಲಾದರೂ ಪ್ರತಿರೋಧದ ಧ್ವನಿ ಬೆಳೆಯುತ್ತದೆ. ಕಾನೂನು ಮೂಲಕ ಮಾತ್ರ ಅಲ್ಲ. ಸರಳವಾದ ರೀತಿಯಲ್ಲೂ ಪ್ರತಿಭಟನೆ ನಡೆಸಬೇಕು. ಹೀಗಾದಾಗ ಮಾತ್ರ ಅವರಿಗೆ ಪಾಠ ಕಲಿಸಬಹುದು. ಸಮಾಜದ ಮನಸ್ಥಿತಿ ಬದಲಾಯಿಸಬಹುದು ಎಂದು ಹೇಳಿದರು.
'ಅರಿವಿನ ಪಯಣ' ಪುಸ್ತಕ ಬಿಡುಗಡೆ ನಡೆಯಿತು. 'ನೀಲಿ ರಿಬ್ಬನ್' ಏಕವ್ಯಕ್ತಿ ನಾಟಕ ಪ್ರದರ್ಶನ ಮಾಡಲಾಯಿತು. ಜ್ಯೋತಿ ಗೊಂಡಬಾಳ, ಅಶ್ವಿನಿ ಆರೇರ್ ಮಾತನಾಡಿದರು. ಪ್ರಾಂಶುಪಾಲ ಸದಾಶಿವ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಿಸ್ತಾರ್ ಸಂಸ್ಥೆಯ ಆಶಾ ಇದ್ದರು. ಸರೋಜಾ ಬಾಕಳೆ ಸ್ವಾಗತಿಸಿದರು. ಕೆವಿಎಸ್ ತಂಡದವರು ಮಹಿಳಾ ಜಾಗೃತಿಯ ಗೀತೆ ಹಾಡಿದರು. ಜೀವಯಾನ ಬಳಗದ ಎಚ್.ವಿ.ರಾಜಾಬಕ್ಷಿ ವಂದಿಸಿದರು.
* *
ದೌರ್ಜನ್ಯ ಪ್ರಕರಣಗಳನ್ನು ಮುಚ್ಚಿಡುವುದು ಸಲ್ಲದು. ಆಪ್ತರೊಂದಿಗೆ ಹೇಳಿಕೊಳ್ಳುವುದು ಒಳ್ಳೆಯದು.
ವಾಣಿ ಪೆರಿಯೋಡಿ, ಮಹಿಳಾ ಹೋರಾಟಗಾರ್ತಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.