ಕೊಪ್ಪಳ: ನೀರು ಮಾನವನಿಗೆ ಅಗತ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ನೀರು ಜಾಗತಿಕ ಸಮಸ್ಯೆಯಾಗುತ್ತಿದೆ ಎಂದು ಗವಿಮಠದ ಗವಿಸಿದ್ಧೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಅವರು ಸಮೀಪದ ಭಾಗ್ಯನಗರದ ಕೀರ್ತಿ ಕಾಲೋನಿಯಲ್ಲಿ ಈಚೆಗೆ ಡಾ.ವಾಟರ್ ಹೆಲ್ತ್ ಪ್ರೈ. ಇಂಡಿಯಾ ಎಂಬ ಸಂಸ್ಥೆಯು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಅಳವಡಿಸಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಹ ನೀರಿಗಾಗಿ ಹೋರಾಟ ನಡೆಯುತ್ತಿವೆ. ಇದು ಜಿಲ್ಲೆಯಲ್ಲಿ ನೀರಿನ ಅಭಾವ ಇರುವುದನ್ನು ತೋರುತ್ತದೆ. ಆದರೆ, ನೀರಿನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡುವುದು ಹಾಗೂ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಡಾ.ವಾಟರ್ ಹೆಲ್ತ್ನಂತಹ ಸಂಸ್ಥೆಗಳು ಶ್ರಮಿಸುತ್ತಿರುವುದು ಉತ್ತಮ ಕಾರ್ಯ ಎಂದು ಬಣ್ಣಿಸಿದರು.
20 ಲೀ. ನೀರಿಗೆ 7 ರೂಪಾಯಿ ದುಬಾರಿಯೇನಲ್ಲ. ಇವತ್ತಿನ ದಿನಮಾನಗಳಲ್ಲಿ 7 ರೂಪಾಯಿಗೆ ಚಾಕಲೇಟ್ ಕೂಡಾ ಬರುವುದಿಲ್ಲ. ಈ ಹಣಕ್ಕೆ 20 ಲೀ. ಶುದ್ಧ ನೀರು ಸಿಗುವುದು ಸುಲಭದ ಮಾತಲ್ಲ ಎಂದು ಅಭಿಪ್ರಾಯಪಟ್ಟರು.
ಭಾಗ್ಯನಗರ ಗ್ರಾಪಂ ಅಧ್ಯಕ್ಷೆ ಲಕ್ಷ್ಮಿಬಾಯಿ ಕಟ್ಟಿಮನಿ, ಸದಸ್ಯ ಸೋಮಲಿಂಗಪ್ಪ ಮೆಣಸಿನಕಾಯಿ, ಜಿಪಂ ಸದಸ್ಯೆ ವನಿತಾ ಗಡಾದ, ತಾಪಂ ಸದಸ್ಯ ದಾನಪ್ಪ ಕವಲೂರು, ಶ್ರೀನಿವಾಸ ಹ್ಯಾಟಿ, ಯುವ ಮುಖಂಡ ಗಿರೀಶ ಪಾನಘಂಟಿ, ಪಿಡಿಒ ಮಹೇಶ ಸಜ್ಜನ, ವಾಟರ್ ಹೆಲ್ತ್ ಸಂಸ್ಥೆಯ ಅನಂತ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.